ಸಿಎಂ ʼಕೈ ಎತ್ತಿದʼ ಬಳಿಕ ನೀಡಿದ್ದ ರಾಜೀನಾಮೆ ವಾಪಸ್; ನಾರಾಯಣ ಭರಮನಿ ಡಿಸಿಪಿಯಾಗಿ ಪದೋನ್ನತಿ
ಏಪ್ರಿಲ್ ತಿಂಗಳಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ಕಾಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಆಗ ಸಿದ್ದರಾಮಯ್ಯ ಭದ್ರತೆ ಉಸ್ತುವಾರಿ ಧಾರವಾಡ ಎಎಸ್ಪಿ ಭರಮನಿ ಅವರನ್ನು ಹೊಡೆಯುವ ರೀತಿ ಕೈ ಎತ್ತಿ ಸಿಟ್ಟು ಪ್ರದರ್ಶಿಸಿದ್ದರು.;
ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕೈ ಎತ್ತಿದ್ದರು’ ಎಂಬ ಕಾರಣಕ್ಕೆ ಬೇಸರಗೊಂಡಿದ್ದ ರಾಜೀನಾಮೆಗೆ ಮುಂದಾಗಿದ್ದ ಧಾರವಾಡದ ಎಎಸ್ಪಿ ನಾರಾಯನ ಭರಮನಿ ಅವರನ್ನು ಕೊನೆಗೂ ಮನವೊಲಿಸಿರುವ ರಾಜ್ಯ ಸರ್ಕಾರ, ಪದೋನ್ನತಿ ಮಾಡಿ ಬೆಳಗಾವಿ ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ (ಡಿಸಿಪಿ)ರಾಗಿ ನೇಮಿಸಿದೆ.
ಗುರುವಾರ ಆದೇಶ ಹೊರಡಿಸಿರುವ ಸರ್ಕಾರ, ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ ಅವರನ್ನು ಬೆಳಗಾವಿ ಡಿಸಿಪಿ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕೈ ಎತ್ತಿದ್ದರು’ ಎಂಬ ಕಾರಣಕ್ಕೆ ಬೇಸರಗೊಂಡಿದ್ದ ಭರಮನಿ ರಾಜೀನಾಮೆಗೆ ಮುಂದಾಗಿದ್ದರು. ಈ ಪ್ರಕರಣ ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿತ್ತು ಹಾಗೂ ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೆ ಸಿಲುಕಿಸಿತ್ತು.
ರಾಜೀನಾಮೆಗೆ ಮುಂದಾಗಿದ್ದ ಭರಮನಿ
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಡೆಯಲು ಕೈ ಎತ್ತಿದ ಘಟನೆಗೆ ಸಂಬಂಧಿಸಿದಂತೆ, ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ತೀವ್ರ ಮುಜುಗರ ಅನುಭವಿಸಿದ್ದ ಹಿನ್ನೆಲೆಯಲ್ಲಿ ಭರಮನಿ ರಾಜೀನಾಮೆ ನೀಡಿದ್ದು, ಈಗ ಅವರ ಮನವೊಲಿಕೆಗೆ ರಾಜ್ಯ ಸರ್ಕಾರ ಮುಂದಾಗಿತ್ತು.
ಎಎಸ್ಪಿ ಅವರ ರಾಜೀನಾಮೆ ಬೆಳವಣಿಗೆ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಜತೆ ನಡೆದುಕೊಳ್ಳುವ ರೀತಿ ವಿರೋಧ ಪಕ್ಷಗಳಿಗೆ ರಾಜಕೀಯ ಅಸ್ತ್ರ ನೀಡಿದಂತಾಗಿತ್ತು.
ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ವತಃ ನಾರಾಯಣ ಭರಮನಿ ಅವರ ಮನವೊಲಿಕೆಗೆ ಮುಂದಾಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಮನವೊಲಿಕೆಗೆ ಭರಮನಿ ಅವರು ಒಪ್ಪದ ಕಾರಣ, ಗೃಹ ಸಚಿವರು ದೂರವಾಣಿ ಮೂಲಕ ಭರಮನಿ ಅವರೊಂದಿಗೆ ಚರ್ಚೆ ನಡೆಸಿ, ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಲು ಯತ್ನಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಭರಮನಿ ಮನವೊಲಿಸುವಂತೆ ಗೃಹ ಸಚಿವರಿಗೆ ಸೂಚನೆ ನೀಡಿದ್ದರು.
ಎಎಸ್ಪಿ ನಾರಾಯಣ ಭರಮನಿ ಅವರತ್ತ (ಹೊಡೆಯುವ ಸನ್ನೆಯಂತೆ) ಕೈತೋರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಕರಣದ ಹಿನ್ನೆಲೆ
ಏಪ್ರಿಲ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ಕಾಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೈಡ್ರಾಮ ನಡೆಸಿದ್ದರು. ಆಗ ವೇದಿಕೆ ಮೇಲೆ ಭಾಷಣ ಆರಂಭಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಸಮಾವೇಶದ ಭದ್ರತೆ ಉಸ್ತುವಾರಿ ನೋಡಿಕೊಂಡಿದ್ದ ಧಾರವಾಡ ಎಎಸ್ಪಿ ಎನ್.ವಿ. ಭರಮನಿ ಅವರನ್ನು ಹೊಡೆಯುವ ರೀತಿ ಕೈ ಎತ್ತಿ ಸಿಟ್ಟು ಪ್ರದರ್ಶಿಸಿದ್ದರು.
ಮುಖ್ಯಮಂತ್ರಿಯ ಈ ವರ್ತನೆಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಸಾರ್ವಜನಿಕವಾಗಿ ಅಪಮಾನಕ್ಕೆ ಒಳಗಾಗಿದ್ದ ಭರಮನಿ ಅವರು ಜೂನ್ 12 ರಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವಿಆರ್ಎಸ್ ಕೋರಿ ಪತ್ರ ಬರೆದಿದ್ದರು.
ತಮ್ಮ ಪತ್ರದಲ್ಲಿ, "ನಾನು ಮಾಡದ ತಪ್ಪಿಗೆ ಮುಖ್ಯಮಂತ್ರಿಗಳಿಂದ ಸಾರ್ವಜನಿಕವಾಗಿ ಅವಮಾನ ಮತ್ತು ಅಪಮಾನಕ್ಕೆ ಒಳಗಾಗಿರುವುದರಿಂದ ನನಗೆ ಬೇರೆ ಆಯ್ಕೆ ಇಲ್ಲ. ದಯವಿಟ್ಟು ನನ್ನ ರಾಜೀನಾಮೆ ಸ್ವೀಕರಿಸಲು ವಿನಂತಿಸುತ್ತೇನೆ" ಎಂದು ಉಲ್ಲೇಖಿಸಿದ್ದರು.
ಸಿಎಂ ಸ್ಪಷ್ಟನೆ
ಸಿಎಂ ಸಿದ್ದರಾಮಯ್ಯ ಅವರು ಭರಮನಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಈ ಘಟನೆಯು ಉದ್ದೇಶಪೂರ್ವಕವಾಗಿ ನಡೆದದ್ದಲ್ಲ ಎಂದು ಸ್ಪಷ್ಟಪಡಿಸಿದ್ದರು.
"ನಾನು ಬೇಕು ಅಂತ ಮಾಡಿದ ಕೆಲಸವಲ್ಲ. ನಿಮಗೆ ಅಗೌರವ ಇಲ್ಲವೇ ಅಪಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ" ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದರಿಂದ ತಮಗೆ ಬೇಸರವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಬಲ್ಲ ಮೂಲಗಳ ಪ್ರಕಾರ, ನಾರಾಯಣ ಭರಮನಿ ಅವರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದು, ಸರ್ಕಾರದ ಮನವೊಲಿಕೆ ಯಶಸ್ವಿಯಾದಂತಾಗಿದೆ. ರಾಜೀನಾಮೆ ವಾಪಸ್ ಬಳಿಕ ಎಎಸ್ಪಿ (ಹೆಚ್ಚುವರಿ ಪೊಲೀಸ್ ಅಧೀಕ್ಷಕ) ಆಗಿದ್ದ ಭರಮನಿ ಅವರನ್ನು ಬೆಳಗಾವಿ ಪೊಲೀಸ್ ಆಯುಕ್ತರ ವಲಯದಲ್ಲಿ ಕಾನೂನು ಸುವ್ಯವಸ್ಥೆಯ ಡಿಸಿಪಿ (ಉಪ ಪೊಲೀಸ್ ಆಯುಕ್ತ)ರಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.