62ನೇ ವಸಂತಕ್ಕೆ ಕಾಲಿಟ್ಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌

ನಟ ಶಿವರಾಜ್​ಕುಮಾರ್ ಅವರು ಶುಕ್ರವಾರ (ಜು.12) 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ, ಈ ಬಾರಿ ಹುಟ್ಟುಹಬ್ಬ ಆಚರಣೆಗೆ ನಿಮ್ಮ ಜೊತೆ ಇರಲಾಗುತ್ತಿಲ್ಲ.. ಬಳಿಕ ವರ್ಷವಿಡೀ ಸೆಲೆಬ್ರೇಟ್‌ ಮಾಡೋಣ ಎಂದು ಶಿವಣ್ಣ ಹೇಳಿದ್ದಾರೆ.

Update: 2024-07-12 07:16 GMT
ನಟ ಶಿವರಾಜ್​ಕುಮಾರ್ ಅವರು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Click the Play button to listen to article

ನಟ ಶಿವರಾಜ್​ಕುಮಾರ್ ಅವರು ಶುಕ್ರವಾರ (ಜು.12) 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1962ರ ಜುಲೈ 12ರಂದು ಜನಿಸಿದ ನಾಗರಾಜು ಶಿವಪುಟ್ಟಸ್ವಾಮಿ ಕನ್ನಡಿಗರ ಪ್ರೀತಿಯ ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಆಗಿ ಎಲ್ಲರ ಮೆಚ್ಚಿನ ನಟನಾಗಿದ್ದಾರೆ. 

ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಹೀಗೆ ಹಲವು ಬಿರುದುಗಳಿಂದ ಕರೆಸಿಕೊಳ್ಳುವ ಶಿವರಾಜ್‌ಕುಮಾರ್, ಮೂರು ದಶಕಗಳಿಂದ ಸುಮಾರು 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್‍ಕುಮಾರ್, 1986ನೇ ಇಸವಿಯಲ್ಲಿ ʼಆನಂದ್ʼ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿ. ಉದಯಶಂಕರ್ ಪುತ್ರ ಚಿ. ಗುರುದತ್, ನಟಿ ಸುಧಾರಾಣಿ ಇವರಿಬ್ಬರ ಮೊದಲ ಚಿತ್ರವೂ ʼಆನಂದ್ʼ ಆಗಿತ್ತು. ಬಳಿಕ ಬಂದ ಸಿನಿಮಾ ʼರಥಸಪ್ತಮಿʼ ಮತ್ತು ʼಮನಮೆಚ್ಚಿದ ಹುಡುಗಿʼ ಈ ಎರಡೂ ಸಿನಿಮಾಗಳು ಶತದಿನ ಪ್ರದರ್ಶನ ಕಂಡವು. ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೆ ಪಾತ್ರರಾದರು.

1992ರಿಂದ 1993ರ ಅವಧಿಯಲ್ಲಿ ಶಿವರಾಜ್‍ಕುಮಾರ್ ಅಭಿನಯದ ಚಿತ್ರಗಳು ಸತತವಾಗಿ ಸೋಲು ಕಂಡವು. 1994ರಲ್ಲಿ ಉಪೇಂದ್ರ ನಿರ್ದೇಶನದ ʼಓಂʼ ಚಿತ್ರ ಶಿವರಾಜ್‍ಕುಮಾರ್ ಅವರಿಗೆ ಭಿನ್ನ ಇಮೇಜ್ ನೀಡಿತು. 1995ರಲ್ಲಿ ʼಜನುಮದ ಜೋಡಿʼ ಮತ್ತು ʼನಮ್ಮೂರ ಮಂದಾರ ಹೂವೆʼ ಚಿತ್ರಗಳ ಅಭೂತಪೂರ್ವ ಯಶಸ್ಸು ಶಿವರಾಜ್‍ ಕುಮಾರ್ ಅವರನ್ನು ಸೂಪರ್‌ ಸ್ಟಾರ್‌ ಪಟ್ಟಕ್ಕೆ ಕೊಂಡೊಯ್ಯಿತು. ಬಳಿಕ ಮತ್ತೆ ಗೆಲುವು ಕಾಣಿಕೊಳ್ಳಲು 1999ರಲ್ಲಿ ತೆರೆಕಂಡ ಎಕೆ 47 ಚಿತ್ರದವರೆಗೆ ಶಿವರಾಜ್‍ಕುಮಾರ್ ಕಾಯಬೇಕಾಯಿತು. 

ʻಭೈರತಿ ರಣಗಲ್ʼ ಟೀಸರ್‌ ಬಿಡುಗಡೆ 

ಬರ್ತ್‌ಡೇ ಅಂಗವಾಗಿ ಶಿವಣ್ಣ ಅಭಿನಯದ ʻಭೈರತಿ ರಣಗಲ್ʼ ತಂಡ ಟೀಸರ್‌ ಬಿಡುಗಡೆ ಮಾಡಿದೆ. ಶಿವರಾಜ್‌ ಕುಮಾರ್‌ ಅವರು ರಗಡ್‌ ಲುಕ್‌ನಲ್ಲಿ ಅಬ್ಬರಿಸಿದ್ದಾರೆ. ʻನಾನು ತಾಳ್ಮೆ ಕಳ್ಕೊಂಡಾಗಲೆಲ್ಲ. ತುಂಬಾ ಜನ ತಲೆಗಳ್ ಕಳ್ಕೊಂಡಿದ್ದಾರೆʼ ಎಂದು ಮಾಸ್ ಡೈಲಾಗ್‌ ಹೊಡೆದು ಅಬ್ಬರಿಸಿದ್ದಾರೆ.

ನರ್ತನ್ ನಿರ್ದೇಶನದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿದೆ ʼಭೈರತಿ ರಣಗಲ್ʼ ಸಿನಿಮಾ. ಗೀತಾ ಪಿಕ್ಚರ್ಸ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಲಿದೆ. ಆದರೆ ದಿನಾಂಕ ಅನೌನ್ಸ್‌ ಆಗಿಲ್ಲ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ಭೈರತಿ ರಣಗಲ್ ಸಿನಿಮಾವನ್ನು ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಲಾಯರ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

Full View

ಶಿವರಾಜ್‌ ಕುಮಾರ್‌ ಕೈಯಲ್ಲಿರುವ ಸಿನಿಮಾಗಳು 

ಸದ್ಯ ನಟ ಶಿವರಾಜ್‌ ಕುಮಾರ್‌ ರೋಹಿತ್‌ ಪದಕಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʼಉತ್ತರಕಾಂಡʼ ಸಿನಿಮಾ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಶಿವರಾಜ್‌ ಕುಮಾರ್‌ ಜತೆಯಾಗಿ ನಟಿಸುವ ʼಶಿವಗಣʼ  ಸಿನಿಮಾ, ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ನಿರ್ದೇಶನದ ʼನೀ ಸಿಗುವರೆಗೂʼ, ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್‌ ರಾವ್‌ ಆಕ್ಷನ್‌ ಕಟ್‌ ಹೇಳಲಿರುವ ʼಭೈರವನ ಕೊನೆಪಾಠʼ, ಸಚಿನ್ ರವಿ ಕಥೆ ಮತ್ತು ನಿರ್ದೇಶನದ ಸಿನಿಮಾ ʼಅಶ್ವತ್ಥಾಮʼ, ರವಿ ಅರಸು ನಿರ್ದೇಶನದಲ್ಲಿ ʼಆರ್‌ಡಿಎಕ್ಸ್‌ʼ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಶಿವಣ್ಣ ಅಭಿಮಾನಿಗಳಿಗೆ ನಿರಾಸೆ 

ನಟ ಶಿವರಾಜ್ ಕುಮಾರ್ ಸಾಮಾನ್ಯವಾಗಿ ಪ್ರತಿವರ್ಷ ಮನೆಯ ಬಳಿ ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಆದರೆ  ಈ ಬಾರಿ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ತಾವು ಇಂದು ಅಭಿಮಾನಿಗಳಿಗೆ ಲಭ್ಯ ಇರುವುದಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

"ಪ್ರತಿವರ್ಷ ನನ್ನ ಹುಟ್ಟುಹಬ್ಬ ಆಗೋದು ನಿಮ್ಮ ಜೊತೆ ಸಮಯ ಕಳೆದಾಗ. ನೀವು ಅಕ್ಕರೆಯಿಂದ ಕೊಡುವ ಹ್ಯಾಂಡ್‌ಶೇಕ್, ಪ್ರೀತಿಯ ಅಪ್ಪುಗೆ, ನೀಡುವ ಆಶೀರ್ವಾದವೇ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಬರ್ತಡೇಗೆ ನಿಮ್ಮ ಜೊತೆ ಇರೋದಿಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ವರ್ಷವಿಡೀ ಒಟ್ಟಿಗೇ ಪ್ರತಿದಿನ ಸೆಲೆಬ್ರೇಟ್ ಮಾಡೋಣ. ನಾನು ಬರ್ತ್‌ ಡೇಗೆ ಇರದೆ ಇದ್ದರೂ, ನಿಮ್ಮ ಜೊತೆ ರಣಗಲ್ ಇರ್ತಾನೆ" ಎಂದು ನಟ ಶಿವರಾಜ್ ಕುಮಾರ್ ಟೈಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಹಾಗೇ, ನಿಮ್ಮ ಆಶೀರ್ವಾದ ಸದಾ ಇರಲಿ ಎಂದೂ ಮನವಿ ಮಾಡಿದ್ದಾರೆ.

Tags:    

Similar News