7 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ಸಿಎಂ ಸಿದ್ದರಾಮಯ್ಯ: 2500 ರೂಪಾಯಿ ದಂಡ ಪಾವತಿ

ಮಾರ್ಚ್‌ನಲ್ಲಿ ಚಂದ್ರಿಕಾ ಹೋಟೆಲ್ ಜಂಕ್ಷನ್‌ನಲ್ಲಿ ಹಾಗೂ ಆಗಸ್ಟ್‌ನಲ್ಲಿ ಶಿವಾನಂದ ವೃತ್ತ ಮತ್ತು ಡಾ. ರಾಜ್‌ಕುಮಾರ್ ಪ್ರತಿಮೆ ಜಂಕ್ಷನ್‌ ಬಳಿ ಸಿಎಂ ಸಿದ್ದರಾಮಯ್ಯ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದಾರೆ.;

Update: 2025-09-06 04:45 GMT

ಮುಖ್ಯಮಂತ್ರಿ ಸಿದ್ದರಾಮಯ್ಯ 

Click the Play button to listen to article

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಇನೊವಾ ಕಾರು, 2024ರಿಂದ ಈಚೆಗೆ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಬೆಂಗಳೂರಿನ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಟಿಎಂಎಸ್) ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಆರು ಬಾರಿ ಸೀಟು ಬೆಲ್ಟ್ ಧರಿಸದಿದ್ದಕ್ಕಾಗಿ ಮತ್ತು ಒಂದು ಬಾರಿ ಅತಿವೇಗದಲ್ಲಿ ಚಲಿಸಿದ್ದಕ್ಕಾಗಿ ದಂಡ ವಿಧಿಸಲಾಗಿದ್ದು, ಸದ್ಯ ದಂಡದ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ 50ರಷ್ಟು ರಿಯಾಯಿತಿ ನೀಡಿತ್ತು. ಈ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಾರಿನ ಮೇಲಿದ್ದ ಎಲ್ಲಾ ಪ್ರಕರಣಗಳಿಗೆ ದಂಡ ಪಾವತಿಸಲಾಗಿದೆ. ಆರು ಸೀಟು ಬೆಲ್ಟ್ ಉಲ್ಲಂಘನೆ ಪ್ರಕರಣಗಳಿಗೆ ರಿಯಾಯಿತಿ ಅಡಿಯಲ್ಲಿ 2,500 ರೂಪಾಯಿ ದಂಡವನ್ನು ಕಟ್ಟಲಾಗಿದೆ.

ಮುಖ್ಯಮಂತ್ರಿಗಳು ಕಾರಿನ ಮುಂಭಾಗದ ಸೀಟಿನಲ್ಲಿ ಪ್ರಯಾಣಿಸುವಾಗ ಸೀಟು ಬೆಲ್ಟ್ ಧರಿಸದೇ ಇರುವುದು ಕ್ಯಾಮೆರಾಗಳಲ್ಲಿ ಹಲವು ಬಾರಿ ಸೆರೆಯಾಗಿದೆ. ಫೆಬ್ರುವರಿ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಹಳೇ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್‌ನಲ್ಲಿ ಸೀಟು ಬೆಲ್ಟ್ ಧರಿಸಿರಲಿಲ್ಲ. ಮಾರ್ಚ್‌ನಲ್ಲಿ ಚಂದ್ರಿಕಾ ಹೋಟೆಲ್ ಜಂಕ್ಷನ್‌ನಲ್ಲಿ ಹಾಗೂ ಆಗಸ್ಟ್‌ನಲ್ಲಿ ಶಿವಾನಂದ ವೃತ್ತ ಮತ್ತು ಡಾ. ರಾಜ್‌ಕುಮಾರ್ ಪ್ರತಿಮೆ ಜಂಕ್ಷನ್‌ ಬಳಿ ನಿಯಮ ಉಲ್ಲಂಘಿಸಿದ್ದಾರೆ. ಜುಲೈ 9ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಮುಖ್ಯಮಂತ್ರಿಗಳಿದ್ದ ಕಾರು ಅತಿವೇಗವಾಗಿ ಚಲಿಸಿರುವುದು ಐಟಿಎಂಎಸ್‌ನಲ್ಲಿ ದಾಖಲಾಗಿದೆ.

ಕಾರಿನ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

Tags:    

Similar News