Maha kumbh Mela: ಮಹಾ ಶಿವರಾತ್ರಿ; ಇಂದು ಮಹಾ ಕುಂಭ ಮೇಳ ಸಂಪನ್ನ
ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಂಗಳವಾರ ರಾತ್ರಿ 2 ಗಂಟೆಯ ವೇಳೆಗೆ 11.66 ಲಕ್ಷ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಸಂಖ್ಯೆ 25.64 ಲಕ್ಷಕ್ಕೆ ಏರಿತ್ತು;
ಮಹಾ ಶಿವರಾತ್ರಿ ದಿನ ಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡುತ್ತಿರುವ ಭಕ್ತರು.
ದಿನಗಳ ಕಾಲ ನಡೆದಿರುವ ಮಹಾಕುಂಭ ಮೇಳವು ಇಂದು (ಬುಧವಾರ) ಶಿವರಾತ್ರಿ ದಿನದ ಅಂತಿಮ ಪುಣ್ಯ ಸ್ನಾನದೊಂದಿಗೆ ಸಂಪನ್ನವಾಗಲಿದೆ. ತ್ರಿವೇಣಿ ಸಂಗಮದಲ್ಲಿ ಇಂದು ಕೋಟ್ಯಂತರ ಭಕ್ತರು ಪುಣ್ಯ ಸ್ನಾನ ಮಾಡಲಿದ್ದಾರೆ.
ಶಿವ ಮತ್ತು ಪಾರ್ವತಿಯ ದೈವಿಕ ಮಿಲನವನ್ನು ಮಹಾಶಿವರಾತ್ರಿ ದಿನ ಆಚರಿಸಲಾಗುತ್ತದೆ. ಹೀಗಾಗಿ ಮಹಾಕುಂಭ ಮೇಳಕ್ಕೆ ವಿಶೇಷ ಮಹತ್ವ ಹೊಂದಿದೆ. ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಈ ಮೇಳವು ಲಕ್ಷಾಂತರ ಹಿಂದೂ ಭಕ್ತರಿಗೆ ಮೋಕ್ಷ ಪ್ರಾಪ್ತಿ ಮಾಡುತ್ತದೆ ಎಂದು ನಂಬಲಾಗಿದೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ ಭಕ್ತಾದಿಗಳ ದೊಡ್ಡ ದಂಡೇ ಕಂಡು ಬಂದಿತ್ತು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಂಗಳವಾರ ರಾತ್ರಿ 2 ಗಂಟೆಯ ವೇಳೆಗೆ 11.66 ಲಕ್ಷ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಸಂಖ್ಯೆ 25.64 ಲಕ್ಷಕ್ಕೆ ಏರಿತ್ತು ಮತ್ತು ಬೆಳಗ್ಗೆ 6 ಗಂಟೆಯ ವೇಳೆಗೆ 41.11 ಲಕ್ಷಕ್ಕೂ ಹೆಚ್ಚು ಮಂದಿ ಈ ಪವಿತ್ರ ಸ್ನಾನ ಮಾಡಿದ್ದರು. ಸಂಜೆಯ ವೇಳೆಗೆ ಒಂದು ಕೋಟಿ ಮಂದಿ ಭಕ್ತಾದಿಗಳು ಸಂಗಮಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಅಂತಿಮ ಸ್ನಾನದ ಮುನ್ನ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಕ್ತರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಮಹಾಶಿವರಾತ್ರಿಯ ಈ ಪವಿತ್ರ ದಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ಎಲ್ಲಾ ಸಂತರಿಗೆ, ಕಲ್ಪವಾಸಿಗಳಿಗೆ ಮತ್ತು ಭಕ್ತಾದಿಗಳಿಗೆ ಹಾರ್ದಿಕ ಶುಭಾಶಯಗಳು. ಭೋಲೆನಾಥ ಮತ್ತು ಪವಿತ್ರ ಗಂಗಾಮಾತೆ ಎಲ್ಲರಿಗೂ ಆಶೀರ್ವಾದ ನೀಡಲಿ. ಹರ ಹರ ಮಹಾದೇವ" ಎಂದು ಟ್ವೀಟ್ ಮಾಡಿದ್ದಾರೆ.
ಅನೇಕ ಭಕ್ತರು ಮಧ್ಯರಾತ್ರಿ ಗಂಗೆಯ ತೀರದಲ್ಲಿ ನೆರೆದಿದ್ದು, ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಲು ಕಾಯುತ್ತಿದ್ದರು. ಅದಕ್ಕಿಂತ ಮೊದಲೇ ಹಲವರು ತಮ್ಮ ಪೂಜಾ ವಿಧಿಗಳನ್ನು ನೆರವೇರಿಸಿದ್ದರು.
ಆರು ಪುಣ್ಯ ಸ್ನಾನಗಳು
ಮಹಾಕುಂಭ ಮೇಳದಲ್ಲಿ 6 ಪುಣ್ಯ ಸ್ನಾನ ನಡೆದಿವೆ . ಪುಷ್ಯ ಪೂರ್ಣಿಮೆ (ಜನವರಿ 13), ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮಾವಾಸ್ಯೆ (ಜನವರಿ 29), ವಸಂತ ಪಂಚಮಿ (ಫೆಬ್ರವರಿ 3), ಮಾಘ ಪೂರ್ಣಿಮೆ (ಫೆಬ್ರವರಿ 12) ಮತ್ತು ಮಹಾಶಿವರಾತ್ರಿ (ಫೆಬ್ರವರಿ 26), ಇದರಲ್ಲಿ ಮೂರು "ಅಮೃತ ಸ್ನಾನ" ದಿನಗಳು ಸೇರಿವೆ.
ಮಂಗಳವಾರ (ಫೆಬ್ರವರಿ 25) 1.33 ಕೋಟಿ ಮಂದಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದು, ಈ ಬಾರಿ ಮಹಾಕುಂಭ ಮೇಳದಲ್ಲಿ 2025ಕ್ಕೆ ಒಟ್ಟು 65 ಕೋಟಿ ಮಂದಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಗಿ ಭದ್ರತೆ
ಸಂಗಮದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ರಾತ್ರಿಯಿಡೀ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ರೈಲು ನಿಲ್ದಾಣಗಳು, ರಸ್ತೆ ಬದಿಗಳಲ್ಲಿ ಮತ್ತು ನಗರ ಪ್ರವೇಶದ ದ್ವಾರಗಳಲ್ಲಿ ಪೊಲೀಸ್, ಅರೆ ಸೈನಿಕ ಪಡೆಯ ಮತ್ತು ವಿಪತ್ತು ನಿರ್ವಹಣಾ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.
ಸರ್ವೆಲೈನ್ಸ್ ಡ್ರೋನ್ಗಳು, AI-ಚಾಲಿತ ಕ್ಯಾಮೆರಾಗಳೊಂದಿಗೆ ಸಿಸಿಟಿವಿ ಮೇಲ್ವಿಚಾರಣೆ ಮತ್ತು ಕಮಾಂಡ್ ಕೇಂದ್ರಗಳ ಮೂಲಕ ನಿಯಂತ್ರಣ ಮಾಡಲಾಗುತ್ತಿದೆ.
ಹೆಚ್ಚುವರಿ ರೈಲು
ಭಕ್ತರಿಗಾಗಿ ಉತ್ತರ ಪೂರ್ವ ರೈಲ್ವೆ (NER) ಹೆಚ್ಚುವರಿ ರೈಲುಗಳನ್ನು ನಿಯೋಜಿಸಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರೈಲ್ವೆ ಅಧಿಕಾರಿ ಪಂಕಜ್ ಕುಮಾರ್ ಸಿಂಗ್ ಅವರು, ಫೆಬ್ರವರಿ 25 ರಂದು ಮಧ್ಯಾಹ್ನ 4 ಗಂಟೆಯವರೆಗೆ 60 ರೈಲುಗಳು ಚಲಿಸಿವೆ. ಮಹಾಶಿವರಾತ್ರಿ ದಿನ ಇನ್ನೂ 25 ವಿಶೇಷ ರೈಲುಗಳು ಸೇವೆಗೆ ಇರುತ್ತವೆ ಎಂದು ಮಾಹಿತಿ ನೀಡಿದ್ದಾರೆ.