ಚಂದನ್ ಶೆಟ್ಟಿ ಮತ್ತು ನಿವೇದಿತಾ ಜೋಡಿ ದಾಂಪತ್ಯ ಕಳೆದ ವರ್ಷ ನಂತರ ಕೊನೆಯಾಯಿತು. ನಾಲ್ಕು ವರ್ಷಗಳ ದಾಂಪತ್ಯದ ನಂತರ, ಕಳೆದ ವರ್ಷ ಅವರಿಬ್ಬರೂ ಅಧಿಕೃತವಾಗಿ ದೂರಾದರು. ಅದಾಗಿ ಈಗ ಅವರಿಬ್ಬರೂ ಮತ್ತೆ ಜೊತೆಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಹೊಸ ಚಿತ್ರವೊಂದಕ್ಕೆ ಚಂದನ್ ಮತ್ತು ನಿವೇದಿತಾ ಅಭಿನಯದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.
ಚಂದನ್ ಮತ್ತು ನಿವೇದಿತಾ ಒಟ್ಟಿಗೆ ಇದ್ದ ಕಾಲದಲ್ಲಿ ‘ಮುದ್ದು ರಾಕ್ಷಸಿ’ ಎಂಬ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದರು. ಈ ಮಧ್ಯೆ, ಅವರ ಜೀವನದಲ್ಲಿ ಹಲವು ಘಟನೆಗಳು ನಡೆದು, ಅವರಿಬ್ಬರೂ ದೂರವೂ ಆಗಿದೆ. ಆದರೆ, ಚಿತ್ರದ ಚಿತ್ರೀಕರಣ ಮಾತ್ರ ಮುಕ್ತಾಯವಾಗಿರಲಿಲ್ಲ. ಈಗ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆದಿದ್ದು, ಇತ್ತೀಚೆಗೆ ಅಂಜನಾಪುರದಲ್ಲಿರುವ ವಜ್ರಮುನಿ ಎಸ್ಟೇಟ್ನಲ್ಲಿ ಚಂದನ್ ಮತ್ತು ನಿವೇದಿತಾ ಅಭಿನಯದ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.
ವಿಚ್ಛೇದನ ನಂತರ ಮೊದಲ ಬಾರಿಗೆ ಚಂದನ್, ನಿವೇದಿತಾ ಮುಖಾಮುಖಿಯಾದರು. ನಾಯಕ-ನಾಯಕಿ ಬೀಳ್ಕೊಡುವ ದೃಶ್ಯ ಇದಾಗಿದ್ದು, ಈ ಸಂದರ್ಭದಲ್ಲಿ ಗ್ಲಿಸರಿನ್ ಹಾಕದಿದ್ದರೂ ನಿವೇದಿತಾ ಕಣ್ಣಂಚಲ್ಲಿ ನೀರು ತುಂಬಿಬಂದಿತ್ತು. ಇದರೊಂದಿಗೆ ‘ಮುದ್ದುರಾಕ್ಷಸಿ’ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿವೇದಿತಾ, ‘ಇದೊಂದು ಭಾವನಾತ್ಮಕ ಕ್ಷಣವಾಗಿತ್ತು. ದೃಶ್ಯವೂ ಹಾಗೆಯೇ ಇದೆ. ನಮ್ಮಿಬ್ಬರಲ್ಲೂ ಒಂದೊಳ್ಳೆಯ ಬಂಧವಿತ್ತು. ಈಗಲೂ ಮುಂದುವರೆದಿದೆ. ಹಾಗಾಗಿ, ಸಹಜವಾಗಿಯೇ ಅಳು ಬಂತು’ ಎಂದು ಹೇಳಿದರು.
‘ಮುದ್ದು ರಾಕ್ಷಸಿ’ ಒಂದು ಸೈಕೋ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರವನ್ನು ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ನಿರ್ಮಿಸುತ್ತಿದ್ದಾರೆ. ಪುನೀತ್ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.
‘ಮುದ್ದು ರಾಕ್ಷಸಿ’ ಚಿತ್ರಕ್ಕೆ ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಎ. ಕರುಣಾಕರ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.