ಪಟೇಲ್‌ ಪ್ರತಿಮೆಯಲ್ಲಿ ಬಿರುಕು ಎಂದು ಪೋಸ್ಟ್:‌ ಎಫ್‌ಐಆರ್ ದಾಖಲು

Update: 2024-09-10 12:35 GMT

ಕೆವಾಡಿಯಾ (ಗುಜರಾತ್):‌ ಗುಜರಾತಿನ ಏಕತಾ ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಯಾವಾಗ ಬೇಕಾದರೂ ಬೀಳಬಹುದು ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ನಿರ್ಮಿಸಿದ 182 ಮೀಟರ್ ಎತ್ತರದ ಪ್ರತಿಮೆಯು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಸೆಪ್ಟೆಂಬರ್ 8 ರಂದು ಬೆಳಗ್ಗೆ 9.52 ಕ್ಕೆ ʻRaGa4Indiaʼ ಹ್ಯಾಂಡಲ್‌ನಲ್ಲಿದ್ದ ಪೋಸ್ಟ್‌ನಲ್ಲಿ ʻಪ್ರತಿಮೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು, ಯಾವಾಗ ಬೇಕಾದರೂ ಬೀಳಬಹುದು,ʼ ಎಂದು ಬರೆಯಲಾಗಿತ್ತು. ಪೋಸ್ಟ್‌ ನಲ್ಲಿ ಪ್ರತಿಮೆ ನಿರ್ಮಾಣ ಸಮಯದ ಫೋಟೋ ಇದ್ದಿತ್ತು. ಆನಂತರ ಅದನ್ನು ಅಳಿಸಿ ಹಾಕಲಾಗಿದೆ.

ಯುನಿಟಿ ಪ್ರದೇಶಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಆಡಳಿತ ಪ್ರಾಧಿಕಾರದ ಘಟಕ-1ರ ಡಿಸಿ ಅಭಿಷೇಕ್ ರಂಜನ್ ಸಿನ್ಹಾ ಅವರ ದೂರಿನ ಆಧಾರದ ಮೇಲೆ ಸೆಕ್ಷನ್ 353 (1) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಸುಳ್ಳು ಸುದ್ದಿ ಮೂಲಕ ಜನರಲ್ಲಿ ಭಯ ಮೂಡಿಸಿ ಶಾಂತಿ ಕದಡುವ ಪ್ರಯತ್ನ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ದೂರಲಾಗಿದೆ.

ಅಕ್ಟೋಬರ್ 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಈ ಪ್ರತಿಮೆಯು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. 

Tags:    

Similar News