Valmiki Corporation Scam : ಕಾಂಗ್ರೆಸ್‌ ಸಂಸದ ತುಕಾರಾಂ,ಮೂವರು ಶಾಸಕರ ಮನೆ ಮೇಲೆ ಇಡಿ ದಾಳಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 100 ಕೋಟಿಗೂ ಹೆಚ್ಚು ನಗದನ್ನು ಅನಾಮಿಕ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿ ದುರುಪಯೋಗ ಮಾಡಿಕೊಂಡ ಅರೋಪದ ಮೇಲೆ ಇಡಿ ತನಿಖೆ ನಡಸುತ್ತಿದೆ.;

Update: 2025-06-11 04:30 GMT

ವಾಲ್ಮೀಕಿ ಅಭಿವೃದ್ದಿನಿಗಮದ ಹಣ ದುರುಪಯೋಗ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ)  ಮತ್ತೆ ತನ್ನ ದಾಳಿ ಮುಂದುವರಿಸಿದ್ದು, ಕಾಂಗ್ರೆಸ್‌ನ ಒಬ್ಬ ಸಂಸದ  ಹಾಗೂ ಮೂವರು ಶಾಸಕರ ಮನೆ, ಕಚೇರಿಗಳ ಮೇಲೆ  ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಬುಧವಾರ ಬೆಳಿಗ್ಗೆ ಬಳ್ಳಾರಿ ಸಂಸದ ಇ.ತುಕಾರಾಂ (ಸಂಡೂರಿನ ಮನೆ), ಶಾಸಕರಾದ ಕಂಪ್ಲಿಗಣೇಶ್, ನಾ.ರಾ. ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮನೆ ಮೇಲೆ ಇಡಿ ದಾಳಿ  ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ನಗದನ್ನು ಅನಾಮಿಕ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಇಡಿ ತನಿಖೆ ನಡೆಸುತ್ತಿದೆ.

ಇಷ್ಟೊಂದು ಪ್ರಮಾಣದ ಹಣವನ್ನು ಕಾಂಗ್ರೆಸ್‌  ಲೋಕಸಭೆ ಚುನಾವಣೆಗೆ  ಸಂದರ್ಭದಲ್ಲಿ ದುರ್ಬಳಕೆ ಮಾಡಲಾಗಿತ್ತು ಎಂದು ಬಿಜೆಪಿ ಆರೋಪಿಸಿತ್ತು. ಹಗರಣ ಸಂಬಂಧ ಇಡಿ ಅಧಿಕಾರಿಗಳು ಸಚಿವ ಬಿ. ನಾಗೇಂದ್ರ ಅವರನ್ನು ಬಂಧಿಸಿತ್ತು. ನಂತರ ಜಾಮೀನನ ಮೇಲೆ ಬಿಡುಗಡೆ ಆಗಿದ್ದರು. ಈ ಹಗರಣ ಹಿನ್ನಲೆ ನಾಗೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದರು.

ಶಾಸಕರ ಭವನದಲ್ಲೂ ಶೋಧ

ಬೆಂಗಳೂರಿನ ಶಾಸಕರ ಭವನದ ನಾಲ್ಕನೇ ಮಹಡಿಯಲ್ಲಿರುವ  ಮಾಜಿ ಸಚಿವ ಬಿ.ನಾಗೇಂದ್ರ ಅವರ ಕೊಠಡಿ ಸಂಖ್ಯೆ 360 ರಲ್ಲೂ ಬೆಳ್ಳಂಬೆಳ್ಳಗೆ ಇಡಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸುತ್ತಿದ್ದಾರೆ. ನಾಗೇಂದ್ರ ಅವರ ಆಪ್ತ ಸಹಾಯಕ ಗೋರ್ವಧನ್ ಮನೆ ಮೇಲೆಯೂ ದಾಳಿ ಮಾಡಿ ತಲಾಶ್ ನಡೆಸುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಶಾಸಕರ ಭವನದ ಸುತ್ತಲೂ ಸಿಆರ್ ಪಿಎಫ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ನಿಗಮದ 187 ಕೋಟಿ ರೂಪಾಯಿ ಹಣ ದುರ್ಬಳಕೆ ಸಂಬಂಧ ಸಿಐಡಿಯ ಎಸ್ಐಟಿ ತಂಡವು ತನಿಖೆ ನಡೆಸಿ 12 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.‌ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್ಎ) 2024ಜೂನ್‌ 6 ರಂದು ದೂರು ದಾಖಲಿಸಿಕೊಂಡಿತ್ತು.

ಬಳಿಕ ಸಚಿವ ಇ.ಡಿ‌.‌ನಾಗೇಂದ್ರ ಅವರನ್ನು ಬಂಧಿಸಿತ್ತು. ವಿಚಾರಣೆ ವೇಳೆ ನಿಗಮದ ಹಣವು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿಕೊಂಡಿದ್ದ ವಿಷಯ ಬೆಳಕಿಗೆ ಬಂದಿತ್ತು ಎಂದು ಇ.ಡಿ. ತನ್ನ ಚಾರ್ಜ್ ಶೀಟ್ ನಲ್ಲಿ ತಿಳಿಸಿತ್ತು.

ಲೋಕಸಭಾ ಚುನಾವಣೆಗಾಗಿ ಬಳ್ಳಾರಿ ಸಂಸದ ಹಾಗೂ ಶಾಸಕರಿಗೂ ಹಣ ಹಂಚಿಕೆಯಾಗಿತ್ತು.‌ಈ ಬಗ್ಗೆ ನಾಗೇಂದ್ರ ಪಿಎ ಗೋವಿಂದರಾಜು ಬಳಿ ಸಿಕ್ಕ ಡೈರಿಯಲ್ಲಿ ಹಣದ ವ್ಯವಹಾರ ಮಾಹಿತಿಯನ್ನು ಇ.ಡಿ‌. ಪತ್ತೆ ಹಚ್ಚಿತ್ತು.‌ಈ ನಿಟ್ಟಿನಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಂಪ್ಲಿ ಶಾಸಕ ಜೆಎನ್ ಗಣೇಶ್, ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಮನೆಗಳ‌ ಮೇಲೆ ದಾಳಿ ನಡೆಸಿ‌ ಮಹತ್ವದ ದಾಖಲಾತಿಗಾಗಿ ಶೋಧ ಕೈಗೊಂಡಿದೆ. 

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ನಿಗಮದಲ್ಲಿ ಅಕ್ರಮ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿತ್ತು. ನಿಗಮದಲ್ಲಿ ನಡೆದಿರುವ ಅಕ್ರಮ ಹಣಕಾಸು ವರ್ಗಾವಣೆಯ ಕುರಿತು ಚಂದ್ರಶೇಖರನ್‌ ಅವರು ಆರು ಪುಟಗಳ ಡೆತ್ ನೋಟ್ ಬರೆದಿಟ್ಟು 2024 ಮೇ 26ರಂದು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ನಿಗಮದ 2024-25ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟಿದ್ದ ಒಟ್ಟು 187.33 ಕೋಟಿ ಮೊತ್ತದಲ್ಲಿ 89 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ನಡೆದಿದೆ ಎಂದು ಚಂದ್ರಶೇಖರನ್‌ ಡೆತ್‌ನೋಟ್‌ನಲ್ಲಿ ನಮೂದಿಸಿದ್ದರು. ಈ ಅಕ್ರಮಕ್ಕೆ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಯೂನಿಯನ್ ಬ್ಯಾಂಕಿನ ಅಧಿಕಾರಿಗಳು ಕಾರಣ ಎಂದು ಅವರು ಹೆಸರು ಸಹಿತ ಉಲ್ಲೇಖಿಸಿದ್ದರು. ಆತ್ಮಹತ್ಯೆ ಪ್ರಕರಣದಿಂದ ಬಹುಕೋಟಿ ಹಗರಣ ಬಯಲಿಗೆ ಬಂದಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಮುಜಗರ ತಂದಿತ್ತು. 

ಹಣ ಎಲ್ಲೆಲ್ಲಿಗೆ ಎಷ್ಟೆಷ್ಟು ಹೋಗಿದೆ?

ಬಹುಕೋಟಿ ಅಕ್ರಮ ವರ್ಗಾವಣೆ ಬಯಲಾಗುತ್ತಲೇ ಎಚ್ಚೆತ್ತುಕೊಂಡಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಅಕ್ರಮವಾಗಿ ವರ್ಗಾವಣೆಯಾಗಿರುವ ಹಣದ ಬೆನ್ನು ಹತ್ತಿತ್ತು. ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ಹೈದರಾಬಾದ್ ಬಂಜಾರ ಹಿಲ್ಸ್ ನಲ್ಲಿರುವ ರತ್ನಾಕರ ಬ್ಯಾಂಕ್ ಲಿಮಿಟೆಡ್(ಆರ್ಬಿಎಲ್) ಬ್ಯಾಂಕ್ ಮುಖ್ಯಸ್ಥರಿಗೆ ಪತ್ರ ಬರೆದು ಬೆಂಗಳೂರಿನ ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಯ ನಿಗಮದ ಖಾತೆಯಿಂದ ವರ್ಗಾವಣೆಯಾಗಿರುವ ಹಣದ ಮಾಹಿತಿ ಕೋರಿದ್ದರು. 

ಆ ಪ್ರಕಾರ, ಮಾರ್ಚ್ 3-30ರ ನಡುವೆ ವಿವಿಧ ಕಂಪನಿಗಳ ಹೆಸರಿನ ಖಾತೆಗಳಿಗೆ 49.52 ಕೋಟಿ ರೂ. ವರ್ಗಾವಣೆಯಾಗಿತ್ತು. ಮಾರ್ಚ್ 30ರಂದು ವಿವಿಧ ವ್ಯಕ್ತಿಗಳ ಎಂಟು ಖಾತೆಗಳಿಗೆ 40.10 ಕೋಟಿ ರೂ. ವರ್ಗಾವಣೆಯಾಗಿತ್ತು. ಈ ಕಂಪನಿಗಳಲ್ಲಿ ಬಹುತೇಕವು ಬೆಂಗಳೂರು ಮೂಲದವೇ ಆಗಿದ್ದವು. ಕೆಲವು ಕಂಪನಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ವರ್ಗಾವಣೆ ಮಾಡಲಾಗಿದೆ. ವಾಸ್ತವವಾಗಿ ಅಂತಹ ಹೆಸರಿನ ಕಂಪನಿಗಳಿಗೂ, ಅದೇ ಹೆಸರಿನಲ್ಲಿ ತೆರೆಯಲಾಗಿರುವ ಖಾತೆಗೂ ಯಾವುದೇ ಸಂಬಂಧವೇ ಇಲ್ಲ ಎಂಬುದು ಬೆಳಕಿಗೆ ಬಂದಿತ್ತು. 

Tags:    

Similar News