Assembly Session | ಧರ್ಮಸ್ಥಳ ಪ್ರಕರಣ : ಸದನದಲ್ಲಿ ಗಂಭೀರ ಚರ್ಚೆ, ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮಕ್ಕೆ ಒತ್ತಾಯ
ಧರ್ಮಸ್ಥಳ ಪ್ರಕರಣ: ಅಸ್ಥಿಪಂಜರ ಹಾಗೂ ಮೂಳೆಗಳನ್ನು ಲ್ಯಾಬ್ಗೆ ರವಾನೆ
ಎಸ್ಐಟಿ ಮುಂದೆ ಅನಾಮಿಕ ದೂರುದಾರ ಎಲ್ಲೆಲ್ಲಿ ಶವ ಹೂತಿದ್ದೆ ಎಂಬುದಾಗಿ ಹೇಳಿದ ನಂತರ ಪೊಲೀಸರು ಮ್ಯಾಪ್ ಮಾಡಿದ್ದರು. ಒಂದರಲ್ಲಿ ಅಸ್ಥಿಪಂಜರ ಸಿಕ್ಕಿತ್ತು. ಅದನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಇನ್ನೊಂದು ಜಾಗದಲ್ಲಿ ಮೂಳೆಗಳು ಸಿಕ್ಕಿವೆ. ಅಗೆದ ಎಲ್ಲಾ ಜಾಗದಲ್ಲಿನ ಮಣ್ಣನ್ನು ಲ್ಯಾಬ್ಗೆ ಕಳಿಸಲಾಗಿದೆ. ಇಲ್ಲಿಯವರೆಗೂ ಎಸ್ಐಟಿ ತನಿಖೆ ನಡೆಸಿಲ್ಲ. ಎಪ್ಎಸ್ಎಲ್ ವರದಿ ಬಂದ ನಂತರ ತನಿಖೆ ಶುರುವಾಗಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಧರ್ಮಸ್ಥಳ ಪ್ರಕರಣ: ಸದನದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ರಿಂದ ಉತ್ತರ
ಧರ್ಮಸ್ಥಳ ಪ್ರಕರಣದ ಕುರಿತಂತೆ ಸದನಕ್ಕೆ ಉತ್ತರ ನೀಡಬೇಕು ಎಂದು ಕಳೆದ ಗುರುವಾರ ಪ್ರತಿಪಕ್ಷಗಳು ಆಗ್ರಹಿಸದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಇಂದು ಸದನದಲ್ಲಿ ಉತ್ತರ ನೀಡುತ್ತಿದ್ದಾರೆ.
ಸಿಎಂ ವಿರುದ್ದ ಕೊಲೆ ಆರೋಪ ಮಾಡಿದವರ ವಿರುದ್ದ ಕ್ರಮಕ್ಕೆ ಪರಮೇಶ್ವರ್ ಸೂಚನೆ
ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಮಹೇಶ್ ತಿಮರೋಡಿ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಈಗಾಗಲೇ ಹಲವಾರು ಪ್ರಕರಣಗಳಿವೆ. ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸದನದಲ್ಲಿ ತಿಳಿಸಿದರು.
ಲಾಯರ್ ಜಗದೀಶ್ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಹಕ್ಕುಚ್ಯುತಿಗೆ ಆಗ್ರಹ
ಲಾಯರ್ ಜಗದೀಶ್ ವಿರುದ್ಧ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಹಕ್ಕು ಚ್ಯುತಿ ಮಂಡನೆ ಮಾಡಬೇಕು ಎಂದು ಸಭಾಪತಿ ಗಮನಕ್ಕೆ ತಂದರು.
ನನ್ನನ್ನು ಒಬ್ಬ ಅಯೋಗ್ಯ ಎಂದು ಹೇಳಿದ್ದಾನೆ, ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಬಳಿ ನೂರು ಕೋಟಿ ರೂ. ಇಟ್ಟಿದ್ದಾನೆ. ಅಳ್ಳಾಲಸಂದ್ರದ ಯಾವುದೊ ಜಾಗ ತೋರಿಸಿ ಇದು ಧರ್ಮಸ್ಥಳ ಕ್ಷೇತ್ರದ ಜಾಗ ಎಂದು ತಿಳಿಸಿದ್ದಾನೆ ಎಂದು ಸದನದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಹೆಚ್. ಕೆ. ಪಾಟೀಲ್, ಇದು ಸದನಕ್ಕೆ ಆದ ಅಗೌರವ. ನೀವು ನಮಗೆ ನೊಟೀಸ್ ನೀಡಿ, ನಾವು ಅದನ್ನು ಪರಿಗಣಿಸುತ್ತೇವೆ ಎಂದು ತಿಳಿಸಿದರು.
ಸಿಎಂ 28 ಕೊಲೆ ಮಾಡಿದ್ದಾರೆ ಎಂಬ ಹೇಳಿಕೆಗೆ ಉತ್ತರಿಸಲು ಪ್ರತಿಪಕ್ಷಗಳ ಆಗ್ರಹ
ಸದನ ನಡೆಯುವ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯನವರು 28 ಕೊಲೆ ಮಾಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಧರ್ಮಸ್ಥಳ ಪ್ರಕರಣ: ಎಸ್ಐಟಿ ಮುಖ್ಯಸ್ಥರೊಂದಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಭೆ
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧ ಕಾರ್ಯದ ಕುರಿತು ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಹಾಗೂ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಶರತ್ ಚಂದ್ರ ಅವರ ಜತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಸಭೆ ನಡೆಸಿದ್ದಾರೆ.
ಸದನಕ್ಕೆ ಇಂದು ಪ್ರಕರಣದ ಕುರಿತು ಉತ್ತರ ನೀಡಬೇಕಾಗಿರುವುದರಿಂದ ವಿಧಾನಸೌಧದ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಎಸ್ಐಟಿ ತನಿಖೆಯ ಪ್ರಗತಿ ಬಗ್ಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದಿದ್ದಾರೆ.
ನೂತನ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಗೋಮಾಳ ಭೂಮಿ ಮಂಜೂರು: ಪ್ರತಿಪಕ್ಷಗಳ ವಿರೋಧ
ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿಗಳನ್ನು ಸ್ಥಾಪಿಸಲು ಸರ್ಕಾರ ಗೋಮಾಳ ಭೂಮಿಯನ್ನು ನೀಡುತ್ತಿದೆ. ಗೋಮಾಳ ಭೂಮಿಯನ್ನು ಕಾಂಗ್ರೆಸ್ ಕಚೇರಿಗೆ ಯಾವ ನಿಯಮಗಳಡಿ ನೀಡಲಾಗಿದೆ ಎಂದು ಜೆಡಿಎಸ್ ಶಾಸಕ ಸುರೇಶ್ ಬಾಬು ಸದನದಲ್ಲಿ ಪ್ರಶ್ನಿಸಿದರು.
ಕಚೇರಿ ಕಟ್ಟಲು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಸಿಗಳು ಜಾಗ ಮಂಜೂರು ಮಾಡಲು ಹೊರಟಿದ್ದಾರೆ. ಈ ವಿಚಾರದಲ್ಲಿ ಬಡವರಿಗೆ ಒಂದು ನ್ಯಾಯ, ಕಾಂಗ್ರೆಸ್ ಕಚೇರಿಗೆ ಒಂದು ನ್ಯಾಯವೇ ? ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೂ ಎರಡು ಎಕರೆ ಜಾಗ ಕಚೇರಿಗೆ ಕೊಟ್ಟಿದ್ದಾರೆ. ಇದರ ಬಗ್ಗೆ ಕಂದಾಯ ಸಚಿವರು ಉತ್ತರ ನೀಡಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಒತ್ತಾಯಿಸಿದರು.
ನೂತನ ತಾಲೂಕುಗಳಲ್ಲಿ ಪ್ರಜಾಸೌಧ ಕಟ್ಟಲು ಭೂಮಿ ಕೊಳ್ಳುವ ಸ್ಥಿತಿ
ರಾಜ್ಯಾದ್ಯಂತ ರೈತರಿಗೆ ಭೂಮಿ ಮಂಜೂರು ಮಾಡಲು ಕಂದಾಯ ನಿಯಮಗಳಲ್ಲಿ ಕೆಲವೊಂದು ಕಾನೂನುಗಳು ಅಡ್ಡಿಯಾಗಿವೆ. ಸರ್ಕಾರಿ ಜಮೀನುಗಳೇ ಕಡಿಮೆಯಾಗುತ್ತಿವೆ. ರಾಜ್ಯದಲ್ಲಿ 12,000 ಅಂಗನವಾಡಿಗಳಿಗೆ ಭೂಮಿ ನೀಡಲು ಸಾಧ್ಯವಾಗಿಲ್ಲ. ನೂತನ ತಾಲೂಕುಗಳಲ್ಲಿ ಪ್ರಜಾಸೌಧ ಕಟ್ಟಲು ಭೂಮಿ ಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಧರ್ಮಸ್ಥಳ ಪ್ರಕರಣ: ಸಿಎಂ, ಡಿಸಿಎಂ, ಗೃಹ ಸಚಿವರ ಚರ್ಚೆ
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸಭೆಗೆ ಮಾಹಿತಿ ನೀಡುವ ಮುನ್ನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.
ಧರ್ಮಸ್ಥಳ ಪ್ರಕರಣದ ಸಂಬಂಧ ವಿಧಾನಸಭೆಯಲ್ಲಿ ಉತ್ತರ ನೀಡುವ ಸಲುವಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೊರಟ ಬೆನ್ನಲ್ಲೆ ಸದನಕ್ಕೆ ಸಿಎಂ, ಡಿಸಿಎಂ ಕೂಡ ತೆರಳಿದ್ದು ತನಿಖಾ ಪ್ರಗತಿಯ ಬಗ್ಗೆ ಸದನಕ್ಕೆ ಮಾಹಿತಿ ನೀಡಲು ತೀರ್ಮಾನಿಸಲಾಗಿದೆ.
ಪ್ರಶ್ನೋತ್ತರ ಚರ್ಚೆ ನಂತರ ಧರ್ಮಸ್ಥಳ ಪ್ರಕರಣ ಪ್ರಸ್ತಾಪ
ಸೋಮವಾರ ಆರಂಭವಾದ ವಿಧಾನಸಭೆ ಕಲಾಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ ಬಗ್ಗೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಸ್ತಾಪ ಮಾಡಿ, ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶ್ನೋತ್ತರ ಚರ್ಚೆಯ ನಂತರ ಮಾತನಾಡಲು ಅವಕಾಶ ನೀಡಲಾಗುವುದು ಎಂದರು.