ದರ್ಶನ್ ಜಾಮೀನು ರದ್ದು ಅರ್ಜಿ ವಿಚಾರಣೆ: ಗುರುವಾರಕ್ಕೆ ಮುಂದೂಡಿಕೆ
ದರ್ಶನ್ ಅವರ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿಕೆ ಮಾಡಿದೆ.;
ನಟ ದರ್ಶನ್
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿಕೆ ಮಾಡಿದೆ.
ವಕೀಲ ಕಪಿಲ್ ಸಿಬಲ್ ಬದಲಿಗೆ ಸಿದ್ದಾರ್ಥ್ ದವೆ ವಾದ ಮಂಡಿಸಲು ಕೋರ್ಟ್ಗೆ ಹಾಜರಿದ್ದರು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ, ಸಿದ್ದಾರ್ಥ್ ದವೆ ಅವರು ವಾದ ಮಾಡಲು ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಗುರುವಾರದವರೆಗೆ ಕೋರ್ಟ್, ಸಮಯ ನೀಡಿದೆ. ಈಗಾಗಲೇ ಸರ್ಕಾರಿ ಪರ ವಕೀಲರ ವಾದ ಮುಗಿದಿದ್ದು, ದರ್ಶನ್ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು.
ಸುಪ್ರೀಂ ಕೋರ್ಟ್ನಲ್ಲಿ ಕಳೆದ ವಾರ ನಡೆದ ವಿಚಾರಣೆ ವೇಳೆ, ಹೈಕೋರ್ಟ್ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ನಮಗೆ ಪೊಲೀಸರು ನೀಡಿರುವ ಸಾಕ್ಷ್ಯಗಳು ತೃಪ್ತಿ ತಂದಿವೆ. ಆದರೆ ಜಾಮೀನು ನೀಡಲು ಹೈಕೋರ್ಟ್ ನೀಡಿರುವ ಕಾರಣಗಳು ಸಮಂಜಸವಾಗಿಲ್ಲ. ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣುತ್ತಿದೆ. ಬೇಲ್ ನೀಡಲು ಯಾವುದಾದರೂ ಒಂದು ಅಂಶ ಸಿಗಲಿ ಎನ್ನುವ ಚಡಪಡಿಕೆ ಕಾಣುತ್ತಿದೆ. ಈ ವಿಷಯದಲ್ಲಿ ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ. ಆದ್ದರಿಂದ ನಟ ದರ್ಶನ್ ಅವರ ಜಾಮೀನಿನ ವಿಷಯದಲ್ಲಿ ನಾವೇಕೆ ಮಧ್ಯಪ್ರವೇಶ ಮಾಡಬಾರದೆಂದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ದರ್ಶನ್ ಮತ್ತು ಇತರ ಆರೋಪಿಗಳಿಗೆ ಯಾವುದೇ ಗಂಭೀರ ಅಪರಾಧ ಇತಿಹಾಸವಿಲ್ಲ ಎಂಬ ಅಂಶವನ್ನೂ ನ್ಯಾಯಮೂರ್ತಿಗಳು ಜಾಮೀನು ನೀಡಲು ಪರಿಗಣಿಸಿದ್ದರು. ಜಾಮೀನು ಪಡೆದಿರುವ ಆರೋಪಿಗಳು ತಲಾ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿಗಳನ್ನು ನೀಡಿ ಜಾಮೀನು ಕೊಟ್ಟಿತ್ತು.