ಹಿಂದೂಗಳ ಭಾವನೆಗೆ ಧಕ್ಕೆಯಾದರೆ ರಾಜ್ಯವೇ ದಂಗೆ ಏಳಲಿದೆ; ಆರ್.ಅಶೋಕ್ ಎಚ್ಚರಿಕೆ
ಇತಿಹಾಸ ಗೊತ್ತಿಲ್ಲದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿ ರಾಜ್ಯದ ಜನರಿಗೆ ಸರ್ಕಾರ ದ್ರೋಹ ಮಾಡಿದೆ. ಇದು ಹಿಂದುಗಳ ಸರ್ಕಾರ ಅಲ್ಲ, ಅಲ್ಪಸಂಖ್ಯಾತರ ಸರ್ಕಾರ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.;
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್
ರಾಜ್ಯ ಸರ್ಕಾರ ಪದೇ ಪದೇ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದು, ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳ ಆಸ್ತಿಯಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದು ನೇರವಾಗಿ ಹಿಂದೂಗಳಿಗೆ ಮಾಡಿದ ಅವಹೇಳನ. ಹಾಗಾದರೆ, ಚಾಮುಂಡಿ ದೇವಸ್ಥಾನವನ್ನೇನು ವಕ್ಫ್ ಬೋರ್ಡ್ಗೆ ಸೇರಿಸಿ ಮಸೀದಿ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ರಾಜ್ಯಸಭೆ ಸದಸ್ಯರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕರೆದ ಪ್ರಕರಣವನ್ನು ಮುಚ್ಚಿ ಹಾಕಿದಿರಿ, ಈಗ ಮೈಸೂರು, ವಿಜಯನಗರ ಸಾಮ್ರಾಜ್ಯ ಹಾಳು ಮಾಡಿದ ಮುಸ್ಲಿಮರಿಂದ ದಸರಾ ಉದ್ಘಾಟನೆ ಮಾಡಿಸುತ್ತಿರುವುದು ನಾಚಿಕೆಗೇಡು. ತಾಯಿ ಭುವನೇಶ್ವರಿಯನ್ನು ವಿಗ್ರಹ ಮಾಡಿದ್ದೀರಿ, ಬಾವುಟವನ್ನು ಅರಿಶಿನ –ಕುಂಕುಮ ಮಾಡಿಟ್ಟಿದ್ದೀರಿ ಎಂದು ಬಾನು ಮುಷ್ತಾಕ್ ಟೀಕಿಸಿದ್ದರು. ಹಾಗಾದರೆ, ಅರಿಶಿಣ-ಕುಂಕುಮ ಹಚ್ಚದೇ ಸೆಂಟ್ ಹೊಡೆಯಬೇಕಿತ್ತಾ ಎಂದು ಕಿಡಿಕಾರಿದರು.
ಇತಿಹಾಸ ಗೊತ್ತಿಲ್ಲದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿ ರಾಜ್ಯದ ಜನರಿಗೆ ಸರ್ಕಾರ ದ್ರೋಹ ಮಾಡಿದೆ. ಇದು ಹಿಂದುಗಳ ಸರ್ಕಾರ ಅಲ್ಲ, ಅಲ್ಪಸಂಖ್ಯಾತರ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದಿಂದ ಚಾಮುಂಡಿ ತಾಯಿಯ ಪೂಜೆ ನಡೆಯುತ್ತಿಲ್ಲ. ವೋಟಿನ ಪೂಜೆ ನಡೆಯುತ್ತಿದೆ. ಈ ರೀತಿಯ ಧೋರಣೆ ಮುಂದುವರಿದರೆ ರಾಜ್ಯವೇ ದಂಗೆ ಏಳುವ ಸ್ಥಿತಿ ಬರಲಿದೆ. ಡಿ.ಕೆ. ಶಿವಕುಮಾರ್ ತಕ್ಷಣವೇ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರ ಕುರಿತಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಕೋಟಿಗೂ ಹೆಚ್ಚು ಮಹಿಳೆಯರಿದ್ದಾರೆ. ಅವರಲ್ಲಿ ಒಬ್ಬರೂ ಸಿಗಲಿಲ್ಲವೇ, ಬಾನು ಮುಷ್ತಾಕ್ ಅವರನ್ನೇ ಆಯ್ಕೆ ಮಾಡಿದ್ದೇಕೆ, ಅವರ ಇತಿಹಾಸವೇನು ಪ್ರಶ್ನಿಸಿದರು.
ಭಾನು ಮುಷ್ತಾಕ್ ಆಯ್ಕೆಗೆ ವಿರೋಧವಿಲ್ಲ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಏನು ಮಾತಾಡಿದ್ದಾರೋ ನನಗೆ ಗೊತ್ತಿಲ್ಲ, ಅವರ ಜೊತೆ ಮಾತನಾಡುತ್ತೇವೆ ಎಂದು ಅಶೋಕ್ ಹೇಳಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಧರ್ಮಸ್ಥಳವನ್ನು ಅತಂತ್ರಗೊಳಿಸಿ ಟ್ರಸ್ಟ್ ಮಾಡಿ ಲೂಟಿ ಮಾಡಲು ನಗರ ನಕ್ಸಲರಿಗೆ ಅವಕಾಶ ನೀಡಿದೆ. ಸ್ಟಿಂಗ್ ಆಪರೇಷನ್ನಲ್ಲಿ ದಿನೇ ದಿನೇ ಕುತಂತ್ರ ಬಹಿರಂಗವಾಗುತ್ತಿದೆ. ಎಸ್ಐಟಿ ತನಿಖೆ ಮೂಲಕ ದುಂದು ವೆಚ್ಚ ಮಾಡುತ್ತಿದೆ. ಮೊದಲು ದೂರು ಕೊಟ್ಟವರನ್ನೇ ವಿಚಾರಣೆ ಮಾಡಬೇಕಾಗಿದ್ದ ಎಸ್ಐಟಿ ಅಧಿಕಾರಿಗಳು, ಆತ ಹೇಳಿದ್ದನ್ನೇ ನಂಬಿಕೊಂಡು ಧರ್ಮಸ್ಥಳದ ಹಲವೆಡೆ ಗುಂಡಿಗಳನ್ನು ಅಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಬಂದರೆ ಹಿಂದೂ ದೇಗುಲಗಳ ರಕ್ಷಣೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳ ರಕ್ಷಣೆಗೆ ಕಾನೂನು ತರಲಿದೆ. ಧರ್ಮಸ್ಥಳವು ಎಲ್ಲಾ ಹಿಂದೂಗಳಿಗೆ ಸೇರಿದೆ. ಧರ್ಮಸ್ಥಳದ ಅಪಪ್ರಚಾರ ಖಂಡಿಸಿ ಬಿಜೆಪಿ–ಜೆಡಿಎಸ್ ಒಟ್ಟಿಗೆ ಹೋರಾಟ ನಡೆಸಲಿವೆ. ವಿಧಾನಸಭೆಯಲ್ಲಿ ನಾವು ಒಟ್ಟಿಗೆ ಹೋರಾಡಿದ್ದೇವೆ, ಹೊರಗಡೆ ಪ್ರತ್ಯೇಕ ಹೋರಾಟ ನಡೆಯುತ್ತಿದೆ. ನಾವು ಅಣ್ಣ-ತಮ್ಮಂದಿರಂತೆ ಇದ್ದೇವೆ ಎಂದು ಸ್ಪಷ್ಟಪಡಿಸಿದರು.