ಆಪರೇಷನ್ ಸಿಂದೂರ್: ಮೋದಿ ಶ್ಲಾಘನೆ; ಶಶಿ ತರೂರ್ ʼಬಿಜೆಪಿಯ ಸೂಪರ್ ವಕ್ತಾರʼ ಎಂದ ಕಾಂಗ್ರೆಸ್
‘ಆಪರೇಷನ್ ಸಿಂದೂರ್’ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕಕ್ಕೆ ತೆರಳಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಶಶಿ ತರೂರ್ ಅವರು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ತಾಣಗಳ ಮೇಲೆ ದಾಳಿ ನಡೆಸಲು ಭಾರತ ಹೇಗೆ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಮುನ್ನುಗ್ಗಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ.;
ಪನಾಮದಲ್ಲಿ ಭಾರತೀಯ ಸಮುದಾಯದೊಂದಿಗೆ ಸರ್ವಪಕ್ಷ ನಿಯೋಗದ ಭೇಟಿಯ ಬಳಿಕ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಅವರು ನೀಡಿದ ಹೇಳಿಕೆಯು ವೈರಲ್ ಆದ ಬಳಿಕ ತಮ್ಮದೇ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತ ನಡೆಸಿದ ಹೋರಾಟ ಎಷ್ಟು ಮಹತ್ವವಾಗಿತ್ತು ಎನ್ನುವ ಬಗ್ಗೆ ಸಭೆಯಲ್ಲಿ ತರೂರ್ ಮುಕ್ತವಾಗಿ ಮಾತನಾಡಿದ್ದರು. ಜೊತೆಗೆ ಉರಿ ಮತ್ತು .ಆಪರೇಷನ್ ಸಿಂದೂರ್ ನಂತಹ ನಾನಾ ರೀತಿಯ ಪ್ರತೀಕಾರದ ದಾಳಿಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.
ತರೂರ್ ಅವರ ಹೇಳಿಕೆಯು ಸರ್ಕಾರಕ್ಕೆ ನೀಡಿದ ಬೆಂಬಲವೆಂದೇ ಪರಿಗಣಿಸಿರುವ ಕಾಂಗ್ರೆಸ್ ನಾಯಕತ್ವವು ಅವರನ್ನು ಕಟುವಾಗಿ ಟೀಕಿಸಿದೆ.
ತರೂರ್ ಹೇಳಿದ್ದೇನು?
ಆಪರೇಷನ್ ಸಿಂದೂರ್ ಬಗ್ಗೆ ಅಮೆರಿಕಕ್ಕೆ ಸರ್ವಪಕ್ಷ ನಿಯೋಗದ ಮುಂದಾಳತ್ವವನ್ನು ವಹಿಸಿರುವ ಶಶಿ ತರೂರ್ ಪಹಲ್ಗಾಂವ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಪ್ರತೀಕಾರ ಕ್ರಮ ಕೈಗೊಳ್ಳುವುದು ಅನಿರ್ವಾಯವಾಗಿತ್ತು ಎಂದು ಹೇಳಿದ್ದರು.
ಪನಾಮ ನಗರದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ತರೂರ್, ಭಯೋತ್ಪಾದಕರು ಪಹಲ್ಗಾಮ್ ನಲ್ಲಿ ಹೇಗೆ ಪುರುಷರನ್ನು ಅವರ ಪತ್ನಿಯರ ಸಮ್ಮುಖದಲ್ಲಿಯೇ ಹತ್ಯೆಗೈದರು ಮತ್ತು ಇದನ್ನು ಎಲ್ಲರಿಗೂ ಹೋಗಿ ತಿಳಿಸಿ ಎಂದು ಹೇಳಿದ್ದನ್ನು ವಿವರಿಸಿದ್ದರು. ಮಹಿಳೆಯರು ಮತ್ತೆ ಮತ್ತೆ ಮಾಡಿಕೊಂಡ ಮನವಿಗೂ ಭಯೋತ್ಪಾದಕರು ಕಿಂಚಿತ್ತೂ ಕರುಣೆ ತೋರಲಿಲ್ಲ ಎಂಬುದನ್ನು ವಿವರವಾಗಿ ತಿಳಿಸಿದ್ದರು.
ಕೆಲವು ಮಹಿಳೆಯರು ಕಣ್ಣೀರುಗರೆದರು. ನಮ್ಮನ್ನೂ ಕೊಂದುಬಿಡಿ ಎಂದು ಭಯೋತ್ಪಾದಕರನ್ನು ಕೇಳಿಕೊಂಡರು. “ಇಲ್ಲ, ಇಲ್ಲ. ಏನಾಯಿತು ಎಂದು ಎಲ್ಲರಿಗೂ ಹೋಗಿ ತಿಳಿಸಿ’ ಎಂದು ಅವರು ತಾಕೀತುಮಾಡಿದರು. ನಾವು ಆ ಮಹಿಳೆಯರ ಕೂಗನ್ನು ಆಲಿಸಿದ್ದೇವೆ. ನಮ್ಮ ಮಹಿಳೆಯರ ಹಣೆಯ ಮೇಲಿನ ಸಿಂದೂರದ ಕುಂಕುಮದ ಬಣ್ಣವು ಹಂತಕರು, ಅಪರಾಧಿಗಳು, ದಾಳಿಕೋರರ ಬಣ್ಣಕ್ಕೆ ಹೊಂದಿಕೆಯಾಗಬೇಕು ಎಂದು ಭಾರತವು ತೀರ್ಮಾನಿಸಿತು ಎಂದು ತರೂರು ಹೇಳಿದರು.
“ಭಯೋತ್ಪಾದಕರು ಬಂದು 26 ಮಹಿಳೆಯರ ಗಂಡಂದಿರು, ಅಪ್ಪಂದಿರ ಜೀವವನ್ನು ಕಸಿದುಕೊಂಡು ಅವರ ಹಣೆಯ ಮೇಲಿನ ಸಿಂದೂರವನ್ನು ಅಳಿಸಿಹಾಕಿದರು, ಅವರ ವೈವಾಹಿಕ ಜೀವನವನ್ನು ಕಸಿದುಕೊಂಡಿದ್ದಾರೆ. ಹಾಗಾಗಿ ಆಪರೇಷನ್ ಸಿಂದೂರ್ ಅಗತ್ಯವಾಗಿತ್ತು ಎಂದು ನಮ್ಮ ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ,” ಎಂದು ಅವರು ಹೇಳಿದರು.
ಭಾರತದಲ್ಲಿನ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವು ನಡೆಸುತ್ತಿರುವ ಕಳ್ಳಾಟವನ್ನು ತರೂರ್ ಪ್ರಶ್ನಿಸಿದರು. 26/11 ಮುಂಬೈ ದಾಳಿಯೂ ಸೇರಿದಂತೆ ಯಾವುದರಲ್ಲಿಯೂ ಪಾಕಿಸ್ತಾನ ಯಾರನ್ನೂ ವಿಚಾರಣೆಗೆ ಗುರಿಪಡಿಸಿಲ್ಲ ಮತ್ತು ಅಪರಾಧಿ ಎಂತಲೂ ಘೋಷಿಸಿಲ್ಲ ಯಾಕೆ ಎಂದು ತರೂರ್ ಪ್ರಶ್ನಿಸಿದರು.
“ಭಾರತ ಮಾತ್ರವಲ್ಲದೆ ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳ ಬಳಿಯೂ ಪಾಕಿಸ್ತಾನದ ಕುಖ್ಯಾತ ಪಾತಕಿಯ ಭಯಾನಕ ಧ್ಗನಿಮುದ್ರಿಕೆಗಳಿದ್ದವು. ಆತ ಮುಂಬೈ ನಲ್ಲಿ ನಡೆಸಿದ ದಾಳಿಕೋರರಿಗೆ ಪ್ರತಿದಿನವೂ ಪ್ರತಿಕ್ಷಣವೂ ಸೂಚನೆಗಳನ್ನು ನೀಡುತ್ತಿದ್ದ. ಹತ್ಯೆಗಳು ನಡೆಯುತ್ತಿರುವಾಗಲೇ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು. ಜೊತೆಗೆ ದೋಷಿಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿತ್ತು. ಆದರೆ ಏನಾಯಿತು? ಈ ಕೃತ್ಯದ ಹಿಂದಿರುವ ಒಬ್ಬ ವ್ಯಕ್ತಿಯನ್ನಾದರೂ ವಿಚಾರಣೆಗೆ ಗುರಿಪಡಿಸಲಾಗಿದೆಯೇ? ಶಿಕ್ಷೆಗೆ ಒಳಪಡಿಸಲಾಗಿದೆಯೇ? ಎಂದು ಕೇಳಿದರೆ ಉತ್ತರ ಇಲ್ಲ. ದುಃಖದ ಸಂಗತಿ ಎಂದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ಯಾವತ್ತೂ ಚಾಲ್ತಿಯಲ್ಲಿಡುವ ನೀತಿಯನ್ನು ಆಯ್ದುಕೊಂಡಿದೆ” ಎಂದು ಅವರು ಹೇಳಿದರು.
“ಇತ್ತೀಚಿನ ವರ್ಷಗಳಲ್ಲಿ ಆಗಿರುವ ಬದಲಾವಣೆ ಏನೆಂದರೆ ತಾವೇನಾದರೂ ದಾಳಿ ನಡೆಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ಭಯೋತ್ಪಾದಕರಿಗೆ ಅರಿವಾಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. 2015ರ ಸೆಪ್ಟೆಂಬರ್ ನಲ್ಲಿ ಭಯೋತ್ಪಾದಕರು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದ ಉರಿ ಮೇಲೆ ದಾಳಿ ನಡೆಸಲು ಭಾರತವು ಮೊದಲ ಬಾರಿಗೆ ನಿಯಂತ್ರಣ ರೇಖೆಯನ್ನು ದಾಟಿತು. ಅಂದು ನಡೆಸಿದ ಸರ್ಜಿಕಲ್ ದಾಳಿ ನಾವು ಹಿಂದೆಂದೂ ಮಾಡಿರದ ಸಂಗತಿಯಾಗಿತ್ತು” ಎನ್ನುವ ಮೂಲಕ ತರೂರ್ ಅವರು ಮೋದಿ ಸರ್ಕಾರವನ್ನು ಪರೋಕ್ಷವಾಗಿ ಶ್ಲಾಘಿಸಿದರು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿಯೂ ನಾವು ನಿಯಂತ್ರಣ ರೇಖೆಯನ್ನು ದಾಟಿರಲಿಲ್ಲ. ಉರಿ ದಾಳಿಯ ವೇಳೆ ದಾಟಬೇಕಾಯಿತು. ಆ ಬಳಿಕ 2019ರ ಜನವರಿಯಲ್ಲಿ ಪುಲ್ವಾಮಾದಲ್ಲಿ ದಾಳಿ ನಡೆಯಿತು. ಈ ಬಾರಿ ನಾವು ನಿಯಂತ್ರಣ ರೇಖೆಯನ್ನು ಮಾತ್ರವಲ್ಲ ಬಾಲಾಕೋಟ್ ನಲ್ಲಿರುವ ಭಯೋತ್ಪಾದಕರ ಪ್ರಧಾನ ಕಚೇರಿಯ ಮೇಲೆಯೇ ದಾಳಿ ಮಾಡಿದೆವು. ಈಗ ಎರಡನ್ನೂ ಮೀರಿ ಮುಂದೆ ಹೋಗಿದ್ದೇವೆ. ನಾವು ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯನ್ನು ಮೀರಿ ಹೋಗಿರುವುದು ಮಾತ್ರವಲ್ಲದೆ ಒಂಭತ್ತು ಸ್ಥಳಗಳಲ್ಲಿರುವ ಭಯೋತ್ಫಾದಕರ ನೆಲೆಗಳು, ತರಬೇತಿ ಕೇಂದ್ರಗಳು, ಭಯೋತ್ಪಾದಕರ ಕೇಂದ್ರ ಕಚೇರಿಗಳ ಮೇಲೆ ದಾಳಿ ನಡೆಸುವ ಮೂಲಕ ಪಾಕಿಸ್ತಾನದ ಹೃದಯಭಾಗವಾದ ಪಂಜಾಬ್ ಮೇಲೆ ಪ್ರಹಾರ ನಡೆಸಿದ್ದೇವೆ” ಎಂದು ಅವರು ವಿವರಿಸಿದರು.
ತರೂರ್ ಅವರ ಈ ಎಲ್ಲ ಹೇಳಿಕೆಗಳು ಕಾಂಗ್ರೆಸ್ ನಾಯಕರ ತೀವ್ರ ಟೀಕೆಗೆ ಗುರಿಯಾಗಿವೆ. ಕೆಲವರು ಯಾವ ಹೇಳಿಕೆಯನ್ನೂ ನೀಡದೆ ಅಂತರ ಕಾಯ್ದುಕೊಂಡಿದ್ದಾರೆ. ಅಮೆರಿಕದ ನಿಯೋಗವನ್ನು ಮುನ್ನಡೆಸಲು ಕಾಂಗ್ರೆಸ್ ತನ್ನ ಸಂಸದೀಯ ಪಟ್ಟಿಯಲ್ಲಿ ತರೂರ್ ಅವರ ಹೆಸರನ್ನೇನೂ ನೀಡಿರಲಿಲ್ಲ. ಆದರೂ ಸರ್ಕಾರ ಅವರನ್ನು ನಿಯೋಗದ ನೇತೃತ್ವ ವಹಿಸಿಕೊಳ್ಳುವಂತೆ ಕೇಳಿಕೊಂಡಿತು.
ತರೂರ್ ಅವರು ತಮ್ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು, “ಕಾಂಗ್ರೆಸ್ ಎಂಪಿ ಶಶಿ ತರೂರ್ ಅವರು ಬಿಜೆಪಿಯ ಸೂಪರ್ ವಕ್ತಾರರಾಗಿದ್ದಾರೆ. ಬಿಜೆಪಿ ನಾಯಕರು ಪ್ರಧಾನಿ ಮೋದಿ ಮತ್ತು ಸರ್ಕಾರದ ಪರವಾಗಿ ಮಾಡದೇ ಇರುವುದನ್ನು ಶಶಿ ತರೂರ್ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಏನು ಮಾಡುತ್ತಿದ್ದವು ಎಂಬುದಾದರೂ ತರೂರ್ ಅವರಿಗೆ ತಿಳಿದಿದೆಯೇ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
“ಪ್ರಧಾನಿ ಮೋದಿ ಅವರಿಗೂ ಮೊದಲು ಭಾರತವು ಯಾವತ್ತೂ ಎಲ್ಓಸಿ ಮತ್ತು ಅಂತಾರಾಷ್ಟ್ರೀಯ ಗಡಿಯನ್ನು ದಾಟಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನ ಸುವರ್ಣ ಇತಿಹಾಸವನ್ನು ನೀವು ಹೇಗಾದರೂ ಅವಮಾನಿಸಲು ಸಾಧ್ಯ? 1965ರಲ್ಲಿ ಭಾರತೀಯ ಸೇನೆ ಅನೇಕ ಸಂದರ್ಭಗಳಲ್ಲಿ ಪಾಕಿಸ್ತಾನವನ್ನು ಪ್ರವೇಶಿಸಿತ್ತು. ವಿಶೇಷವಾಗಿ ಲಾಹೋರ್ ವಲಯದಲ್ಲಿ ಇದು ಪಾಕಿಸ್ತಾನಿಯರನ್ನು ಅಚ್ಚರಿಗೆ ಒಳಪಡಿಸಿತ್ತು. 1971ರಲ್ಲಿ ಭಾರತವು ಪಾಕಿಸ್ತಾನವನ್ನು ಎರಡು ಹೋಳುಗಳನ್ನಾಗಿ ಮಾಡಿತ್ತು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಅನೇಕ ಬಾರಿ ಸರ್ಜಿಕಲ್ ದಾಳಿ ನಡೆದಿತ್ತು. ಆದರೆ ಇದನ್ನೆಲ್ಲ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಡೋಲು ಬಾರಿಸಿಕೊಂಡು ಓಡಾಡಿರಲಿಲ್ಲ. ನಿಮಗೆ ಇಷ್ಟೆಲ್ಲ ಕೊಟ್ಟ ಪಕ್ಷದ ಬಗ್ಗೆ ಇಷ್ಟೊಂದು ಅಪ್ರಾಮಾಣಿಕರಾಗಿರಲು ಹೇಗೆ ಸಾಧ್ಯ?” ಎಂದು ಉದಿತ್ ರಾಜ್ ಪ್ರಶ್ನಿಸಿದ್ದಾರೆ.
ವಿಶ್ವವೇದಕೆಯಲ್ಲಿ ಪಾಕಿಸ್ತಾನದ ಮುಖವಾಡವನ್ನು ಬಯಲು ಮಾಡಲು ಕೇಂದ್ರ ಸರ್ಕಾರವು ನಾನಾ ದೇಶಗಳಿಗೆ ಭೇಟಿ ನೀಡುವ ಉದ್ದೇಶದಿಂದ ಪಕ್ಷಾತೀತವಾದ ನಾಯಕರನ್ನು ಒಳಗೊಂಡ ಏಳು ತಂಡಗಳನ್ನು ರಚಿಸಿತ್ತು. ಆ ದೇಶಗಳಲ್ಲಿ ಭಾರತದ ಭಯೋತ್ಪಾದನಾ ವಿರೋಧಿ ಸಂದೇಶವನ್ನು ಸಾರುವುದು ಈ ತಂಡಗಳ ಉದ್ದೇಶವಾಗಿತ್ತು.
ಗಯಾನ ಭೇಟಿಯನ್ನು ಮುಗಿಸಿದ ತರೂರ್ ನೃತೃತ್ವದ ನಿಯೋಗವು ಮೂರು ದಿನಗಳ ಭೇಟಿಗಾಗಿ ಪನಾಮ ನಗರಕ್ಕೆ ಬಂದಿತ್ತು. ಭಾನುವಾರ ಮೇ 25ರಂದು ನಿಯೋಗವು ಗಯಾನ ರಿಪಬ್ಲಿಕ್ ನ ಉಪಾಧ್ಯಕ್ಷೆ ಭರತ್ ಜಗದೇವೋ ಅವರನ್ನು ಭೇಟಿ ಮಾಡಿ ಅನೇಕ ವಿಚಾರಗಳ ಚರ್ಚೆ ನಡೆಸಿತ್ತು.
ತರೂರ್ ಮುಂದಾಳತ್ವದ ಸಂಸದರ ನಿಯೋಗದಲ್ಲಿ ಸರ್ಫರಾಜ್ ಅಹ್ಮದ್, ಜಿ.ಎಂ.ಹರೀಶ್ ಬಾಲಯೋಗಿ, ಶಶಕಾಂಕ್ ಮಣಿ ತ್ರಿಪಾಠಿ, ತೇಜಸ್ವೀ ಸೂರ್ಯ, ಭುವನೇಶ್ವರ ಕಲಿತಾ, ಮಲ್ಲಿಕಾರ್ಜುನ ದೇವಡ, ಮಿಲಂದ್ ದಿಯೋರಾ ಮತ್ತು ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿದ್ದ ತರಣಜಿತ್ ಸಿಂಗ್ ಸಂಧು ಅವರು ಸೇರಿದ್ದಾರೆ.
ಆಪರೇಷನ್ ಸಿಂದೂರ್ ಅಡಿಯಲ್ಲಿ ಮೇ ಏಳರಂದು ಭಾರತದ ಸಶಸ್ತ್ರ ಪಡೆಗಳು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಸಂಘಟನೆಗಳಿಗೆ ಸೇರಿದ ಒಂಭತ್ತು ಶಿಬಿರಗಳ ಮೇಲೆ ಕ್ಷಿಪ್ರ ದಾಳಿ ನಡೆಸಿತ್ತು. ನಾಲ್ಕು ದಿನಗಳ ಕಾಲ ಎರಡೂ ರಾಷ್ಟ್ರಗಳಲ್ಲಿ ಯುದ್ಧದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಮೇ 10ರಂದು ಎರಡೂ ರಾಷ್ಟ್ರಗಳು ಕದನ ವಿರಾಮ ಒಪ್ಪಂದಕ್ಕೆ ಬಂದವು. ಇದರಿಂದ ವೈಮಾನಿಕ ದಾಳಿಗಳು ನಿಂತವು. ಆದರೆ ವಾಕ್ಸಮರ ಮಾತ್ರ ನಿಂತಿಲ್ಲ. ಭಯೋತ್ಪಾದಕ ಸಂಘಟನೆಗಳ ಜೊತೆಗಿನ ಪಾಕಿಸ್ತಾನದ ಸಂಬಂಧ ಮತ್ತು ಆ ರಾಷ್ಟ್ರ ಭಯೋತ್ಪಾದಕರಿಗೆ ಸುರಕ್ಷಿಣವಾಗಿದೆ ಎಂಬುದನ್ನು ಬಟಾಬಯಲುಮಾಡುವ ಕೆಲಸವನ್ನು ಸರ್ಕಾರ ಮುಂದುವರಿಸಿದೆ.