ಸಂವಿಧಾನ ಪೀಠಿಕೆ 'ತಂದೆ-ತಾಯಿ ಇದ್ದಂತೆ', ಬದಲಾಯಿಸಬಾರದು: ಉಪರಾಷ್ಟ್ರಪತಿ ಜಗದೀಪ್ ಧನಕರ್
ಕೊಚ್ಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.;
ಸಂವಿಧಾನದ ಪೀಠಿಕೆಯಲ್ಲಿನ ಸಮಾಜವಾದ ಹಾಗೂ ಜಾತ್ಯತೀತ ಪದಗಳ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ, ಭಾರತೀಯ ಸಂವಿಧಾನದ ಪೀಠಿಕೆಯು ತಂದೆ-ತಾಯಿ ಇದ್ದಂತೆ, ಅದನ್ನು ಎಷ್ಟೇ ಪ್ರಯತ್ನಿಸಿದರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ. ಆದಾಗ್ಯೂ ಅವರು, ಇಂದಿರಾಗಾಂಧಿ ಆಡಳಿತದಲ್ಲಿ ನಡೆಸಿದ ಸಂವಿಧಾನ ತಿದ್ದುಪಡಿಯನ್ನು ಆಕ್ಷೇಪಿಸಿದ್ದಾರೆ.
ಕೊಚ್ಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಧನಕರ್ ಅವರು, "ಐತಿಹಾಸಿಕವಾಗಿ ಯಾವುದೇ ದೇಶದ ಸಂವಿಧಾನದ ಪೀಠಿಕೆಯನ್ನು ಇದುವರೆಗೆ ಬದಲಾಯಿಸಲಾಗಿಲ್ಲ. ಆದರೆ, ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಬದಲಾಯಿಸಲಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು. ಸಾವಿರಾರು ಜನರು ಜೈಲಿನಲ್ಲಿದ್ದ ಸಂದರ್ಭದಲ್ಲಿ ನಮ್ಮ ಸಂವಿಧಾನದ ಪೀಠಿಕೆ ಬದಲಾಯಿಸಲಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ 'ಕರಾಳ ಅವಧಿ' ಎಂದು ಅವರು ಬಣ್ಣಿಸಿದ್ದಾರೆ.
ಈ ಹೇಳಿಕೆಯು ಆರ್ಎಸ್ಎಸ್ (RSS) ನೀಡಿರುವ ಹೇಳಿಕೆಗೆ ಪೂರಕವಾಗಿದೆ. 'ಸಮಾಜವಾದಿ' (Socialist) ಮತ್ತು 'ಜಾತ್ಯತೀತ' (Secular) ಎಂಬ ಪದಗಳು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಇರಲಿಲ್ಲ, ಅವುಗಳನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೇರಿಸಲಾಗಿದೆ ಎಂದು ಆರ್ಎಸ್ಎಸ್ ವಾದಿಸುತ್ತದೆ. ಧನಕರ್ ಅವರ ಹೇಳಿಕೆಯು ಈ ವಾದವನ್ನು ಪುನರುಚ್ಚರಿಸಿದೆ.