ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ: 10 ವಿಧೇಯಕ ಮಂಡನೆಗೆ ಸಜ್ಜು
ಈ ಅಧಿವೇಶನದಲ್ಲಿ ಸರ್ಕಾರವು ನಾಗರಿಕ ಪರಮಾಣು ವಲಯದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವ ಮಹತ್ವದ ‘ಪರಮಾಣು ಶಕ್ತಿ ಮಸೂದೆ, 2025’ ಅನ್ನು ಮಂಡಿಸಲಿದೆ.
ಸಾಂದರ್ಭಿಕ ಚಿತ್ರ
ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಸರ್ಕಾರವು 10 ಪ್ರಮುಖ ವಿಧೇಯಕಗಳನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಆದರೆ, ರಾಷ್ಟ್ರವ್ಯಾಪಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಗಳಲ್ಲಿನ ಅಕ್ರಮಗಳ ಆರೋಪಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸುವ ಸಾಧ್ಯತೆಯಿದೆ. ಬಿಹಾರ ವಿಧಾನಸಭಾ ಚುನಾವಣೆಯ ನಂತರ ನಡೆಯುತ್ತಿರುವ ಈ ಅಧಿವೇಶನವು ರಾಜಕೀಯವಾಗಿ ಮಹತ್ವದ್ದಾಗಿದೆ.
ಈ ಅಧಿವೇಶನದಲ್ಲಿ ಸರ್ಕಾರವು ನಾಗರಿಕ ಪರಮಾಣು ವಲಯದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವ ಮಹತ್ವದ ‘ಪರಮಾಣು ಶಕ್ತಿ ಮಸೂದೆ, 2025’ ಅನ್ನು ಮಂಡಿಸಲಿದೆ. ಇದರೊಂದಿಗೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಗುರಿಯೊಂದಿಗೆ ‘ಭಾರತೀಯ ಉನ್ನತ ಶಿಕ್ಷಣ ಆಯೋಗ ಮಸೂದೆ’ಯನ್ನು ಕೂಡ ಪರಿಚಯಿಸಲಾಗುವುದು. ಈ ಮಸೂದೆಯು ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಲು ಮತ್ತು ಪಾರದರ್ಶಕತೆಯನ್ನು ತರಲು ಉದ್ದೇಶಿಸಿದೆ.
ಇತರ ಪ್ರಮುಖ ಮಸೂದೆಗಳಲ್ಲಿ ‘ರಾಷ್ಟ್ರೀಯ ಹೆದ್ದಾರಿ (ತಿದ್ದುಪಡಿ) ಮಸೂದೆ’ ಸೇರಿದ್ದು, ಇದು ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿದೆ. ವ್ಯಾಪಾರ-ವಹಿವಾಟು ಸುಲಭಗೊಳಿಸಲು ‘ಕಾರ್ಪೊರೇಟ್ ಕಾನೂನು (ತಿದ್ದುಪಡಿ) ಮಸೂದೆ, 2025’ ಮತ್ತು ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಹೆಚ್ಚಿಸಲು ‘ವಿಮಾ ಕಾನೂನು (ತಿದ್ದುಪಡಿ) ಮಸೂದೆ, 2025’ ಅನ್ನೂ ಮಂಡಿಸಲಾಗುವುದು.
ವಿಪಕ್ಷಗಳ ಹೋರಾಟದ ಅಸ್ತ್ರಗಳು
ಇತ್ತೀಚಿನ ಬಿಹಾರ ಚುನಾವಣಾ ಫಲಿತಾಂಶದ ನಂತರ ನಡೆಯುತ್ತಿರುವ ಈ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ಸಜ್ಜಾಗಿವೆ. ಪ್ರಮುಖವಾಗಿ, ರಾಷ್ಟ್ರವ್ಯಾಪಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ದೋಷಗಳನ್ನು ವಿಪಕ್ಷಗಳು ಪ್ರಸ್ತಾಪಿಸಲಿವೆ. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದೆ ಎನ್ನಲಾದ ಮತ ವಂಚನೆಯ ಆರೋಪಗಳು ಕೂಡ ಸದನದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಲಿವೆ.
ದೆಹಲಿಯಲ್ಲಿನ ವಾಯು ಮಾಲಿನ್ಯ ಸಮಸ್ಯೆ ಮತ್ತು ಮಣಿಪುರ ಹಿಸಾಚಾರದಂತಹ ವಿಷಯಗಳನ್ನು ಸಹ ವಿಪಕ್ಷಗಳು ಅಸ್ತ್ರವನ್ನಾಗಿ ಬಳಸಿಕೊಳ್ಳುವ ನಿರೀಕ್ಷೆಯಿದೆ. ಅಧಿವೇಶನ ಸುಸೂತ್ರವಾಗಿ ನಡೆಯಲು ಸಹಕರಿಸುವಂತೆ ಸರ್ಕಾರ ಮನವಿ ಮಾಡಿದ್ದರೂ, ವಿವಾದಾತ್ಮಕ ವಿಷಯಗಳಿಂದಾಗಿ ಕಲಾಪದಲ್ಲಿ ಏರುಪೇರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಅಧಿವೇಶನದ ಅವಧಿ ಮತ್ತು ನಿರೀಕ್ಷೆ
ಡಿಸೆಂಬರ್ 1 ರಿಂದ ಆರಂಭವಾಗಿ ಡಿಸೆಂಬರ್ 19 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಒಟ್ಟು 15 ಕಲಾಪಗಳು ನಡೆಯಲಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ಕಾರದ ಪ್ರಸ್ತಾವನೆಯಂತೆ ಅಧಿವೇಶನ ಕರೆಯಲು ಅನುಮೋದನೆ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಅಧಿವೇಶನವು ರಚನಾತ್ಮಕವಾಗಿರಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದ್ದರೂ, ಪ್ರಸ್ತುತ ರಾಜಕೀಯ ವಾತಾವರಣವನ್ನು ಗಮನಿಸಿದರೆ ಸಂಘರ್ಷ ಅನಿವಾರ್ಯವೆನಿಸಿದೆ.