ನ್ಯಾಯದ ಕಟಕಟೆಯಲ್ಲಿ ಶೃತಿ ಹರಿಹರನ್; ತೆರೆ ಕಾಣಲಿದೆ ಬಹುಭಾಷಾ ನಟಿಯ ಬಹು ನಿರೀಕ್ಷಿತ ಚಿತ್ರ ʼದ ವರ್ಡಿಕ್ಟ್ʼ
ಬಹುಭಾಷಾ ತಾರೆ ಶೃತಿ ಹರಿಹರನ್ ಅಭಿನಯದ ತಮಿಳು ಚಿತ್ರ ʻದ ವರ್ಡಿಕ್ಟ್ʼ ಶುಕ್ರವಾರ ಬಿಡುಗಡೆಯಾಗಲಿದೆ. ನ್ಯಾಯಾಲಯದ ಕಟಕಟೆಯ ವಾದ-ವಿವಾದಗಳ ಸುತ್ತ ಸುತ್ತುವ ಈ ಚಿತ್ರ ಅಮೆರಿಕೆಯಲ್ಲಿ ನಡೆಯುವಂಥದ್ದು. ಇದರಲ್ಲಿ ಶೃತಿ ಅವರದ್ದು, ಪಕ್ಕದ ಮನೆಯ ಹುಡುಗಿಯಂಥ ಪಾತ್ರ.;
ಬಹುಭಾಷಾ ತಾರೆ ಶೃತಿ ಹರಿಹರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ತಮಿಳು ಚಿತ್ರ ʻದ ವರ್ಡಿಕ್ಟ್ʼ ಶುಕ್ರವಾರ ಬಿಡುಗಡೆಯಾಗಲಿದೆ. ಕೃಷ್ಣ ಶಂಕರ್ ಚೊಚ್ಚಲ ಚಿತ್ರವಾದ ʻದ ವರ್ಡಿಕ್ಟ್ʼ ನಲ್ಲಿ ಶೃತಿ ಹರಿಹರನ್ ಜೊತೆಯಲ್ಲಿ ವರಲಕ್ಷ್ಮಿ ಶರತ್ ಕುಮಾರ್, ಸುಹಾಸಿನಿ ಮಣಿರತ್ನಂ ಅವರು ಅಭಿನಯಿಸಿದ್ದಾರೆ.
ನ್ಯಾಯಾಲಯದ ಕಟಕಟೆಯ ವಾದ-ವಿವಾದಗಳ ಸುತ್ತ ಸುತ್ತುವ ಈ ಚಿತ್ರ ಅಮೆರಿಕೆಯಲ್ಲಿ ನಡೆಯುವಂಥದ್ದು. ಈ ಚಿತ್ರದಲ್ಲಿ ವಿದ್ಯುಲೇಖಾ ರಾಮನ್ ಹಾಗೂ ಪ್ರಕಾಶ್ ಮೋಹನ್ ದಾಸ್ ಅಭಿನಯಿಸಿದ್ದಾರೆ. ಸದ್ಯಕ್ಕೆ ಇದು ತಮಿಳು ಚಿತ್ರರಂಗದ ಬಹು ನಿರೀಕ್ಷೆಯ ಚಿತ್ರವೆನ್ನಬಹುದು.
ಈ ಶೃತಿಹರಿಹರನ್ ಕಳೆದ 13 ವರ್ಷಗಳಲ್ಲಿ ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಮೊದಲ ಚಿತ್ರ 2012ರಲ್ಲಿ ಬಿಡುಗಡೆಯಾದ ಮಲೆಯಾಳಂ ಭಾಷೆಯ ʻಸಿನಿಮಾ ಕಂಪನಿʼ. ʻದ ವರ್ಡಿಕ್ಟ್ʼ ಬಿಡುಗಡೆಯಾಗುತ್ತಿರುವ 31ನೇ ಚಿತ್ರ. ಈ ಹದಿಮೂರು ವರ್ಷಗಳಲ್ಲಿ ಶೃತಿ ಅವರು ಸಿನಿಪಯಣದಲ್ಲಿ ಕಂಡಿರುವ ಏರಿಳಿತವನ್ನು ಯಾವುದೇ ನಟಿ ಕಂಡಿರುವ ಸಾಧ್ಯತೆ ಇಲ್ಲ.
ರಾಷ್ಟ್ರ ಪ್ರಶಸ್ತಿಯ ಗರಿ
ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯಕ್ಕಾಗಿ ಉತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ನಾಲ್ಕು ಅಭಿನೇತ್ರಿಯರ ಪೈಕಿ ಶೃತಿ ಹರಿಹರನ್ ಒಬ್ಬರು. ಇನ್ನುಳಿದವರು; ನಂದಿನಿ ಭಕ್ತವತ್ಸಲ (ಕಾಡು), ತಾರಾ ಅನುರಾಧ (ಹಸಿನಾ), ಉಮಾಶ್ರೀ (ಗುಲಾಬಿ ಟಾಕೀಸ್).
ಶೃತಿ ಹರಿಹರನ್ ಅಭಿನಯಿಸಿ, ಮನ್ಸೋರೆ ನಿರ್ದೇಶಿಸಿದ್ದ ನಾತಿಚರಾಮಿ ಚಿತ್ರ ಐದು ರಾಷ್ಟ್ರ ಪ್ರಶಸ್ತಿ ಗಳಿಸಿದ್ದು ಕೂಡ ಚಿತ್ರದ ಹೆಚ್ಚುಗಾರಿಕೆ. ಶೃತಿ ಹರಿಹರನ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮೊದಲು ಹೆಸರು ತಂದುಕೊಟ್ಟ ಚಿತ್ರ ಪವನ್ ಕುಮಾರ್ ನಿರ್ದೇಶನದ ʻಲೂಸಿಯಾʼ. ಹನ್ನೆರಡು ವರ್ಷದ ಹಿಂದೆ ತೆರೆಕಂಡ ಈ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್. ಈ ಚಿತ್ರದಲ್ಲಿ ಶೃತಿ ಹರಿಹರನ್ ಅವರದ್ದು ದ್ವಿಪಾತ್ರವಾಗಿತ್ತು. ಒಂದು ಕೆಳ ಮಧ್ಯಮ ವರ್ಗದ ಹೆಣ್ಣುಮಗಳ ಪಾತ್ರ, ಮತ್ತೊಂದು ಸಿನಿಮಾ ತಾರೆಯ ಪಾತ್ರ. ಈ ಚಿತ್ರಕ್ಕೆ ಶೃತಿ ಹರಿಹರನ್ ಸ್ವತಃ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದು ವಿಶೇಷ. ಈ ಚಿತ್ರ ಪ್ರೇಕ್ಷಕರ ಮೆಚ್ಚಿಗೆ ಗಳಿಸಿದ್ದೇ ಅಲ್ಲದೆ, ವಿಮರ್ಶಕರಿಗೂ ಇಷ್ಟವಾಗಿತ್ತು. ಅನಂತರ ಇದು ಹಲವು ಭಾಷೆಗಳಲ್ಲಿ ರೀಮೇಕ್ ಆಗಿ ಪ್ರದರ್ಶನ ಕೂಡ ಕಂಡಿತು.
ಆದರೆ, ತನ್ನ ದಿಟ್ಟ ನಿಲುವಿಗಾಗಿ, ಚಿತ್ರರಂಗದಲ್ಲಿ ಹೆಣ್ಣು ಕಲಾವಿದರು ಶೋಷಣೆಯನ್ನು ಸಹಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ಕಾರಣಕ್ಕಾಗಿ ಇಷ್ಟು ವರ್ಷಗಳಲ್ಲಿ ಈ ಶೃತಿ ಹರಿಹರನ್ ಎಂಬ ಕಲಾವಿದೆ ಅನುಭವಿಸಿದ ಸಂಕಷ್ಟಗಳನ್ನು ಕುರಿತು ಬರೆದರೆ ಅದೇ ಒಂದು ಕಾದಂಬರಿ ಆದೀತು. ಅಥವಾ ಒಂದು ಚಿತ್ರಕ್ಕೆ ವಸ್ತುವಾದೀತು.
ʻನಾತಿಚರಾಮಿʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ
ಅದೇನೇ ಇರಲಿ. ಬಂದ ಸವಾಲುಗಳನ್ನೆಲ್ಲ ಎದುರಿಸಿ, ಈ ಕಲಾವಿದೆ ಸುಟ್ಟು ಬೂದಿಯಾದರೂ, ಬೂದಿಯಿಂದ ಮತ್ತೆ ಹುಟ್ಟಿಬರುವ ಫೀನಿಕ್ಸ್ ನಂತೆ ಮೇಲೆದ್ದು, ಬದುಕು ಕಟ್ಟಿಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ. ಏಕೆಂದರೆ ಚಿತ್ರರಂಗದಿಂದಲೇ ಬಹಿಷ್ಕರಿಸಿ, ಅವರನ್ನು ಯಾವುದೇ ಚಿತ್ರಗಳಿಗೆ ತೆಗೆದುಕೊಳ್ಳದಂತೆ ಉಳಿದವರಿಗೆ ತಾಕೀತು ಮಾಡಿದ ಕಾರಣ, ಶೃತಿ ಹರಿಹರನ್ ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ತಮ್ಮನ್ನು ಹಿಂಸಿಸಿದವರಿಗೆ ಸವಾಲು ಹಾಕಿ ಈ ಕಲಾವಿದೆ ಮತ್ತೆ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಲಕ್ಕೇರುತ್ತಿದ್ದಾರೆ. ಬಹುಶಃ ಈ ನೋವಿನ ದಿನಗಳಲ್ಲಿಯೇ ಅವರ ʻನಾತಿಚರಾಮಿʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದದ್ದು, ಚಿತ್ರರಂಗಕ್ಕೊಂದು ಪಾಠವಾಯಿತು. ಪ್ರತಿಭೆ ಇದ್ದವರನ್ನು ತುಳಿಯುವುದು ಅಷ್ಟು ಸುಲಭವೂ ಅಲ್ಲ ಎಂಬುದು ಮನವರಿಕೆಯಾಗಿರಬೇಕು.
ತಮಗಾದ ಲೈಂಗಿಕ ಶೋಷಣೆ ಶೃತಿ ಹರಿಹರನ್
ಶೃತಿ ಹರಿಹರನ್ ತಮಗಾದ ಲೈಂಗಿಕ ಶೋಷಣೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರೂ, ಕೊನೆಗೆ ನ್ಯಾಯಾಲಯದಲ್ಲಿ ಚಿತ್ರರಂಗದ ಬಲಿಷ್ಠರನ್ನು ಎದುರಿಸಿ ಹಣ್ಣುಗಾಯಿ, ನೀರುಗಾಯಿಯಾದದ್ದು ಇಂದು ಕರ್ನಾಟಕದ ಚಿತ್ರರಂಗದ ಇತಿಹಾಸಕ್ಕೆ ಕಪ್ಪು ಚುಕ್ಕೆ ಎಂದೇ ಹೇಳಬಹುದು. ಆದರೆ ಶೃತಿ ಹರಿಹರನ್ ನ್ಯಾಯಾಲಯದಲ್ಲಿ ಕಲಿತ ಪಾಠ ಅವರ ಈ ಹೊಸ ಚಿತ್ರ ಶುಕ್ರವಾರ ಬಿಡುಗಡೆಯಾಗಲಿರುವ ʻದ ವರ್ಡಿಕ್ಟ್ʼ ನಲ್ಲಿ ಉಪಯೋಗಕ್ಕೆ ಬಂದಂತಿದೆ. ಕಾರಣ; ಈ ಚಿತ್ರ ನ್ಯಾಯಾಲಯದ ಕಟಕಟೆಯಲ್ಲಿ ನಡೆಯುವಂಥದ್ದು. ಆದರೆ, ಭಾರತೀಯ ನ್ಯಾಯಾಲಯದಲ್ಲಿ ಅಲ್ಲ. ಅದು, ಅಮೆರಿಕಾದಂಥ ʻಕಾರ್ಪೋರೇಟ್ ʼದೇಶದ, ಪ್ರಜಾಸತ್ತೆಯ ಭದ್ರ ಬುನಾದಿಯಲ್ಲಿ ಮುಂದುವರಿಯುತ್ತಿದೆ ಎಂದು ಭಾವಿಸಲಾದ ನ್ಯಾಯಾಲಯದಲ್ಲಿ.
“ಈ ಚಿತ್ರದಲ್ಲಿ ನನ್ನದು ನಮ್ರತಾ ಎಂಬ ಹೆಣ್ಣಿನ ಪಾತ್ರ. ಇದೊಂದು ತೀರಾ ಸರಳವಾದ ಪಾತ್ರ. ನಿಮ್ಮ ಪಕ್ಕದ ಮನೆಯ ಹುಡುಗಿ ಎಂದು ಕೊಳ್ಳುವಂಥಾ ಪಾತ್ರ ” ಎಂದು ಅಷ್ಟೇ ಸರಳವಾಗಿ ಶೃತಿ ಹರಿಹರನ್ ಹೇಳಿದರು.
ಶುಕ್ರವಾರ ಬಿಡುಗಡೆಯಾಗಲಿರುವ ʻದ ವರ್ಡಿಕ್ಟ್ʼ ಚಿತ್ರದ ಕುರಿತು ʻದ ಫೆಡರಲ್-ಕರ್ನಾಟಕʼ ಅವರನ್ನು ಮಾತಿಗೆಳೆದಾಗ, ಚಿತ್ರಕತೆಯ ಒಂದಿಷ್ಟೂ ಸುಳಿವು ನೀಡದಂತೆ, ಕ್ಲುಪ್ತವಾಗಿ ಶೃತಿ ಹರಿಹರನ್ ಮಾತನಾಡಿದಾಗ, ಚಿತ್ರದ ಕುರಿತು ಹೆಚ್ಚೇನೂ ಮಾತನಾಡದಂತೆ ನಿರ್ಮಾಪಕರು, ನಿರ್ದೇಶಕರು ಸೂಚ್ಯವಾಗಿ ತಿಳಿಸಿರುವುದು ಮನವರಿಕೆಯಾಗದೇ ಇರಲಿಲ್ಲ.
ಕೊಲೆ ಆರೋಪದಿಂದ ಮುಕ್ತ?
ಆದರೂ, ಶೃತಿ ಹರಿಹರನ್ ಒಟ್ಟಾರೆ ಮಾತುಗಳಲ್ಲಿ ಗ್ರಹಿಸಿದ್ದು. ಈ ಚಿತ್ರದಲ್ಲಿ ಶ್ರೀಮಂತ ಅಮೇರಿಕಾದ ಮಹಿಳೆಯೊಬ್ಬರ ಕೊಲೆಯ ಆರೋಪ ಆಕೆಯ ಮೇಲೆ ಬರುತ್ತದೆ. ಈ ಕೊಲೆಯ ಸುತ್ತ ಸುತ್ತುವ, ಕೊಲೆ ಆರೋಪದಿಂದ ನಮ್ರತಾ ಮುಕ್ತಮುಕ್ತಳಾಗುತ್ತಾಳೆಯೇ? ಎನ್ನುವುದು ಒಟ್ಟು ಕಥೆ.
“ಒಂದು ರೀತಿಯಲ್ಲಿ Karma returns” ಎನ್ನುವಂಥ ಕಥೆ ಇದು. ಈ ಕತೆಯಲ್ಲಿ ನಿಗೂಢತೆ ಇದೆ, ಭಾವುಕ ಸನ್ನಿವೇಶಗಳಿವೆ. ಜೊತೆಗೆ ಕಾನೂನಿನ ಬಿಗಿ ಬಂಧ, ವಾದ-ಪ್ರತಿವಾದ ಕೊನೆಯವರೆಗೂ ಪ್ರೇಕ್ಷಕರನ್ನು ಕುರ್ಚಿಯ ಅಂಚಿನಲ್ಲಿ ಕೂಡಿಸುವ ಚಿತ್ರ ಇದು ಎಂಬುದು ಅವರ ಮಾತುಗಳಿಂದಲೇ ತಿಳಿದು ಬಂದಿತು.
ಪ್ರಕಾಶ್ ಮೋಹನದಾಸ್ ನಿರ್ಮಿಸಿದ ಈ ಚಿತ್ರದಲ್ಲಿ ಸರಿ ತಪ್ಪುಗಳ ನಡುವಿನ ಗೆರೆ ಅಪಾಯಕಾರಿ ರೀತಿಯಲ್ಲಿ ಮಸುಕಾಗಿ ಬಿಂಬಿತವಾಗಿದೆಯಂತೆ. “ನಿಧಾನವಾಗಿ ಪ್ರಕರಣ ನ್ಯಾಯಾಲಯದಲ್ಲಿ ಪೊರೆ ಕಳಚಿಕೊಳ್ಳುತ್ತಿದ್ದಂತೆ, ವಂಚನೆ, ಮುಚ್ಚಿಟ್ಟ ಸಂಬಂಧಗಳು, ಒಂದು ಮನೋವೈಜ್ಞಾನಿಕ ಬಲೆಯಂತೆ ಮತ್ತೆ ಸುತ್ತಿಕೊಳ್ಳುತ್ತದೆ. ಎಲ್ಲ ಪಾತ್ರಗಳೂ ಬಚ್ಚಿಟ್ಟ ಸತ್ಯಗಳೊಂದಿಗೆ ಮುಖಾಮುಖಿಯಾಗಬೇಕಾದ ಸಂದರ್ಭ ಎದುರಾಗುತ್ತದೆ” ಎಂದರು ಶೃತಿ ಹರಿಹರನ್ .
ಅಲ್ಲಿಯ ಕೋರ್ಟ್ ಭಿನ್ನ
“ಈ ಚಿತ್ರ ಕೇವಲ ಇಪ್ಪತ್ಮೂರು ದಿನಗಳಲ್ಲಿ ಚಿತ್ರೀಕರಣಗೊಂಡಿದ್ದು. ವಿದೇಶದಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಆದರೆ, ನಿರ್ದೇಶಕರ ಶಿಸ್ತು, ಎಷ್ಟರ ಮಟ್ಟಿಗಿತ್ತು ಎಂದರೆ, ಯಾವುದೇ ರೀತಿಯ ಅಡಚಣೆ ಇಲ್ಲದೆ ಚಿತ್ರೀಕರಣ ನಡೆದು ಮುಗಿಯಿತು. ಹಾಗೆ ನೋಡಿದರೆ ಚಿತ್ರಕತೆಯ ಹಂತದಿಂದಲೇ ನಾನು ಚಿತ್ರದೊಂದಿಗೆ ಬೆರೆತು ಹೋಗಿದ್ದೆ. ಇದೊಂದು ಬೇರೆಯದೇ ರೀತಿಯ ಚಿತ್ರ ಎಂದು ನನಗೆ ಮನವರಿಕೆಯಾಗಿತ್ತು” ಎಂದ ಶೃತಿ ಅವರನ್ನು, ನಮ್ಮಲ್ಲಿನ Court Room ಗೂ ಅಲ್ಲಿಗೂ ಏನಾದರೂ ವ್ಯತ್ಯಾಸವಿದೆಯೇ? ಎಂದು ಕೇಳಿದಾಗ, “ನಮ್ಮಲ್ಲಿಯ Court room ಗಳಿಗಿಂತ ಅಲ್ಲಿನ proceedings ತೀರಾ ಭಿನ್ನವಾದದ್ದು. ಒಂದನ್ನು ಒಂದಕ್ಕೆ ಹೋಲಿಸುವುದು ಕಷ್ಟ” ಎಂದು ಉತ್ತರಿಸಿದರು.
ಶೃತಿ ಈ ಹಿಂದೆಯೂ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದರು. “ಅಂದಿಗೂ, ಇಂದಿಗೂ ಏನಾದರೂ ವ್ಯತ್ಯಾಸವನ್ನು ಗಮನಿಸಿದಿರಾ?” ಎಂದು ಕೇಳಿದಾಗ ಹೌದೆಂದರು. ಹೆಚ್ಚು ವಿವರಗಳಿಗೆ ಇಳಿಯದೆ, “ಅವರು ಎಷ್ಟು ಚೆನ್ನಾಗಿ ಚಿತ್ರೀಕರಣ ಪೂರ್ವ ಪ್ರಕ್ರಿಯೆಯನ್ನು ಮುಗಿಸಿದ್ದರಿಂದಲೇ, ಕೇವಲ ಇಪ್ಪತ್ಮೂರು ದಿನಗಳಲ್ಲಿ ಚಿತ್ರೀಕರಣ ಮುಗಿಸಲು ಸಾಧ್ಯವಾಯಿತು. ನನ್ನ ಹದಿಮೂರು ವರ್ಷಗಳ ಚಿತ್ರ ಬದುಕಿನಲ್ಲಿ ಇದೊಂದು ಮರೆಯಲಾಗದ ಅನುಭವ ಮತ್ತು ದಾಖಲೆ. ಸಿನಿಮಾಟೋಗ್ರಾಫರ್, ಅರವಿಂದ ಕೃಷ್ಣ ಎಲ್ಲವನ್ನೂ ನಿಖರವಾಗಿ ಯೋಜಿಸಿರುತ್ತಿದ್ದರು. ಅದನ್ನು ಮುರಿಯುವ ಧೈರ್ಯ ಯಾರಿಗೂ ಇರಲಿಲ್ಲ. ಅವರು ಒಮ್ಮೆ ʼಸೈಲೆನ್ಸ್ʼ ಎಂದರೆ, ಮುಗಿಯಿತು, ಎಲ್ಲ ಕಡೆ ಮೌನ. ಆದರೆ ಅವರು ಎಷ್ಟು ವೃತ್ತಿಪರರೆಂದರೆ, ಒಂದು ನಿಮಿಷ ಕೂಡ ವ್ಯರ್ಥಮಾಡುತ್ತಿರಲಿಲ್ಲ. ಚಿತ್ರೀಕರಣ ಮಾಡಿದಾಗ ಅಮೆರಿಕೆ ಶ್ವೇತವರ್ಣವನ್ನು ಹೊದ್ದುಕೊಂಡಿತ್ತು. ಹಾಗಾಗೆ ಅರವಿಂದ ಕೃಷ್ಣ ಹೆಚ್ಚು ಬೆಳಕನ್ನು ಬಳಸುವ ಅಗತ್ಯವೇ ಬರಲಿಲ್ಲ. ಜನಗಳ ಮಧ್ಯೆಯೇ ಚಿತ್ರೀಕರಣ ನಡೆಸುತ್ತಿದ್ದರು, ಜನರಿಗೆ ಚಿತ್ರೀಕರಣ ನಡೆಯುತ್ತಿರುವ ಅನುಭವವೇ ಆಗದಂತೆ ಅರವಿಂದ ಕೃಷ್ಣ ಎಚ್ಚರ ವಹಿಸಿದ್ದರು ಎಂದರು ಶೃತಿ ಹರಿಹರನ್.
2018ರ #MeToo ಅನುಭವ
ಒಲ್ಲದ ಮನಸ್ಸಿನಿಂದ ಶೃತಿ ಅವರನ್ನು 2018ರ #MeToo ಅನುಭವದ ನಂತರ ಹಾಗೂ, ಇತ್ತೀಚೆಗೆ ಕೇರಳ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಎಬ್ಬಿಸಿದ ಬಿರುಗಾಳಿಯಿಂದ ಏನಾದರೂ ಬದಲಾವಣೆ ಕಂಡಿತೇ? ಎಂದು ಪ್ರಶ್ನಿಸಿದಾಗ ಅವರು ಸ್ವಲ್ಪವೂ ಮನಸ್ಸಿಗೆ ಹಚ್ಚಿಕೊಳ್ಳದೆ, “ಸಾಕಷ್ಟು ಬದಲಾಗಿದೆ” ಎಂದು ಒಪ್ಪಿಕೊಂಡರು. ಎಲ್ಲರೂ, ತಮ್ಮತಮ್ಮದೇ ಆದ ಗಡಿಯನ್ನು ಹಾಕಿಕೊಂಡು, ಯಾವುದೇ ರೀತಿಯಲ್ಲೂ ಮನಸ್ಸಿಗೆ ನೋವಾಗದಂತೆ, ಮುಜುಗರವಾಗದಂತೆ ನಡೆದುಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ವೃತ್ತಿಪರ ವಾತಾವರಣ, ಹಿಂದಿರುಗಿದ್ದು, ನನ್ನ ಗಮನಕ್ಕೆ ಬಂತು. ಅದರಲ್ಲಿ ಅನುಮಾನವೇನಿಲ್ಲ” ಎಂದರು.
ಶೃತಿ ಹೆಚ್ಚು ಮಾತನಾಡಿದ್ದು, ಸುಹಾಸಿನಿ ಮಣಿರತ್ನಂ ಅವರನ್ನು ಕುರಿತು. ಶೃತಿ ಸುಹಾಸಿನಿಯಿಂದ ಸಾಕಷ್ಟು ಪ್ರಭಾವಗೊಂಡಂತೆ ಕಂಡಿತು. ಇಬ್ಬರೂ, ಕನ್ನಡ ಚಿತ್ರಗಳಲ್ಲಿ ನಟಿಸಿದವರು. “ಸುಹಾಸಿನಿ ಅವರ ವೃತ್ತಿಪರತೆ ನನಗೆ ಮಾದರಿಯಾಗಿ ಕಂಡಿತು. ಸೆಟ್ ಗೆ ಬರುತ್ತಿದ್ದಂತೆ ಅವರು ನಿರ್ದೇಶಕರು ಹೇಳಿದಂತೆ ಕೇಳುವ ರೀತಿ, ಆಕೆ ನಿರ್ದೇಶಕರ ಕಲಾವಿದೆ ಎಂಬುದನ್ನು ಮತ್ತೆ ಮತ್ತೆ ಖಚಿತಪಡಿಸುವಂತಿತ್ತು. ಕೆಲವು ದೃಶ್ಯಗಳಲ್ಲಿ ಅದರಲ್ಲೂ ಕ್ಲೋಸಪ್ ದೃಶ್ಯಗಳಲ್ಲಿ ಅವರ ಇರುವಿಕೆ ಕೇವಲ ನೆಪ ಮಾತ್ರವಾಗಿದ್ದರೂ, ತಮ್ಮ ಕಣ್ಣುಗಳ ಮೂಲಕ, ಸಣ್ಣ ಸಣ್ಣ ಸಂಗತಿಗಳ ಮೂಲಕ ತಮ್ಮ ಇರುವಿಕೆಯನ್ನು ಖಚಿತಪಡಿಸುತ್ತಿದ್ದ ರೀತಿ ನನಗೆ ಮೆಚ್ಚಿಗೆಯಾಯಿತು. ಅಂಥ ಅಭಿನಯ ಸೂಕ್ಷ್ಮತೆ ಯ ಮೂಲಕ ಅವರು ದೃಶ್ಯವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಅಂಥ ಪ್ರಬುದ್ಧ ಅಭಿನಯ ಎಲ್ಲರಿಗೂ ಸಾಧ್ಯವಿಲ್ಲ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು”.
ಕೇಳಲೇ ಬೇಕಾದ ಪ್ರಶ್ನೆಗಳು ನಮಗೂ ಮುಗಿದಿದ್ದವು. “ಸಿನಿಮಾ ನೋಡಿ ಹೇಳಿ” ಎಂದು ಹೇಳುವುದನ್ನು ಶೃತಿ ಮರೆಯಲಿಲ್ಲ.