ಅಧಿಕಾರಿಗಳ ವರ್ಗಾವಣೆ: ರೋಹಿಣಿ ಸಿಂಧೂರಿಗೆ ಕಾರ್ಮಿಕ ಇಲಾಖೆ, ಡಿ. ರೂಪಾಗೆ ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ ಜವಾಬ್ದಾರಿ
ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರು ಹಿಂದೆ ಸಾರ್ವಜನಿಕವಾಗಿ ಆರೋಪಗಳು ಮಾಡಿಕೊಂಡ ಬಳಿಕ ಮಾನನಷ್ಟ ಮೊಕದ್ದಮೆಗಳು ದಾಖಲಾಗಿದ್ದವು. ಈ ವೇಳೆ ಸರ್ಕಾರ ಅವರಿಬ್ಬರಿಗೆ ಪ್ರಮುಖವಲ್ಲದ ಹುದ್ದೆಗಳನ್ನು ನೀಡಿತ್ತು.;
ಪರಸ್ಪರ ಜಗಳ ಹಾಗೂ ಆರೋಪ- ಪ್ರತ್ಯಾರೋಪಗಳ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ ರೂಪಾ ಅವರನ್ನು ಗುರುವಾರ (ಜೂನ್12ರಂದು) ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಮೂಲಕ ಒಟ್ಟು ಮೂವರು ಹಿರಿಯ ಐಎಎಸ್ ಅಧಿಕಾರಿಗಳು ಮತ್ತು ಒಬ್ಬ ಐಪಿಎಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆ ನೀಡಲಾಗಿದ್ದರೆ, ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ADGP) ನೇಮಿಸಲಾಗಿದೆ.
ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರು ಹಿಂದೆ ಸಾರ್ವಜನಿಕವಾಗಿ ಆರೋಪಗಳು ಮಾಡಿಕೊಂಡ ಬಳಿಕ ಮಾನನಷ್ಟ ಮೊಕದ್ದಮೆಗಳು ದಾಖಲಾಗಿದ್ದವು. ಈ ವೇಳೆ ಸರ್ಕಾರ ಅವರಿಬ್ಬರಿಗೆ ಪ್ರಮುಖವಲ್ಲದ ಹುದ್ದೆಗಳನ್ನು ನೀಡಿತ್ತು. ಅವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಡಿ. ರೂಪಾ ಅವರು ತಮಗೆ ಎಡಿಜಿಪಿ ಶ್ರೇಣಿಯ ಹುದ್ದೆ ಬೇಕು ಎಂದು ಕೋರಿದ್ದರು. ಕೋರ್ಟ್ ಅವರ ಪರವಾಗಿ ಏಪ್ರಿಲ್ನಲ್ಲಿ ತೀರ್ಪು ನೀಡಿತ್ತು. ಅಂತೆಯೇ ಇದೀಗ ರೂಪಾ ಅವರನ್ನು ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನೇಮಿಸಿದೆ. ಸುತ್ತೊಲೆಯಲ್ಲಿ ಎಡಿಜಿಪಿ ಎಂಬದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ರೂಪಾ ಅವರು ಈ ಹಿಂದೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ಹುದ್ದೆಯ ಜವಾಬ್ದಾರಿ ವಹಿಸಲಾಗಿದೆ. ಈ ಹುದ್ದೆಯು ಪೊಲೀಸ್ ಆಡಳಿತದ ಹೆಚ್ಚುವರಿ ಮಹಾನಿರ್ದೇಶಕರ ಹುದ್ದೆಗೆ ಸಮಾನವಾಗಿದ್ದು, ಅಧಿಕಾರ ಮತ್ತು ಹೊಣೆಗಾರಿಕೆಗಳ ದೃಷ್ಟಿಯಿಂದಲೂ ಸಮಾನ ಸ್ಥಾನಮಾನ ಹೊಂದಿರುತ್ತದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ವರ್ಗಾವಣೆ ಮೂಲಕ ಪ್ರಸ್ತುತ ಖಾಲಿ ಇದ್ದ ಸ್ಥಾನ ಭರ್ತಿ ಮಾಡಿದ್ದು, ಮುಂದಿನ ಆದೇಶಗಳು ಬರುವವರೆಗೆ ಡಿ. ರೂಪಾ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರೋಹಿಣಿ ಸಿಂಧೂರಿಗೂ ಸ್ಥಾನ
ಅಧಿಸೂಚನೆಯ ಪ್ರಕಾರ, ಇದುವರೆಗೆ ಕೃಷಿ ಇಲಾಖೆಯ ಫುಡ್ ಪ್ರೊಸೆಸಿಂಗ್ ಮತ್ತು ಹಾರ್ವೆಸ್ಟ್ ಟೆಕ್ನಾಲಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ರೋಹಿಣಿ ಸಿಂಧೂರಿ ದಾಸರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಈ ಮೂಲಕ ಡಾ. ಪ್ರಸಾದ್ ಎನ್.ವಿ. ಅವರು ಈ ಹುದ್ದೆಯಲ್ಲಿ ಹೊಂದಿದ್ದ ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ.
ರೋಹಿಣಿ ಅವರ ಜತೆ ಇನ್ನಿಬ್ಬರು ಐಎಎಸ್ ಅಧಿಕಾರಿಗಳನ್ನೂ ವರ್ಗ ಮಾಡಲಾಗಿದೆ. ಶೆಟ್ಟೆಣ್ಣವರ ಎಸ್.ಬಿ. ಅವರನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ನೇಮಿಸಲಾಗಿದೆ. ಈ ಹುದ್ದೆ ಸರ್ಕಾರದ ಕಾರ್ಯದರ್ಶಿ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿಗಳಿರುವ ಹುದ್ದೆಯಾಗಿದೆ. , ಅಕ್ರಂ ಪಾಷಾ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಹೀಗಾಗಿ ಈ ಜವಾಬ್ದಾರಿ ನಿರ್ವಹಿಸುತ್ತಿದ್ದ ರಾಮಚಂದ್ರನ್ ಆರ್. ಅವರ ಹೆಚ್ಚುವರಿ ಹೊಣೆಗಾರಿಕೆಯಿಂದ ಮುಕ್ತಗೊಳಿಸಲಾಗಿದೆ.