Kargil War| ತನ್ನ ಸೈನಿಕರ ಪಾತ್ರವನ್ನು ಮೊದಲ ಬಾರಿ ಒಪ್ಪಿಕೊಂಡ ಪಾಕಿಸ್ತಾನ

Update: 2024-09-08 03:50 GMT

ಪಾಕಿಸ್ತಾನದ ಸೇನೆಯು ಮೊದಲ ಬಾರಿಗೆ ಭಾರತದ ವಿರುದ್ಧ 1999 ರ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದೆ.

ದೇಶದ ರಕ್ಷಣಾ ದಿನದ ಅಂಗವಾಗಿ ರಾವಲ್ಪಿಂಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್, 1965, 1971ರಲ್ಲಿ ಮತ್ತು 1999ರಲ್ಲಿ ಕಾರ್ಗಿಲ್‌ನಲ್ಲಿ ನಡೆದ ಯುದ್ಧಗಳಲ್ಲಿ ಹಲವಾರು ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. "1948, 1965, 1971, ಅಥವಾ 1999 ರ ಕಾರ್ಗಿಲ್ ಯುದ್ಧ, ಪಾಕಿಸ್ತಾನ ಮತ್ತು ಇಸ್ಲಾಂ ಧರ್ಮಕ್ಕಾಗಿ ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ" ಎಂದು ಹೇಳುವ ಮೂಲಕ ಪಾಕಿಸ್ತಾನದ ಪಾತ್ರವನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ.

ಇದುವರೆಗೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೇನೆಯು ತನ್ನ ನೇರ ಪಾತ್ರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿರಲಿಲ್ಲ. ಈ ಹೇಳಿಕೆಯು ಪಾಕಿಸ್ತಾನದ ದೀರ್ಘಕಾಲದ ಅಧಿಕೃತ ನಿಲುವಿನಿಂದ ದೂರ ಸರಿಯುತ್ತಿರುವುದನ್ನು ಸೂಚಿಸುತ್ತಿದೆ.  ಮುಖ್ಯವಾಗಿ ಇದುವರೆಗೆ ಭಯೋತ್ಪಾದನಾ ಕೃತ್ಯಗಳಲ್ಲಿ ಮತ್ತು ಭಾರತ-ಪಾಕಿಸ್ತಾನ ಸಂಘರ್ಷಗಳಲ್ಲಿ ಕಾಶ್ಮೀರಿ ಉಗ್ರಗಾಮಿಗಳು ಮತ್ತು  "ಮುಜಾಹಿದ್ದೀನ್" ಎಂದು  ಕರೆಯಲ್ಪಡುವ ಭಯೋತ್ಪಾದಕರು ಇದ್ದಾರೆ ಎಂಬ ಚಿತ್ರಣವಿತ್ತು. ಇದೀಗ ಪಾಕಿಸ್ತಾನ ಸೇನೆಯ ನೇರ ಪಾಲ್ಗೊಳ್ಳುವಿಕೆ ಬಗ್ಗೆ ಆ ರಾಷ್ಟ್ರ ಒಪ್ಪಿಕೊಂಡಿರುವುದು ಕುತೂಹಲಕಾರಿ ಅಂಶವಾಗಿದೆ.

ಜನರಲ್ ಮುನೀರ್ ಅವರ ಹೇಳಿಕೆಗಳು ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ಸೈನಿಕರ ಸಾವನ್ನು ನೇರವಾಗಿ ಒಪ್ಪಿಕೊಂಡಿವೆ, ಪಾಕಿಸ್ತಾನಿ ಪಡೆಗಳು ಕಾಶ್ಮೀರದಲ್ಲಿ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಂಡ ಬಳಿಕ  ಮುಖಾಮುಖಿ, ಭಾರತದಿಂದ ತೀವ್ರವಾದ ಮಿಲಿಟರಿ ಪ್ರತಿಕ್ರಿಯೆಗೆ ಕಾರಣವಾಗಿತ್ತು.

1999 ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನವು ಹೀನಾಯ ಸೋಲನ್ನು ಅನುಭವಿಸಿತು, ಲಡಾಖ್‌ನಲ್ಲಿ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ಟೈಗರ್ ಹಿಲ್ ಸೇರಿದಂತೆ ಕಾರ್ಗಿಲ್ ಸೆಕ್ಟರ್‌ನಲ್ಲಿ ಎಲ್‌ಒಸಿಯ ಭಾರತದ ಬದಿಯಲ್ಲಿ ನುಸುಳುಕೋರರು ಆಕ್ರಮಿಸಿಕೊಂಡಿದ್ದ ಸ್ಥಾನಗಳನ್ನು ಭಾರತೀಯ ಸೈನಿಕರು ಯಶಸ್ವಿಯಾಗಿ ವಾಪಸ್‌ ಪಡೆದುಕೊಂಡರು..

ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ವಿಜಯ ಸಾಧಿಸಿದ ಸ್ಮರಣಾರ್ಥ ಈ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ್' ಎಂದು ಆಚರಿಸಲಾಗುತ್ತದೆ. ಒಟ್ಟು 545 ಸೈನಿಕರು ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದರು.

ಈ ಸಂಘರ್ಷವು ಪಾಕಿಸ್ತಾನಿ ಸೇನೆಯ ನೇರ ಆಕ್ರಮಣಕಾರಿ ಕೃತ್ಯ ಎಂದು ಭಾರತ ಸತತವಾಗಿ ಪ್ರತಿಪಾದಿಸಿದೆ. ಯುದ್ಧ ಕೈದಿಗಳು, ಅವರ ವೇತನ ಪುಸ್ತಕಗಳು, ಸಮವಸ್ತ್ರಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯ ಪಾಲ್ಗೊಳ್ಳುವಿಕೆಗೆ ಭಾರತದ ಹಲವಾರು ಪುರಾವೆಗಳಿವೆ.

ಕಾರ್ಗಿಲ್‌ನಲ್ಲಿ ಹುತಾತ್ಮರಾದ ಪಾಕ್‌ ಯೋಧರ ಶವಗಳನ್ನು ಸ್ವೀಕರಿಸಲು ಪಾಕಿಸ್ತಾನಿ ಸೇನೆ ನಿರಾಕರಿಸಿತ್ತು. ತರುವಾಯ, ಭಾರತೀಯ ಸೇನೆಯು ಯುದ್ಧದ ನಂತರ ಕಾರ್ಗಿಲ್‌ನಲ್ಲಿ ಹಲವಾರು ಸತ್ತ ಪಾಕಿಸ್ತಾನಿ ಸೈನಿಕರನ್ನು ಸಮಾಧಿ ಮಾಡಿತು.

ಕಾಶ್ಮೀರದ ಪ್ರಾದೇಶಿಕ ವಿವಾದ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಗಡಿಯಾಚೆಗಿನ ಚಕಮಕಿಗಳು ಸೇರಿದಂತೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧಗಳು ಹಲವಾರು ಸಮಸ್ಯೆಗಳಿಂದ ಹದಗೆಟ್ಟಿದೆ.

Tags:    

Similar News