ಮದುವೆ ಮುರಿದು ಬಿದ್ದಿದ್ದು ನಿಜ; ಮೌನ ಮುರಿದ ಸ್ಮೃತಿ ಮಂಧಾನ, ಊಹಾಪೋಹಗಳಿಗೆ ತೆರೆ
ವಿಷಯವನ್ನು ಇಲ್ಲಿಗೆ ಮುಗಿಸಲು ಇಷ್ಟಪಡುತ್ತೇನೆ ಎಂದಿರುವ ಅವರು, ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮತ್ತು ಈ ಘಟನೆಯಿಂದ ಹೊರಬರಲು ಕಾಲಾವಕಾಶ ನೀಡುವಂತೆ ಸ್ಮೃತಿ ಮಂಧಾನ ಮನವಿ ಮಾಡಿದ್ದಾರೆ.
ಸ್ಮೃತಿ ಮಂಧಾನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂದೇಶ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ಅಧಿಕೃತವಾಗಿ ರದ್ದಾಗಿದೆ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಸ್ವತಃ ಸ್ಮೃತಿ ಮಂಧಾನ ಅವರೇ ತೆರೆ ಎಳೆದಿದ್ದು, ಭಾನುವಾರ (ಡಿ.7) ಇನ್ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸ್ಮೃತಿ, "ಕಳೆದ ಕೆಲವು ವಾರಗಳಿಂದ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ನಾನು ಖಾಸಗಿತನವನ್ನು ಬಯಸುವ ವ್ಯಕ್ತಿ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸ್ಪಷ್ಟನೆ ನೀಡುವುದು ಅನಿವಾರ್ಯವಾಗಿದೆ. ನಮ್ಮ ಮದುವೆ ರದ್ದಾಗಿದೆ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ," ಎಂದು ತಿಳಿಸಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಮುಗಿಸಲು ಇಷ್ಟಪಡುತ್ತೇನೆ ಎಂದಿರುವ ಅವರು, ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮತ್ತು ಈ ಘಟನೆಯಿಂದ ಹೊರಬರಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ದೇಶಕ್ಕಾಗಿ ಆಡುವುದೇ ಗುರಿ
ವೈಯಕ್ತಿಕ ಜೀವನದ ಹಿನ್ನಡೆಯ ನಡುವೆಯೂ ತಮ್ಮ ವೃತ್ತಿಜೀವನದ ಬದ್ಧತೆಯನ್ನು ಸ್ಮೃತಿ ಪುನರುಚ್ಚರಿಸಿದ್ದಾರೆ. "ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸುವುದೇ ನನ್ನ ಮೊದಲ ಆದ್ಯತೆ. ಭಾರತಕ್ಕಾಗಿ ಆಡುವುದು ಮತ್ತು ಟ್ರೋಫಿಗಳನ್ನು ಗೆಲ್ಲುವುದೇ ನನ್ನ ಗುರಿ. ನನ್ನ ಗಮನ ಯಾವಾಗಲೂ ಕ್ರಿಕೆಟ್ ಮೇಲೆಯೇ ಇರುತ್ತದೆ," ಎಂದು ಹೇಳುವ ಮೂಲಕ ವೃತ್ತಿಜೀವನದ ಕಡೆಗೆ ಗಮನ ಹರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಹಿನ್ನೆಲೆ ಏನು?
ಸ್ಮೃತಿ ಮತ್ತು ಪಲಾಶ್ ಅವರ ಮದುವೆ ಸಮಾರಂಭಗಳು ಅದ್ದೂರಿಯಾಗಿ ನಡೆಯುತ್ತಿದ್ದವು. ಆದರೆ, ಸ್ಮೃತಿ ಅವರ ತಂದೆಯ ಅನಾರೋಗ್ಯದ ಕಾರಣ ನೀಡಿ ಮದುವೆಯನ್ನು ಹಠಾತ್ ಆಗಿ ನಿಲ್ಲಿಸಲಾಗಿತ್ತು ಎಂಬ ವರದಿಗಳಿದ್ದವು. ಇದರ ಬೆನ್ನಲ್ಲೇ ಪಲಾಶ್ ಅವರ ವಿರುದ್ಧ ವಂಚನೆಯ ಆರೋಪಗಳು ಮತ್ತು ಪಿತೂರಿ ಸಿದ್ಧಾಂತಗಳು ಕೇಳಿಬಂದಿದ್ದವು. ಆದರೆ ಪಲಾಶ್ ಕುಟುಂಬ ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿತ್ತು. ಮದುವೆಗೆ ಬಂದಿದ್ದ ಸಹ ಆಟಗಾರರು ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸ್ಮೃತಿ ಅವರ ಅಧಿಕೃತ ಹೇಳಿಕೆಯೊಂದಿಗೆ ಈ ಎಲ್ಲಾ ನಾಟಕೀಯ ಬೆಳವಣಿಗೆಗೆ ತೆರೆಬಿದ್ದಿದೆ.