ಮಹಾಭಾರತದ 'ಕರ್ಣ' ಖ್ಯಾತಿಯ ಪಂಕಜ್ ಧೀರ್ ನಿಧನ

ಪಂಕಜ್ ಧೀರ್ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ತಿಂಗಳ ಹಿಂದೆ ಕ್ಯಾನ್ಸರ್ ಮತ್ತೆ ಉಲ್ಬಣಗೊಂಡಿತ್ತು, ಅದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Update: 2025-10-16 04:49 GMT
Click the Play button to listen to article

ಬಿ. ಆರ್. ಚೋಪ್ರಾ ಅವರ ಐತಿಹಾಸಿಕ ಟಿವಿ ಧಾರಾವಾಹಿ 'ಮಹಾಭಾರತ'ದಲ್ಲಿ ಕರ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟ ಪಂಕಜ್ ಧೀರ್ ಅವರು ಅಕ್ಟೋಬರ್ ನಿಧನರಾಗಿದ್ದಾರೆ.

ಅವರಿಗೆ 68 ವರ್ಷ ವಯಸ್ಸಾಗಿತ್ತು.  ಕ್ಯಾನ್ಸರ್ ಕಾಯಿಲೆಯಿಂದ  ಅವರು ಬಹುಕಾಲದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಹೇಳಿವೆ.

ಕ್ಯಾನ್ಸರ್‌ನೊಂದಿಗೆ ಹೋರಾಟ

ಪಂಕಜ್ ಧೀರ್ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ತಿಂಗಳ ಹಿಂದೆ ಕ್ಯಾನ್ಸರ್ ಮತ್ತೆ ಉಲ್ಬಣಗೊಂಡಿತ್ತು, ಅದಕ್ಕಾಗಿ ಅವರು  ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.

ಸಹ ನಟರಿಂದ ಸಂತಾಪ

ಪಂಕಜ್ ಧೀರ್ ಅವರ ನಿಧನದ ಸುದ್ದಿಯನ್ನು ಅವರ ಆಪ್ತ ಗೆಳೆಯ ಮತ್ತು 'ಮಹಾಭಾರತ'ದಲ್ಲಿ ಅರ್ಜುನನ ಪಾತ್ರ ವಹಿಸಿದ್ದ ನಟ ಫಿರೋಜ್ ಖಾನ್‌  ದೃಢಪಡಿಸಿದ್ದಾರೆ. ಫಿರೋಜ್ ಖಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಂಕಜ್ ಧೀರ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿ, "ಜಂಟಲ್‌ಮ್ಯಾನ್!!! ವಿದಾಯ ಹೇಳುತ್ತೇನೆ ಪಿಡಿ, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ." ಎಂದು ಬರೆದು ಸಂತಾಪ ಸೂಚಿಸಿದ್ದಾರೆ.

ಅಧಿಕೃತ ಹೇಳಿಕೆ ಮತ್ತು ಅಂತ್ಯಕ್ರಿಯೆ

ಪಂಕಜ್ ಧೀರ್ ಅವರ ನಿಧನವನ್ನು ಸಿನಿ ಮತ್ತು ಟಿವಿ ಕಲಾವಿದರ ಸಂಘ ದೃಢಪಡಿಸಿದೆ. ಸಂಘ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ನಮ್ಮ ಟ್ರಸ್ಟ್‌ನ ಹಿಂದಿನ ಅಧ್ಯಕ್ಷರು ಮತ್ತು CINTAA ದ ಮಾಜಿ ಪ್ರಧಾನ ಕಾರ್ಯದರ್ಶಿ ಪಂಕಜ್ ಧೀರ್ ಅವರು ಅಕ್ಟೋಬರ್ 15ರಂದು ನಿಧನರಾದರು ಎಂದು ನಾವು ತೀವ್ರ ದುಃಖ ಮತ್ತು ತೀವ್ರ ವಿಷಾದದಿಂದ ನಿಮಗೆ ತಿಳಿಸುತ್ತೇವೆ. ಅಂತ್ಯಕ್ರಿಯೆ ಇಂದು ಸಂಜೆ 4:30 ಕ್ಕೆ ಮುಂಬೈನ ವಿಲೇ ಪಾರ್ಲೆದಲ್ಲಿರುವ ಪವನ್ ಹನ್ಸ್ ಪಕ್ಕದಲ್ಲಿ ನಡೆಯಲಿದೆ" ಎಂದು ತಿಳಿಸಲಾಗಿದೆ.

ಕುಟುಂಬದ ಹಿನ್ನೆಲೆ

ಪಂಕಜ್ ಧೀರ್ ಅವರು ಪತ್ನಿ ಅನಿತಾ ಧೀರ್ ಅವರನ್ನು ಅಗಲಿದ್ದಾರೆ. ಅನಿತಾ ಅವರು ಪ್ರಸಾಧನ ಹಾಗೂ ವಸ್ತ್ರ ವಿನ್ಯಾಸಕಿ ಎಂದು ತಿಳಿದುಬಂದಿದೆ. ಅವರ ಪುತ್ರ ನಿಕಿತಿನ್ ಧೀರ್ ಪ್ರಸಿದ್ಧ ನಟರಾಗಿದ್ದು, 'ಚೆನ್ನೈ ಎಕ್ಸ್‌ಪ್ರೆಸ್', 'ಸೂರ್ಯವಂಶಿ' ಮತ್ತು 'ಇಂಡಿಯನ್ ಪೊಲೀಸ್ ಫೋರ್ಸ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಿಕಿತಿನ್ ಧೀರ್ ಅವರ ಪತ್ನಿ, ಸೊಸೆ ಕೃತಿಕಾ ಸೆಂಗರ್ ಧೀರ್ ಸಹ ಜನಪ್ರಿಯ ಟಿವಿ ನಟಿ. ಪಂಕಜ್ ಅವರ ಮೊಮ್ಮಗಳು ದೇವಿಕಾ. ನಟನ ಪುತ್ರ ನಿಕಿತಿನ್ ಧೀರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಇನ್ನೂ ಯಾವುದೇ ಸಂತಾಪ ಸೂಚಿಸಿಲ್ಲ.

ಅದ್ಭುತ ವೃತ್ತಿಜೀವನ

ಪಂಕಜ್ ಧೀರ್ ಅವರು ಚಲನಚಿತ್ರ ಮತ್ತು ದೂರದರ್ಶನ ಉದ್ಯಮದ ಹಿರಿಯ ನಟರಾಗಿದ್ದರು. 'ಮಹಾಭಾರತ'ದ ಹೊರತಾಗಿ, ಅವರು 'ಸನಮ್ ಬೇವಾಫಾ', 'ಬಾದ್‌ಶಾ', 'ಚಂದ್ರಕಾಂತ' ಮತ್ತು 'ಸಸುರಲ್ ಸಿಮರ್ ಕಾ' ದಂತಹ ಜನಪ್ರಿಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಟನೆಯ ಜೊತೆಗೆ, 'ಮೈ ಫಾದರ್ ಗಾಡ್‌ಫಾದರ್' ಚಿತ್ರದ ಮೂಲಕ ನಿರ್ದೇಶನಕ್ಕೂ ಕೈ ಹಾಕಿದ್ದರು. ಅಲ್ಲದೆ, ಅಭಿನಯ್ ನಟನಾ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದರು.

Tags:    

Similar News