Caste Census| ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಸ್ವೀಕಾರ; 17ರ ವಿಶೇಷ ಸಂಪುಟ ಸಭೆಯಲ್ಲಿ ವಿಸ್ತೃತ ಸಭೆ
ಸೋರಿಕೆಯಾದ ವರದಿಯಲ್ಲಿ ಸಮುದಾಯವಾರು ಒಟ್ಟು ಜನಸಂಖ್ಯೆ ಎಷ್ಟಿತ್ತು?
ಜಾತಿಗಣತಿ ವರದಿಯ ಅಂಶಗಳು ಸೋರಿಕೆಯಾದ ಬಳಿಕ ಪ್ರಬಲ ಜಾತಿಗಳು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಸೋರಿಕೆಯಾದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ- 1.08ಕೋಟಿ ಜನಸಂಖ್ಯೆ ಹೊಂದಿದ್ದರೆ, ಪರಿಶಿಷ್ಟ ಪಂಗಡ-42ಲಕ್ಷ, ಮುಸ್ಲಿಮರು - 74 ಲಕ್ಷ, ಲಿಂಗಾಯತರು -73 ಲಕ್ಷ, ಒಕ್ಕಲಿಗರು-70ಲಕ್ಷ, ಕುರುಬರು-45ಲಕ್ಷ, ಮರಾಠರು-16 ಲಕ್ಷ, ಬ್ರಾಹ್ಮಣರು-15ಲಕ್ಷ, ವಿಶ್ವಕರ್ಮರು-15ಲಕ್ಷ, ಈಡಿಗರು-14 ಲಕ್ಷ, ಬೆಸ್ತರು -14.50ಲಕ್ಷ, ಕ್ರೈಸ್ತರು-12ಲಕ್ಷ, ಗೊಲ್ಲರು(ಯಾದವ)-10.50ಲಕ್ಷ, ಉಪ್ಪಾರ, ಮಡಿವಾಳ, ಅರೆ ಅಲೆಮಾರಿ ಸಮುದಾಯ ತಲಾ 7 ಲಕ್ಷ, ಕುಂಬಾರ, ತಿಗಳರು ತಲಾ 5ಲಕ್ಷ, ಜೈನರು 3 ಲಕ್ಷ ಜನಸಂಖ್ಯೆ ಹೊಂದಿದ್ದಾರೆ ಎಂಬುದು ತಿಳಿದು ಬಂದಿತ್ತು.
ವರದಿ ನೋಡಿದ ಬಳಿಕ ಮುಂದಿನ ತೀರ್ಮಾನಗಳ ಚರ್ಚೆ
ಜಾತಿ ಗಣತಿ ವರದಿ ಇಂದು ಸಂಪುಟ ಸಭೆಗೆ ಬಂದಿದೆ. ವರದಿಯನ್ನು ಸಿಎಂ ಹಾಗೂ ಸಚಿವರು ಇನ್ನೂ ನೋಡಿಲ್ಲ. ವರದಿ ಕುರಿತು ಚರ್ಚಿಸಿದ ಬಳಿಕ ವೀಕ್ಷಿಸಲಾಗುವುದು . ಆ ಬಳಿಕ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನಂತರ ಜಾತಿಗಣತಿ ವರದಿ ಮಂಡನೆ
ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಬಳಿಕ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡಿಸಿದ ಸರ್ಕಾರ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಜಯಪ್ರಕಾಶ್ ಹೆಗಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಕಳೆದ ವರ್ಷ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಅಂದಿನಿಂದ ವರದಿ ಖಜಾನೆಯಲ್ಲಿ ಕೊಳೆಯುತ್ತಿತ್ತು.
ಸಿಎಂ ಸೂಚನೆ ಮೇರೆಗೆ ಜಾತಿಗಣತಿ ವರದಿ ಮಂಡನೆ
ಜಾತಿಗಣತಿ ಎಷ್ಟು ಸಂಪುಟ, ಏನೆಲ್ಲಾ ಮಾಹಿತಿ ಇದೆ ಎಂಬುದು ಗೊತ್ತಿಲ್ಲ.ಸಚಿವ ಸಂಪುಟದ ಮುಂದೆ ಬಂದಿರುವುದು ಕೂಡ ಗೌಪ್ಯ ವಿಚಾರ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ವರದಿಗೆ ಪರ- ವಿರೋಧ ಏಕೆಂಬುದು ಗೊತ್ತಿಲ್ಲ. ಖಜಾನೆಯಲ್ಲಿದ್ದ ವರದಿಯನ್ನು ಸಿಎಂ ಸೂಚನೆ ಮೇರೆಗೆ ಸಂಪುಟದ ಮುಂದಿಡಲಾಗಿದೆ. ವರದಿ ಸೋರಿಕೆಯಾಗಿತ್ತು ಎಂಬ ಮಾಹಿತಿ ಇಲ್ಲ. ಸಚಿವ ಸಂಪುಟದ ಎಲ್ಲರ ಜೊತೆ ಚರ್ಚೆಯಾದ ಬಳಿಕ ವರದಿ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.
ಜಾತಿಗಣದಿ ವರದಿ ಚರ್ಚೆ ಮಾಡಬೇಕಲ್ಲವೇ; ಅದಕ್ಕೂ ಮುನ್ನ ವಿರೋಧ ಏಕೆ?
ಜಾತಿ ಗಣತಿ ವರದಿ ಕುರಿತು ಎಲ್ಲರೂ ಒಟ್ಟಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮೊದಲು ವರದಿ ಓಪನ್ ಆಗಲಿ, ಆ ಮೇಲೆ ಏನಾಗಲಿದೆ ನೋಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜಾತಿಗಣತಿ ವರದಿಗೆ ಕೆಲ ಪ್ರಬಲ ಜಾತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ವರದಿ ಜಾರಿಯಾದ ಮೇಲೆ ಸದನ ಕರೆಯಬೇಕು. ಅಲ್ಲಿ ಯಾರೆಲ್ಲ ಏನೇನು ಪ್ರಶ್ನೆ ಕೇಳ್ತಾರೆ ನೋಡೋಣ. ಇದಕ್ಕೂ ಮುನ್ನ ಸಮಗ್ರವಾಗಿ ಚರ್ಚೆ ಆಗಬೇಕಲ್ಲವೇ ಎಂದು ಹೇಳಿದ್ದಾರೆ.
ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಚರ್ಚೆ ಜೋರು
ವಿಧಾನಸೌಧದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ 2015 ನೇ ಸಾಲಿನ ಜಾತಿವಾರು ಜನಗಣತಿ ವರದಿ ಕುರಿತಂತೆ ಚರ್ಚೆ ನಡೆಯುತ್ತಿದೆ. ಸಂಪುಟದ ಸಭೆಯ ಕೊನೆಯ ವಿಷಯವಾಗಿ ಜಾತಿಗಣತಿ ವರದಿ ತೆಗೆದುಕೊಂಡಿದ್ದು, ವಿವಿಧ ಸಮುದಾಯದ ಸಚಿವರು ಪರ-ವಿರೋಧ ಅಭಿಪ್ರಾಯ ಮಂಡಿಸುತ್ತಿದ್ದಾರೆ.