ಮತ್ತೆ ಮತ್ತೆ ವಿವಾದದ ಸುಳಿಯಲ್ಲಿ ನಟ ದರ್ಶನ್‌

ಬಾಕ್ಸ್‌ ಆಫೀಸ್‌ ಸುಲ್ತಾನ್‌ ದರ್ಶನ್‌ ವಿವಾದದ ಸುಳಿಯಲ್ಲಿ

Update: 2024-02-23 09:23 GMT
ನಟ ದರ್ಶನ್‌

ಕನ್ನಡ ಚಿತ್ರರಂಗದ ಮೇರು ನಟ, ಚಾಲೆಂಜಿಂಗ್‌ ಸ್ಟಾರ್‌, ಬಾಕ್ಸ್‌ ಆ‌ಫೀಸ್‌ ಸುಲ್ತಾನ್ ಎಂದೇ ಖ್ಯಾತಿ ಗಳಿಸಿರುವ ದರ್ಶನ್‌ ತೂಗುದೀಪ್‌ ಅವರ ಮೇಲೆ ಒಂದಿಲ್ಲೊಂದು ವಿವಾದಗಳು ಸುತ್ತಿಕೊಳ್ಳುತ್ತಲ್ಲೇ ಇವೆ.

ನಟ ದರ್ಶನ್‌ ತೂಗುದೀಪ್‌ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದು, ಹಲವು ಚಿತ್ರಗಳಿಗೆ ನಿರ್ಮಾಪಕರೂ ಆಗಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ವಿವಾದಕ್ಕೆ ಯಾರಾದರು ಒಳಗಾಗಿದ್ದಾರೆ ಎಂದರೆ, ಅದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎನ್ನುವಂತಾಗಿದೆ.

ಈಗ ಯಾವ ವಿಷಯಕ್ಕೆ ವಿವಾದ ?

ಇತ್ತೀಚೆಗೆ ನಟ ದರ್ಶನ್‌ ಅವರ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ದರ್ಶನ್‌ ಅವರು ಮಾತನಾಡಿದ ಮಾತು ವಿವಾದಕ್ಕೆ ಕಾರಣವಾಗಿದ್ದು, ಅಲ್ಲಿಂದ ಒಂದೊಂದೇ ವಿವಾದಗಳು ಸೃಷ್ಟಿಯಾಗುತ್ತಿವೆ.

ದರ್ಶನ್‌ ಅವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ 25ನೇ ವರ್ಷ ಆಗಿರುವ ಸಂಭ್ರಮಾರ್ಥವಾಗಿ ಶ್ರೀರಂಗಪಟ್ಟದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ದರ್ಶನ್‌ ಮಾತನಾಡಿರುವ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿದೆ.

ಈಚೆಗೆ ಕೇಳಿ ಬಂದಿದ್ದ ವಿವಾದಗಳು?

ನಿರ್ಮಾಪಕ ಉಪಾಮತಿ ಶ್ರೀನಿವಾಸ್‌ ಗೌಡ ಹಾಗೂ ನಟ ದರ್ಶನ್‌ ಅವರ ನಡುವೆ ಆಗ್ಗಾಗ್ಗೆ ಮಾತಿನಚಕಮಕಿ ನಡೆಯುತ್ತಿರುತ್ತೆ. ಇದೀಗ ಕಾಟೇರ ಚಿತ್ರದ ಶೀರ್ಷಿಕೆ ಮಾಲೀಕತ್ವದ ವಿವಾದ ಭುಗಿಲೆದಿದ್ದೆ.

ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಟ ದರ್ಶನ್‌ ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಅವರನ್ನು ಪರೋಕ್ಷವಾಗಿ ತಗಡು ಎಂದಿದ್ದರು. ಇದಕ್ಕೆ ಒಕ್ಕಲಿಗರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಾಣಿಜ್ಯ ಮಂಡಳಿಯಲ್ಲಿ ದೂರನ್ನೂ ದಾಖಲಿಸಿದೆ.

ಅಲ್ಲದೇ ದರ್ಶನ್‌ ಅವರು, ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾತೆ. ಅವಳ್‌ ಅಜ್ಜಿನಾ ಬಡಿಯಾ. ನಾನ್ಯಾಕೆ ತಲೆಕೆಡಿಸಿಕೊಂಡು, ಕೂತ್ಕೊಳ್ಳಿ ಹೋಗ್ರಯ್ಯ ಎಂದಿದ್ದ ವಿಡಿಯೋ ವೈರಲ್‌ ಆಗಿತ್ತು.

ಇದಕ್ಕೆ ಗೌಡತಿಯರ ಸೇನೆ ಆಕ್ಷೇಪ ವ್ಯಕ್ತಪಡಿಸಿದ್ದು, ಮಹಿಳಾ ಆಯೋಗದ ಆಯುಕ್ತರಿಗೆ ಪತ್ರ ಬರೆದಿದೆ.

ಇತ್ತೀಚನ ವರ್ಷದಲ್ಲಿ ಎದುರಾದ ವಿವಾದಗಳಿವು

ದರ್ಶನ್‌ ಅವರು ಅತಿ ಹೆಚ್ಚು ವಿವಾದಕ್ಕೆ ಕಾರಣವಾಗಿದ್ದು, ಅವರ ಪತ್ನಿ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾದ ಪ್ರಕರಣದಲ್ಲಿ. 2011ರಲ್ಲಿ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು.

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು. 28 ದಿನಗಳ ಕಾಲ ದರ್ಶನ್‌ ಜೈಲಿನಲ್ಲಿದ್ದರು.

ನವರಸ ನಾಯಕ ಜಗ್ಗೇಶ್‌ ಅವರ ತೋತಾಪುರಿ ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ಬಂದಿದ್ದ ದರ್ಶನ್ ಅಭಿಮಾನಿಗಳು ಗದ್ದಲ ಸೃಷ್ಟಿಸಿದ್ದು ಸಹ ವಿವಾದಕ್ಕೆ ಕಾರಣವಾಗಿತ್ತು.

ದರ್ಶನ್‌ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುವಾಗ ಪ್ರೇಮ್ ಏನು ಪುಡಂಗಾ, ಎರಡು ಕೊಂಬೈತಾ? ಎಂದು ಹೇಳಿದ್ದೂ ವಿವಾದವಾಗಿತ್ತು. ದರ್ಶನ್‌ ಹಾಗೂ ದೃಶ್ಯ ಮಾಧ್ಯಮಗಳೊಂದಿಗೂ ವಿವಾದ ಸೃಷ್ಟಿಯಾಗಿತ್ತು.

ಇನ್ನು ಕನ್ನಡದ ಮೇರು ನಟರಾದ ದರ್ಶನ್‌ ಹಾಗೂ ಸುದೀಪ್‌ ಅವರ ನಡುವೆ ಮೆಜೆಸ್ಟಿಕ್‌ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣದೊಂದು ಗೊಂದಲ ಸೃಷ್ಟಿಯಾಗಿತ್ತು.

ಈ ಇಬ್ಬರು ನಟರು ಸೇರಬೇಕು ಎಂದು ಎರಡು ಕಡೆಯ ಅಭಿಮಾನಿಗಳು ಬಯಸುತ್ತಿದ್ದಾರೆ. ಅದಿನ್ನು ಸಾಧ್ಯವಾಗಿಲ್ಲ.

ಇಷ್ಟೆಲ್ಲ ವಿದಾದಗಳ ನಡುವೆಯೂ ಅವರ ಅಭಿಮಾನಿಗಳು ದರ್ಶನ್‌ ಕೈಬಿಟ್ಟಿಲ್ಲ. ದರ್ಶನ್‌ ಅವರು ಯಾವುದೇ ವಿವಾದಕ್ಕೆ ಗುರಿಯಾಗಲಿ ಅಥವಾ ಕೋಪದಿಂದ ವರ್ತಿಸಲಿ ಅವರ ಅಭಿಮಾನಿಗಳು ದರ್ಶನ್‌ ಅವರನ್ನು ಬಿಟ್ಟುಕೊಟ್ಟಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿಯೂ ದರ್ಶನ್‌ ಅವರ ಪರ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. 

Tags:    

Similar News