ಕಂಠಮಟ್ಟ ಕುಡಿದ- ಪತ್ನಿಯ ಕಡಿದ, ತಾನೇ ಕುಣಿದ

Update: 2024-08-04 07:47 GMT

ಉಡುಪಿ: ಕುಡುಕನೊಬ್ಬ ಪತ್ನಿಯ ಕುತ್ತಿಗೆಗೆ ಕಡಿದು ಅದೇ ಕೊಠಡಿಯೊಳಗೆ ನೃತ್ಯ ಮಾಡುತ್ತಾ ವಿಕೃತಿ ಮೆರೆದಿದ್ದಾನೆ.

ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಈ ಘಟನೆ ನಡೆದಿದೆ. ಆರೋಪಿ ಲಕ್ಷ್ಮಣ ಎಂಬಾತ ಈ ಕೃತ್ಯ ಎಸಗಿದವನು. ಕತ್ತಿಯಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ಪತ್ನಿ ಅನಿತಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ದಂಪತಿ ಸೊರಬದವರು. ಕಾಶಿಮಠ ರೆಸಿಡೆನ್ಷಿಯಲ್‌ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಾಶಿಮಠದ ತೋಟ ನೋಡಿಕೊಳ್ಳುತ್ತಿದ್ದರು. ಮದ್ಯದ ಅಮಲಿನಲ್ಲಿ ಲಕ್ಷ್ಮಣ ಈ ಕೃತ್ಯ ಎಸಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅನಿತಾ ಅವರನ್ನು ಅಡುಗೆ ಮನೆಯಲ್ಲಿ ಬಿಟ್ಟು ಚಿಲಕ ಹಾಕಿದ್ದ. ಮೈಮೇಲೆ ದೈವ ಬಂದಂತೆ ವರ್ತಿಸುತ್ತಾ ನೃತ್ಯ ಮಾಡುತ್ತಿದ್ದ. ಘಟನೆ ಸ್ಥಳೀಯರ ಗಮನಕ್ಕೆ ಬಂದ ಕೂಡಲೇ ಕಿಟಕಿ ಒಡೆದು ಮನೆಯೊಳಗೆ ಪ್ರವೇಶಿಸಿ, ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆರೋಪಿಯ ಬಂಧನಕ್ಕೆ ಹರಸಾಹಸಪಟ್ಟರು. ಕೊನೆಗೂ ಸುಮಾರು ಒಂದೂವರೆ ಗಂಟೆಯ ಹೈಡ್ರಾಮಾ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿತಾ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 

ಹೇಗಿತ್ತು ಗೊತ್ತಾ ಕಾರ್ಯಾಚರಣೆ?

ಆರೋಪಿಯ ಕೈಯಲ್ಲಿ ಕತ್ತಿ ಹಿಡಿದಿದ್ದ ಕಾರಣ ಮನೆಯೊಳಗೆ ನುಗ್ಗುವುದೂ ಕಷ್ಟವಾಗಿತ್ತು. ಪೊಲೀಸರು ಆರೋಪಿಯ ಮೇಲೆ ಖಾರದ ಪುಡಿ ಎರಚಿದರು. ಅದರಿಂದಲೂ ಆತ ತಪ್ಪಿಸಿಕೊಂಡ. ಬಳಿಕ ಅಗ್ನಿಶಾಮಕ ಇಲಾಖೆಯವರು ಮತ್ತು ಪೊಲೀಸರು ಸೇರಿ ಏರ್‌ ಗನ್‌ ಮೂಲಕ ಅವನ ಮೇಲೆ ಹೊಗೆಯುಕ್ತ ಗ್ಯಾಸ್‌ ಸಿಂಪಡಿಸಿದರು. ಒಂದು ತಂಡ ಬಾಗಿಲನ್ನು ಒಡೆಯಲು ಯತ್ನಿಸಿತು. ಆರೋಪಿಯ ಗಮನ ಬಾಗಿಲಿನತ್ತ ಬರುತ್ತಿದ್ದಂತೆಯೇ, ಇನ್ನೊಂದು ತಂಡದವರು ಕಿಟಕಿಯ ಮೂಲಕ ಒಳ ನುಗ್ಗಿ ಆರೋಪಿಯನ್ನು ಹಿಡಿದುಕೊಂಡರು. ಕತ್ತಿಯನ್ನು ಕಸಿದುಕೊಂಡು ಬಂಧಿಸಿದರು. ಮತ್ತೂ ಅಮಲಿನಲ್ಲಿದ್ದ ಲಕ್ಷ್ಮಣನನ್ನು ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Tags:    

Similar News