ನಿರ್ಮಾಪಕಿಯಾದ ಯಶ್ ತಾಯಿ ಪುಷ್ಪಾ; ‘ಕೊತ್ತಲವಾಡಿ’ ನಿರ್ಮಾಣ
‘ಕೆಜಿಎಫ್ 2’ ಚಿತ್ರದ ನಂತರ ಯಶ್ ನಿರ್ಮಾಪಕರಾಗಿದ್ದಾರೆ. ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ತಾವು ನಟಿಸುತ್ತಿರುವ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರಗಳೆರಡಕ್ಕೂ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.;
‘ಕೆಜಿಎಫ್ 2’ ಚಿತ್ರದ ನಂತರ ಯಶ್ ನಿರ್ಮಾಪಕರಾಗಿದ್ದಾರೆ. ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ತಾವು ನಟಿಸುತ್ತಿರುವ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರಗಳೆರಡಕ್ಕೂ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಈಗ ಅವರ ತಾಯಿ ಸಹ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಯಶ್ ಅವರ ತಾಯಿಯ ಹೆಸರು ಪುಷ್ಪಾ ಮತ್ತು ತಂದೆಯ ಹೆಸರು ಅರುಣ್ ಕುಮಾರ್. ಇದೀಗ ಪುಷ್ಪಾ ಅವರು ಪುಷ್ಪಾ ಅರುಣ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಇದರಡಿ ಮೊದಲ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.
PA ಪ್ರೊಡಕ್ಷನ್ಸ್ ನಿರ್ಮಾಣದ ಮೊದಲ ಚಿತ್ರಕ್ಕೆ ‘ಕೊತ್ತಲವಾಡಿ’ ಎಂದು ಹೆಸರು ಇಡಲಾಗಿದೆ. ಪೃಥ್ವಿ ಅಂಬಾರ್ ನಾಯಕನಾಗಿ ನಟಿಸಿದರೆ, ಅವರಿಗೆ ನಾಯಕಿಯಾಗಿ ಕಿರುತೆರೆ ನಟಿ ಕಾವ್ಯಾ ಶೈವ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಮುಂತಾದ ಜನಪ್ರಿಯ ನಟರು ನಟಿಸುತ್ತಿದ್ದಾರೆ.
ಇಲ್ಲಿಯವರೆಗೂ ಬೇರೆ ಚಿತ್ರಗಳಲ್ಲಿ ಹೆಚ್ಚಾಗಿ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ, ‘ಕೊತ್ತಲವಾಡಿ’ಯಲ್ಲಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲೂ ರಗೆಡ್ ಆಗಿ ಕಾಣಿಸಿಕೊಂಡಿದ್ದಾರೆ.
‘ಕೊತ್ತಲವಾಡಿ’ ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯಾಗಿದ್ದು, ಈ ಚಿತ್ರವನ್ನು ಶ್ರೀರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕೆ.ವಿ. ರಾಜು, ರವಿ ಶ್ರೀವತ್ಸ ಮುಂತಾದವರ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದ್ದು, ಶ್ರೀರಾಜ್ ಜೊತೆಗೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಸಹ ಹೊಸಬರೇ.
‘ಕೊತ್ತಲವಾಡಿ’ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಇದೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.