Tirupati laddu row | ದೇವರನ್ನು ರಾಜಕೀಯದಿಂದ ದೂರವಿಡಿ‌ ಎಂದ ಸುಪ್ರೀಂ ಕೋರ್ಟ್; ಹೇಳಿಕೆಗೆ ಬದ್ಧ ಎಂದ ಟಿಡಿಪಿ

Update: 2024-09-30 09:37 GMT

ʻಕನಿಷ್ಠ ಪಕ್ಷ ದೇವರನ್ನಾದರೂ ರಾಜಕೀಯದಿಂದ ದೂರವಿಡಬೇಕು. ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪವನ್ನು ಬಳಸಲಾಗಿದೆ ಎಂಬುದಕ್ಕೆ ಪುರಾವೆ ಏನು?ʼ ಎಂದು ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್ 30) ಪ್ರಶ್ನಿಸಿದೆ.

ಈ ನಡುವೆ ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಹೇಳಿಕೆಗೆ ಬದ್ಧ ಎಂದು ಪ್ರತಿಕ್ರಿಯಿಸಿದೆ ಹಾಗೂ ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಇಂಥ ಹೇಯ ಆರೋಪ ಮಾಡಲಾಗುತ್ತಿದೆ  ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿದೆ

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠ, ಈ ವಿಷಯದ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಿರುವಾಗ ಬಹಿರಂಗ ಹೇಳಿಕೆ ನೀಡುವ ಅಗತ್ಯವೇನಿದೆ? ಎಂದು ಕೇಳಿದೆ.ʻಕಲಬೆರಕೆ ಸಾಬೀತುಪಡಿಸುವ ತನಿಖಾ ತಂಡದ ವರದಿಗೆ ಕಾಯದೆ ನಾಯ್ಡು ಅವರು ಈ ವಿಷಯವನ್ನು ಏಕೆ ಬಹಿರಂಗಗೊಳಿಸಿದರು?,ʼ ಎಂದು ಪ್ರಶ್ನಿಸಿತು.

ʻಕನಿಷ್ಠ ದೇವರುಗಳನ್ನು ರಾಜಕೀಯದಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ,ʼ ಎಂದು ಪೀಠ ಹೇಳಿತು. ಸೆಪ್ಟೆಂಬರ್ 25 ರಂದು ಎಫ್‌ಐಆರ್ ದಾಖಲು, ಸೆಪ್ಟೆಂಬರ್ 26 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದರೂ, ಮುಖ್ಯಮಂತ್ರಿ ಸೆಪ್ಟೆಂಬರ್ 18 ರಂದು ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ʻಉನ್ನತ ಸಾಂವಿಧಾನಿಕ ಅಧಿಕಾರಿಗಳು ಸಾರ್ವಜನಿಕವಾಗಿ ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಹ ಹೇಳಿಕೆ ನೀಡುವುದು ಸೂಕ್ತವಲ್ಲ,ʼ ಎಂದು ಪೀಠ ಹೇಳಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ʻಇದು ನಂಬಿಕೆಗೆ ಸಂಬಂಧಿಸಿದ ವಿಷಯ. ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪವನ್ನು ಬಳಸಿದರೆ ಅದು ಸ್ವೀಕಾರಾರ್ಹವಲ್ಲ,ʼ ಎಂದು ನ್ಯಾಯಪೀಠಕ್ಕೆ ತಿಳಿಸಿದರು. 

ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿ‌ದ್ದು, ಅದಕ್ಕೆ ಪುರಾವೆ ಕೇಳಿದೆ. ʻಉನ್ನತ ಸ್ಥಾನದಲ್ಲಿರುವ ಸಾಂವಿಧಾನಿಕ ಪದಾಧಿಕಾರಿಗಳು ಸಾರ್ವಜನಿಕವಾಗಿ ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಹ ಹೇಳಿಕೆ ನೀಡುವುದು ಸೂಕ್ತವಲ್ಲʼಎಂದು ಪೀಠ ಹೇಳಿದೆ.

ಟಿಡಿಪಿ ಪ್ರತಿಕ್ರಿಯೆ

ತಿರುಪತಿ ದೇವಸ್ಥಾನದಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ಆರೋಪ ಮಾಡಿರುವ ಸಮಯವನ್ನು ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್ 30) ಪ್ರಶ್ನಿಸಿದ ಬಳಿಕ, ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಹೇಳಿಕೆಗೆ ಬದ್ಧ ಎಂದು ಪ್ರತಿಕ್ರಿಯಿಸಿದೆ.

ಟಿಡಿಪಿ ಪ್ರತಿಕ್ರಿಯೆ: ಸುಪ್ರೀಂ ಕೋರ್ಟ್‌ನ ಟೀಕೆಗೆ ಪ್ರತಿಕ್ರಿಯಿಸಿರುವ ಟಿಡಿಪಿ ರಾಷ್ಟ್ರೀಯ ವಕ್ತಾರ ಕೆ. ಪಟ್ಟಾಬಿ ರಾಮನ್, ʻನಮ್ಮ ಹೇಳಿಕೆಗಳಿಗೆ ಬದ್ಧರಾಗಿದ್ದೇವೆ. ತಿರುಪತಿ ಲಡ್ಡು ತಯಾರಿಸಲು ಕಲಬೆರಕೆ ತುಪ್ಪ ಬಳಸಲಾಗುತ್ತಿತ್ತು. ಕೇಂದ್ರದಿಂದ ತನಿಖೆಯ ಅಗತ್ಯವಿದೆಯೇ ಎಂದು ಸುಪ್ರೀಂ ಕೋರ್ಟ್‌ ಕೇಳಿರುವುದನ್ನು ಸ್ವಾಗತಿಸುತ್ತೇವೆ. ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಎಂಟು ಟ್ಯಾಂಕರ್‌ಗಳಲ್ಲಿ ಟಿಟಿಡಿಗೆ ತುಪ್ಪ ಪೂರೈಸಿದೆ,ʼ ಎಂದರು.

ʻಲಡ್ಡುಗಳ ವಾಸನೆ ಮತ್ತು ಗುಣಮಟ್ಟದ ಬಗ್ಗೆ ಭಕ್ತರು ದೂರು ನೀಡಿದ ನಂತರ, ಉಳಿದ ನಾಲ್ಕು (ಎಂಟು) ಟ್ಯಾಂಕರ್‌ಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ ಕಲಬೆರಕೆಯಾಗಿದೆ ಎಂದು ವರದಿ ಬಂದಿದೆ,ʼ ಎಂದು ರಾಮನ್ ಹೇಳಿದರು.

ʻಪ್ರತಿ ಕೆಜಿಗೆ 319 ರೂ.ದರ ನಿಗದಿಯಾಗಿತ್ತು. ಮೊದಲ ನಾಲ್ಕು ಟ್ಯಾಂಕರ್‌ಗಳ ತುಪ್ಪ ಶುದ್ಧವಾಗಿದೆ ಮತ್ತು ಉಳಿದ ನಾಲ್ಕು ಟ್ಯಾಂಕರ್‌ಗಳು ಕಲಬೆರಕೆಯಾಗಿದೆ ಎಂದು ಹೇಳಲಾಗುವುದಿಲ್ಲ. ನಾವು ಕಳುಹಿಸಿದ ತುಪ್ಪದ ಮಾದರಿಗಳ ವರದಿಯನ್ನು ಎನ್‌ಡಿಡಿಬಿ ನೀಡಿದೆ. ಆಂಧ್ರಪ್ರದೇಶ ಸರ್ಕಾರ ಎಲ್ಲಾ ವರದಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ,ʼ ಎಂದು ಹೇಳಿದರು.

ವೈಎಸ್‌ಆರ್‌ಸಿ ಪ್ರತಿಕ್ರಿಯೆ

ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಇಂಥ ಹೇಯ ಆರೋಪ ಮಾಡಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿದೆ

ಪ್ರಕರಣವೇನು?

ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಿದ ಆರೋಪ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಈ ತಿಂಗಳ ಆರಂಭದಲ್ಲಿ ಹೇಳಿದ್ದರು. ಇದು ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಯಿತು.


Tags:    

Similar News