ಐಷಾರಾಮಿ ಕಾರು ಕಳ್ಳಸಾಗಣೆ| ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ಇಡಿ ದಾಳಿ
ʻಆಪರೇಶನ್ ನುಂಖೋರ್ʼ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಾಚರಣೆಯು ಭೂತಾನ್ ಮೂಲದ ಐಷಾರಾಮಿ ಕಾರುಗಳ ಕಳ್ಳಸಾಗಣೆ ಪ್ರಕರಣದ ತನಿಖೆಯ ಭಾಗವಾಗಿದೆ.
ದುಲ್ಕರ್ ಸಲ್ಮಾನ್
ಮಲಯಾಳಂ ಚಿತ್ರರಂಗದ ಮೇರು ನಟರಾದ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಿತ್ ಚಕ್ಕಲಕಲ್ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ʻಆಪರೇಷನ್ ನುಂಖೋರ್ʼ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಾಚರಣೆಯು ಭೂತಾನ್ ಮೂಲದ ಐಷಾರಾಮಿ ಕಾರುಗಳ ಕಳ್ಳಸಾಗಣೆ ಪ್ರಕರಣದ ತನಿಖೆಯ ಭಾಗವಾಗಿದೆ. ಕಸ್ಟಮ್ಸ್ ತೆರಿಗೆ ತಪ್ಪಿಸಲು ಈ ವಾಹನಗಳನ್ನು ಅಕ್ರಮವಾಗಿ ಭಾರತಕ್ಕೆ ತರಲಾಗಿದ್ದು, ನಂತರ ನಕಲಿ ದಾಖಲೆಗಳ ಮೂಲಕ ಕೇರಳದಲ್ಲಿ ಪುನಃ ನೋಂದಾಯಿಸಿ, ಹೈಪ್ರೊಫೈಲ್ ಖರೀದಿದಾರರಿಗೆ ಮಾರಾಟ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ದುಲ್ಕರ್ ಸಲ್ಮಾನ್ ಎರಡು ಕಾರುಗಳು ವಶ
ಕಸ್ಟಮ್ಸ್ ಅಧಿಕಾರಿಗಳು ರಾಜ್ಯದಾದ್ಯಂತ ಸುಮಾರು 30 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಕೊಚ್ಚಿ, ತೆವರಾ ಮತ್ತು ತಿರುವನಂತಪುರಂ ಪ್ರದೇಶಗಳಲ್ಲಿರುವ ನಟರ ಮನೆಗಳಿಗೆ ದಾಳಿ ನಡೆಸಲಾಗಿದೆ. ಈಗಾಗಲೇ ನಟ ದುಲ್ಕರ್ ಸಲ್ಮಾನ್ ಅವರ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ (ಅಕ್ಟೋಬರ್ 7) ಕೇರಳ ಹೈಕೋರ್ಟ್, ದುಲ್ಕರ್ ಅವರು ಕಸ್ಟಮ್ಸ್ ಕಾಯ್ದೆ, 1962ರ ಅಡಿಯಲ್ಲಿ ತೀರ್ಪು ನೀಡುವ ಪ್ರಾಧಿಕಾರಿಗಳಿಂದ ತಮ್ಮ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನ ತಾತ್ಕಾಲಿಕ ಬಿಡುಗಡೆಗಾಗಿ ಅರ್ಜಿ ಸಲ್ಲಿಸಲು ಸೂಚಿಸಿತು. ಈ ವಾಹನವನ್ನು ಕಸ್ಟಮ್ಸ್ ಅಧಿಕಾರಿಗಳು ಆಪರೇಷನ್ ನಂಖೋರ್ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದರು.
ಇಡಿ ತನಿಖೆ ಆರಂಭ
ಈ ಪ್ರಕರಣದಲ್ಲಿ ಹಣಕಾಸು ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸಲು ಇಡಿ ಮುಂದಾಗಿದೆ. ಇಡಿ ಅಧಿಕಾರಿಗಳು ನಟ ಪೃಥ್ವಿರಾಜ್ ಮತ್ತು ಅಮಿತ್ ಚಕ್ಕಳಕ್ಕಲ್ ಅವರ ಮನೆಗಳಲ್ಲಿಯೂ ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ, ಇಡಿ ಅಧಿಕಾರಿಗಳು ದುಲ್ಕರ್ ಸಲ್ಮಾನ್ ಅವರ ಚೆನ್ನೈ ನಿವಾಸದಲ್ಲಿಯೂ ದಾಳಿ ನಡೆಸಿದ್ದಾರೆ.