ಪುಟಿನ್ ಔತಣಕೂಟ: ಶಶಿ ತರೂರ್ ಮೆಚ್ಚುಗೆ, ಕಾಂಗ್ರೆಸ್ ನಾಯಕರಿಗೆ ಆಹ್ವಾನವಿಲ್ಲದಿದ್ದಕ್ಕೆ ಆಕ್ರೋಶ
ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಶಶಿ ತರೂರ್, ಇದೊಂದು ಅತ್ಯಂತ ಸೌಹಾರ್ದಯುತ ಮತ್ತು ಆಕರ್ಷಕ ಸಂಜೆ ಎಂದು ಬಣ್ಣಿಸಿದ್ದಾರೆ.
ಔತಣಕೂಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸಂಸದ ಶಶಿತರೂರ್
ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಗೌರವಾರ್ಥ ಶುಕ್ರವಾರ ರಾತ್ರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿದ್ದ ಔತಣಕೂಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಪಕ್ಷದ ಉನ್ನತ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ತರೂರ್ ಅವರ ಭೇಟಿಯ ಬಗ್ಗೆಯೂ ಪರೋಕ್ಷ ಅಸಮಾಧಾನ ಹೊರಹಾಕಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಶಶಿ ತರೂರ್, ಇದೊಂದು ಅತ್ಯಂತ ಸೌಹಾರ್ದಯುತ ಮತ್ತು ಆಕರ್ಷಕ ಸಂಜೆ ಎಂದು ಬಣ್ಣಿಸಿದ್ದಾರೆ. ರಷ್ಯಾ ನಿಯೋಗದ ಸದಸ್ಯರೊಂದಿಗೆ ನಡೆಸಿದ ಮಾತುಕತೆಯನ್ನು ತಾವು ಆನಂದಿಸಿದ್ದಾಗಿ ಅವರು ತಿಳಿಸಿದ್ದಾರೆ. ವಿಶೇಷವಾಗಿ ತಮ್ಮೊಂದಿಗೆ ಊಟಕ್ಕೆ ಕುಳಿತಿದ್ದ ರಷ್ಯಾ ಪ್ರತಿನಿಧಿಗಳೊಂದಿಗಿನ ಒಡನಾಟ ಸ್ಮರಣೀಯವಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿಯ ಅಂತಿಮ ಹಂತದಲ್ಲಿ ಈ ಔತಣಕೂಟವನ್ನು ಏರ್ಪಡಿಸಲಾಗಿತ್ತು.
ಕಾಂಗ್ರೆಸ್ ನಾಯಕರಿಗೆ ಆಹ್ವಾನವಿಲ್ಲ: ಪಕ್ಷದ ಆಕ್ರೋಶ
ತರೂರ್ ಅವರ ಮಾತುಗಳು ಸೌಹಾರ್ದಯುತವಾಗಿದ್ದರೆ, ಅವರ ಪಕ್ಷದ ನಿಲುವು ಮಾತ್ರ ಕಠಿಣವಾಗಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಔತಣಕೂಟಕ್ಕೆ ಆಹ್ವಾನ ನೀಡದಿರುವುದಕ್ಕೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿರೋಧ ಪಕ್ಷದ ನಾಯಕರನ್ನು ಕಡೆಗಣಿಸುವ ಮೂಲಕ ಮೋದಿ ಸರ್ಕಾರ ಶಿಷ್ಟಾಚಾರದ ಎಲ್ಲ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಗಂಭೀರ ಆರೋಪ ಮಾಡಿದ್ದಾರೆ.
ತರೂರ್ ನಡೆಗೆ 'ಆತ್ಮಸಾಕ್ಷಿ'ಯ ಪ್ರಶ್ನೆ
ಇದೇ ವೇಳೆ, ಶಶಿ ತರೂರ್ ಔತಣಕೂಟದಲ್ಲಿ ಭಾಗವಹಿಸಿದ ಬಗ್ಗೆ ಪವನ್ ಖೇರಾ ಪರೋಕ್ಷವಾಗಿ ಟೀಕಿಸಿದ್ದಾರೆ. ಪಕ್ಷದ ಅಗ್ರ ನಾಯಕರಿಗೆ ಆಹ್ವಾನವಿಲ್ಲದಿದ್ದರೂ, ಆಹ್ವಾನ ಪಡೆದ ಇತರರು ಅಲ್ಲಿಗೆ ಹೋಗುವ ಮುನ್ನ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿತ್ತು ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಆಹ್ವಾನ ನೀಡದಿರುವುದು ಸರಿಯಲ್ಲ, ಆದರೆ ಅಂತಹ ಆಹ್ವಾನವನ್ನು ಸ್ವೀಕರಿಸುವವರ ನಡೆಯೂ ಪ್ರಶ್ನಾರ್ಹ ಎಂದು ಖೇರಾ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಶಿ ತರೂರ್, ಹಿಂದೆಲ್ಲಾ ಇಂತಹ ಅಧಿಕೃತ ಕಾರ್ಯಕ್ರಮಗಳಿಗೆ ಸಮಿತಿಯ ಅಧ್ಯಕ್ಷರನ್ನು ಆಹ್ವಾನಿಸುವ ಸಂಪ್ರದಾಯವಿತ್ತು ಎಂದು ಸ್ಮರಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಆ ಪದ್ಧತಿ ನಿಂತುಹೋಗಿದೆ ಎಂದು ಹೇಳುವ ಮೂಲಕ, ಶಿಷ್ಟಾಚಾರದಲ್ಲಿ ಬದಲಾವಣೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ರಾಹುಲ್ ಗಾಂಧಿ ವಾಗ್ದಾಳಿ
ಪುಟಿನ್ ಭೇಟಿಗೂ ಮುನ್ನ ಮಾತನಾಡಿದ್ದ ರಾಹುಲ್ ಗಾಂಧಿ, ವಿದೇಶಿ ಗಣ್ಯರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗದಂತೆ ಸರ್ಕಾರ ತಡೆಯುತ್ತಿದೆ ಎಂದು ಆರೋಪಿಸಿದ್ದರು. ಸರ್ಕಾರದ ಅಭದ್ರತೆಯೇ ಇದಕ್ಕೆ ಕಾರಣ ಎಂದು ಅವರು ಟೀಕಿಸಿದ್ದರು. ಭಾರತ ಮತ್ತು ರಷ್ಯಾ ನಡುವಿನ 25 ವರ್ಷಗಳ ವ್ಯೂಹಾತ್ಮಕ ಪಾಲುದಾರಿಕೆಯ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿತ್ತು.