Assembly Session | ಧರ್ಮಸ್ಥಳ ಪ್ರಕರಣ : ಸದನದಲ್ಲಿ ಗಂಭೀರ ಚರ್ಚೆ, ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮಕ್ಕೆ ಒತ್ತಾಯ
ಧರ್ಮಸ್ಥಳ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮಧ್ಯಂತರ ವರದಿ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಸದನದಲ್ಲಿ ಮಾಹಿತಿ ನೀಡಿದರು.;
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಎಸ್ಐಟಿ ತನಿಖೆ ಹಾಗೂ ಶ್ರೀಕ್ಷೇತ್ರದ ಬಗೆಗಿನ ಅಪಪ್ರಚಾರ ಕುರಿತಂತೆ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದ್ದು, ಎಸ್ಐಟಿ ತನಿಖಾ ವರದಿಯ ಕುರಿತು ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಸದನದಲ್ಲಿ ಉತ್ತರ ನೀಡಲಿದ್ದಾರೆ.
ಕಳೆದ ಗುರುವಾರ ಸದನದಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ನಡೆದ ಚರ್ಚೆಯಲ್ಲಿ ಸರ್ಕಾರದ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಸೋಮವಾರ (ಆ.೧೮)ಉತ್ತರ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಈ ಮಧ್ಯೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದು, ತನಿಖಾ ಪ್ರಗತಿಯ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಎಸ್ಐಟಿ ತನಿಖೆಯ ಈವರೆಗಿನ ಪ್ರಗತಿ, ಸರ್ಕಾರ ಕೈಗೊಂಡ ಮಾಹಿತಿ ಹಾಗೂ ಇನ್ನಿತರೆ ಕ್ರಮಗಳ ಕುರಿತು ಸದನದ ಮುಂದಿಡುವ ಸಾಧ್ಯತೆ ಇದ್ದು, ಪರಸ್ಪರ ವಾಕ್ಸಮರಕ್ಕೆ ಕಾರಣವಾಗುವ ನಿರೀಕ್ಷೆಯಿದೆ.
ಧರ್ಮಸ್ಥಳ ಪ್ರಕರಣದ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಇದೊಂದು ಷಡ್ಯಂತ್ರ ಎಂದು ಹೇಳಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡು ಪ್ರತಿಪಕ್ಷ ನಾಯಕರು ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶವ ಹೂತಿಟ್ಟ ಪ್ರಕರಣದಲ್ಲಿ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಸ್ಐಟಿ ಮಧ್ಯಂತರ ವರದಿ ನೀಡುವುದು ಅನುಮಾನ ಎನ್ನಲಾಗಿದೆ. 17 ಸ್ಥಳಗಳಲ್ಲಿ ಕಳೇಬರ ಶೋಧ ನಡೆಸಿದರೂ ಎರಡರಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದು, ಉಳಿದಂತೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಹಾಗಾಗಿ ದೂರು ಸಾಕ್ಷಿದಾರ ತೋರಿಸುತ್ತಿರುವ ಪ್ರತಿ ಜಾಗವನ್ನು ಶೋಧಿಸಲಾಗುತ್ತಿದೆ. ಅಲ್ಲದೇ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಲು ಜಿಪಿಆರ್ ಬಳಸಲಾಗಿದೆ. ಈ ಮಧ್ಯೆ, ದಿನಕ್ಕೊಂದು ದೂರು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸುವ ಅಗತ್ಯವಿದೆ. ಹೀಗಿರುವ ತನಿಖಾ ಹಂತದಲ್ಲಿ ಯಾವುದೇ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಲು ಮಧ್ಯಂತರ ವರದಿ ನೀಡಲು ನಿರಾಕರಿಸಲಾಗಿದೆ ಎನ್ನಲಾಗಿದೆ.
ಭಾನುವಾರಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಎಸ್ಐಟಿ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಮಧ್ಯಂತರ ವರದಿ ನೀಡಿದರೆ ಸದನದ ಮುಂದಿಡಲಾಗುವುದು. ಇಲ್ಲವಾದಲ್ಲಿ ಒತ್ತಡ ಹೇರುವುದಿಲ್ಲ ಎಂದು ಹೇಳಿದ್ದರು.
ಧರ್ಮಸ್ಥಳ ವಿಚಾರ ಉದ್ದೇಶಪೂರ್ವಕವಾಗಿ ಜಾಗತಿಕ ಸುದ್ದಿಯಾಗಿ ಮಾಡಲಾಗುತ್ತಿದ್ದು, ದೂರುದಾರ ಅನಾಮಿಕನನ್ನು ನಾರ್ಕೋ ಅನಾಲಿಸಿಸ್ ಟೆಸ್ಟ್ಗೆ ಒಳಪಡಿಸಬೇಕು ಎಂದು ಶಾಸಕ ಭರತ್ ಶೆಟ್ಟಿ ಸದನದಲ್ಲಿ ತಿಳಿಸಿದರು.
ಕೇರಳದ ವಿಧಾನಸಭೆಯಲ್ಲಿ ಧರ್ಮಸ್ಥಳ ಬಗ್ಗೆ ನಿರ್ಣಯ ಏಕೆ ಮಾಡಿದ್ದರು ಎಂದು ಸ್ಪಷ್ಟನೆ ನೀಡಬೇಕು. ಧರ್ಮಸ್ಥಳ ವಿಚಾರ ಪಾಕಿಸ್ತಾನದ ಒಂದೆರಡು ಟಿವಿಗಳಲ್ಲೂ ಬಂದಿದೆ ಎಂದು ತಿಳಿಸಿದರು.
ಸರ್ಕಾರ ರಚಿಸಿರುವ ಎಸ್ಐಟಿಯನ್ನ ನಾವು ಸ್ವಾಗತಿಸುತ್ತೇವೆ. ತನಿಖೆಗೆ ಅಡ್ಡಿಯಾಗಬಾರದು ಎಂದು ನಾನು ಇಲ್ಲಿಯವರೆಗೆ ಮಾತನಾಡಿರಲಿಲ್ಲ. ಮಾಧ್ಯಮಗಳು ಇಂದು ಪ್ರಕರಣದ ಕುರಿತು ಬೆಳಕು ಚೆಲ್ಲುತ್ತಿವೆ. ಆದರೆ ಸಾಮಾಜಿಕ ಜಾಲತಾಣಗಳು ಧರ್ಮಸ್ಥಳದ ಪಾವಿತ್ರತೆಯನ್ನು ಹಾಳು ಮಾಡುತ್ತಿವೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಿಳಿಸಿದರು.
ನಮ್ಮಲ್ಲಿ ಸಾಕ್ಷಿ ಇವೆ ಎಂದು ಹೋರಾಟಗಾರರು ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಸೌಜನ್ಯ ಪ್ರಕರಣವನ್ನು ಏಕೆ ಮರು ತನಿಖೆ ಮಾಡಲಿಲ್ಲ. ಯೂಟ್ಯೂಬ್ಗಳಿಂದಲೇ ಗೊಂದಲ ಶುರುವಾಗಿದೆ. ಎರಡು ವರ್ಷದ ಹಿಂದಿನ ಮಾತನ್ನು ಕಟ್ ಆಂಡ್ ಪೇಸ್ಟ್ ಮಾಡಲಾಗಿದೆ ಎಂದು ಆರೋಪಿಸಿದರು.
ಸಾಮಾಜಿಕ ಜಾಲತಾಣಗಳು ಸಮಾಜದ ದಾರಿತಪ್ಪಿಸುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಸೌಜನ್ಯ ಪ್ರಕರಣವನ್ನೂಮರು ತನಿಖೆ ಮಾಡಬೇಕು ಎಂದು ತಿಳಿಸಿದರು.
ಧರ್ಮಸ್ಥಳ ರಾಜ್ಯದ ದೊಡ್ಡ ಪವಿತ್ರ ಕ್ಷೇತ್ರ. ಇದಕ್ಕೆ ಬಂದಿರುವ ಅಪವಾದವನ್ನು ಕಿತ್ತು ಹಾಕಬೇಕು. ಕೆಲವರು ಪಟ್ಟಭದ್ರರು ಬೇಕಂತಲೇ ಹೆಸರು ಹಾಳು ಮಾಡುತ್ತಿದ್ದಾರೆ. ಆ ಕಳಂಕವನ್ನು ತೆಗೆಯೋಕೆ ನಾವು ನೋಡುತ್ತಿರುವುದು ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ತಿಳಿಸಿದರು.
ದೂರುದಾರ 164 ರಡಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ. ಕೋರ್ಟ್ ತನಿಖೆ ಮಾಡಿ ಅಂದ ಮೇಲೆ ಮಾಡಬೇಕಲ್ವೇ? ಕ್ಷೇತ್ರದ ಪಾವಿತ್ರತೆ ಉಳಿಸೋಕೆ ಎಂದೇ ಎಸ್ಐಟಿ ಮಾಡಿದ್ದು. ಇದನ್ನು ಕರ್ನಾಟಕದ ಜನ ಒಪ್ಪಿದ್ದಾರೆ ಎಂದರು.
ನಾವು ಎಸ್ಐಟಿಗೆ ವಿರೋಧವಿಲ್ಲ, ಕೆಲವರು ಯೂಟ್ಯೂಬ್ ಬಳಸಿ ಅಪಪ್ರಚಾರ ನಡೆಸುತ್ತಿದ್ದಾರೆ ಆದ್ದರಿಂದ ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ತಿಳಿಸಿದರು.
ಇದರ ಹಿಂದೆ ಒಬ್ಬ ಮುಸುಕುಧಾರಿ ಬದಲಾಗಿ ಹತ್ತಾರು ಜನ ಮುಸುಕು ಹಾಕಿ ಕೆಲಸ ಮಾಡುತ್ತಿದ್ದಾರೆ. ಆತನಿಗೆ ಹಣಕಾಸು ನೆರವು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಬೇಕು. ಧರ್ಮಸ್ಥಳಕ್ಕೆ ಕೆಸರು ಎರಚುವುದು ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪ ಮಾಡಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರ ನಡುವೆ ವಾಗ್ವಾದ ನಡೆಯಿತು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಎಸ್ಐಟಿ ತನಿಖೆಯ ಬಗ್ಗೆ, ತನಿಖೆ ಸಾಗುತ್ತಿರುವ ಬಗ್ಗೆ ಎಲ್ಲವೂ ಗೊತ್ತಿದೆ. ತನಿಖೆಯಿಂದ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆಯೋ, ಇಲ್ಲವೋ ಎಂದು ತಿಳಿಯುತ್ತದೆ ಎಂದು. ಸತ್ಯಾಂಶ ಹೊರಬರಲಿ ಎಂದೇ ಎಸ್ಐಟಿ ರಚನೆ ಮಾಡಿರುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರ ಮನೆಗೆ ಪ್ರಗತಿಪರರು, ವಿರೇಂದ್ರ ಹೆಗ್ಗಡೆ ಅವರ ಸಹೋದರರು ಆಗಮಿಸಿ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿದ್ದರು. ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿಯೇ ಇದ್ದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಸದನದಲ್ಲಿ ತಿಳಿಸಿದರು.
ಸರ್ಕಾರ ಯಾರ ಒತ್ತಡದಿಂದ ಎಸ್ಐಟಿ ರಚಿಸಿದೆ ಎಂದು ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಪ್ರಗತಿಪರರು, ನಗರ ನಕ್ಸಲರು ಹೋಗಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಕರಣ ಕುರಿತು ಸತ್ಯಾಂಶ ಹೊರಗೆ ಬರಲಿ ಎಂದು ನಾವು ಬಯಸುತ್ತೇವೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರು 28 ಕೊಲೆ ಮಾಡಿದ್ದಾರೆ ಎಂದು ಮಹೇಶ್ ತಿಮರೋಡಿ ಹೇಳಿದ್ದಾರೆ. ಇಂತಹವರ ವಿರುದ್ದ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಮೊದಲು ಹೇಳಿದ್ದು ಯಾರು ಗೊತ್ತಾ ಎಂದು ಕೈ ಶಾಸಕರು ಪರೋಕ್ಷವಾಗಿ ಹರೀಶ್ ಪೂಂಜಾ ಹೆಸರನ್ನು ಹೇಳಿದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಡಳಿತ ಪಕ್ಷದ ಶಾಸಕರು ಸದನದಲ್ಲಿ ಪ್ರತಿಪಕ್ಷವನ್ನು ತೀವ್ರ ತರಾಟೆ ತೆಗೆದುಕೊಂಡರು.
ಯಾರದೇ ಒತ್ತಡಕ್ಕ ಮಣಿಯದೆ ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ. ಅಧಿಕಾರಿಗಳು ಬಹಳ ಗಂಭೀರವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದಾರೆ. ದೂರುದಾರ ಇಡೀ ಧರ್ಮಸ್ಥಳ ಪೂರ್ತಿ ತೋರಿಸಿದರೆ ಅಗೆಯಲು ಸಾಧ್ಯವಿಲ್ಲ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.
ಎಸ್ಐಟಿ ಅಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಿದ್ದೇವೆ. ಎಷ್ಟು ಜಾಗದಲ್ಲಿ ಅಗೆಯಬೇಕು ಎಂದು ಎಸ್ಐಟಿ ತಿರ್ಮಾನ ಮಾಡುತ್ತದೆ. ಇದು ಸರ್ಕಾರದ ತೀರ್ಮಾನವಲ್ಲ. ಎಫ್ಎಸ್ಎಲ್ ವರದಿ ಬರುವವರೆಗೂ ತಕ್ಷಣದಿಂದಲೇ ಅಗೆಯುವುದನ್ನು ನಿಲ್ಲಿಸಿದ್ದಾರೆ ಎಂದರು.
ಪ್ರಕರಣ ಬಹಳ ಸೂಕ್ಷ್ಮವಾದದ್ದು, ಮಾಧ್ಯಮಗಳು ಊಹಾಪೋಹದಿಂದ ವರದಿ ಮಾಡುತ್ತಿವೆ ಎಂದು ತಿಳಿಸಿದರು.
ಧರ್ಮಸ್ಥಳದ ವಿವಿಧ ಸ್ಥಳಗಳಲ್ಲಿ ದೊರೆತಿರುವ ಮೂಳೆಗಳು ಹಾಗೂ ಅಸ್ಥಿಪಂಜರದ ಎಫ್ಎಸ್ಎಲ್ ವರದಿ ಬಂದ ನಂತರ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸದನಕ್ಕೆ ಉತ್ತರ ನೀಡಿದರು.