ಒಡಿಶಾದಲ್ಲಿ ಪ್ರವಾಹದ ಆರ್ಭಟ: 170ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ, ಮತ್ತಷ್ಟು ಭಾರಿ ಮಳೆಯ ಎಚ್ಚರಿಕೆ

ಬಂಗಾಳಕೊಲ್ಲಿಯಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಿರುವುದರಿಂದ, ಮುಂದಿನ ನಾಲ್ಕು ದಿನಗಳ ಕಾಲ ಒಡಿಶಾದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.;

Update: 2025-08-26 10:26 GMT
Click the Play button to listen to article

ಉತ್ತರ ಒಡಿಶಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಬಾಲಸೋರ್, ಭದ್ರಕ್, ಮತ್ತು ಜಾಜ್‌ಪುರ್ ಜಿಲ್ಲೆಗಳ 170ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮಂಗಳವಾರ ಸತತ ಎರಡನೇ ದಿನವೂ ಪ್ರವಾಹದ ಸ್ಥಿತಿ ಮುಂದುವರಿದಿದ್ದು, ಸುಬರ್ಣರೇಖಾ ಮತ್ತು ಬೈತರಣಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಪ್ರವಾಹದಿಂದಾಗಿ ಬಾಲಸೋರ್ ಜಿಲ್ಲೆಯ 130ಕ್ಕೂ ಹೆಚ್ಚು ಗ್ರಾಮಗಳು ಮತ್ತು ಜಾಜ್‌ಪುರ್ ಜಿಲ್ಲೆಯ ಸುಮಾರು 45 ಗ್ರಾಮಗಳು ಮುಳುಗಡೆಯಾಗಿವೆ. ಬೈತರಣಿ ನದಿಯ ಉಪನದಿಯಾದ ಕಾನಿ ನದಿಯ ಏರಿ ಒಡೆದ ಪರಿಣಾಮ ಜಾಜ್‌ಪುರ್ ಜಿಲ್ಲೆಯಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಅವರ ಪ್ರಕಾರ, ಬಾಧಿತ ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಇದೇ ವೇಳೆ, ಸುಂದರ್‌ಗಢ ಜಿಲ್ಲೆಯಲ್ಲಿ ಟ್ರೈಲರ್ ಟ್ರಕ್ ಮತ್ತು ಲಾರಿಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿದ್ದು, ಚಾಲಕ ಸುಜಿತ್ ಐಂದ್ ಎಂಬುವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬಂಗಾಳಕೊಲ್ಲಿಯಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಿರುವುದರಿಂದ, ಮುಂದಿನ ನಾಲ್ಕು ದಿನಗಳ ಕಾಲ ಒಡಿಶಾದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ವಿಶೇಷವಾಗಿ ಆಗಸ್ಟ್ 26 ಮತ್ತು 27ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಬೀಸುವ ಬಗ್ಗೆಯೂ ಮುನ್ಸೂಚನೆ ನೀಡಲಾಗಿದೆ. 

Tags:    

Similar News