Kolkata rape murder| ಪ್ರತಿಭಟನಾಕಾರರು ಅಮಾನವೀಯರು: ಟಿಎಂಸಿ ಸಂಸದರ ಟೀಕೆ

Update: 2024-09-13 10:01 GMT
ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫೋರಂ ಸದಸ್ಯರು ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗಿನ ಸಭೆಗಾಗಿ ಬಸ್ ಮೂಲಕ ತೆರಳಿದರು

ಆರ್‌.ಜಿ. ಕರ್ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸುತ್ತಿರುವ ಕಿರಿಯ ವೈದ್ಯರನ್ನು ಟಿಎಂಸಿ ಸಂಸದರು ʻಅಮಾನವೀಯರುʼ,ʻವೈದ್ಯರಾಗಲು ಅನರ್ಹರುʼ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಅವರೊಂದಿಗಿನ ಸಭೆಯನ್ನು ನೇರ ಪ್ರಸಾರ ಮಾಡಬೇಕೆಂಬ ಕಿರಿಯ ವೈದ್ಯರ ಬೇಡಿಕೆಯನ್ನುಸರ್ಕಾರ ನಿರಾಕರಿಸಿತು. ಹೀಗಾ ಗಿ, ವೈದ್ಯರು ಮಮತಾ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದರು. ವೈದ್ಯರ ವಿರುದ್ಧ ಟಿಎಂಸಿ ಸಂಸದರು ವಾಗ್ದಾಳಿ ನಡೆಸಿದ್ದಾರೆ.   

ಬಿಜೆಪಿ ಮತ್ತು ಎಡಪಕ್ಷಗಳು ಘಟನೆಯನ್ನು ರಾಜಕೀಯಗೊಳಿಸುತ್ತಿವೆ ಎಂದು ಸಿಎಂ ಆರೋಪಿಸಿದ್ದಾರೆ; ಮಮತಾ ಅವರು ಪಾರದರ್ಶಕತೆಗೆ ಹೆದರಿ ವೈದ್ಯರಿಗೆ ಮುಖಭಂಗ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಕಿರಿಯ ವೈದ್ಯರ ನಿಯೋಗವು ಮಮತಾ ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲು ಸಚಿವಾಲಯಲಕ್ಕೆ ಆಗಮಿಸಿತ್ತು. ಆದರೆ, ಸಭೆ ವಿಫಲವಾಯಿತು.

ಕೊಳಕು ಮಟ್ಟದ ರಾಜಕೀಕರಣ: ಟಿಎಂಸಿ ರಾಜ್ಯಸಭೆ ಸದಸ್ಯ ಸಾಕೇತ್‌ ಗೋಖಲೆ, ಧರಣಿ ನಿರತ ವೈದ್ಯರಿಗೆ ಕಾಯುತ್ತ ಸಚಿವಾಲಯದ ಖಾಲಿ ಕಾನ್ಫರೆನ್ಸ್ ಹಾಲ್‌ನಲ್ಲಿ ಕುಳಿತಿರುವ ಸಿಎಂ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ʻಕಿರಿಯ ವೈದ್ಯರನ್ನು ಭೇಟಿ ಮಾಡಲು ಸಿಎಂ ಕಳೆದೆರಡು ಗಂಟೆಗಳಿಂದ ಕಾಯುತ್ತಿದ್ದರು. ಆದರೆ, ವೈದ್ಯರು ಬರಲಿಲ್ಲ. ಸಂವಾದಕ್ಕೆ ಈ ಮಟ್ಟದ ಬದ್ಧತೆಯನ್ನು ಬೇರೆ ಯಾವುದೇ ನಾಯಕರೂ ತೋರಿಸಿಲ್ಲ. ಸಿಪಿಎಂ ಮತ್ತು ಬಿಜೆಪಿ ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದು, ಸಂಧಾನದ ಬದಲು ಬಿಕ್ಕಟ್ಟಿನ ವಿಸ್ತರಣೆ ಅವರ ಗುರಿಯಾಗಿದೆ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ʻಕಿರಿಯ ವೈದ್ಯರು ತಮ್ಮನ್ನು ಬಿಜೆಪಿ ಮತ್ತು ಸಿಪಿಎಂ ಕೈಗೊಂಬೆಗಳಂತೆ ಬಳಸಿಕೊಳ್ಳುತ್ತಿವೆ ಎಂದು ಅರಿತುಕೊಳ್ಳಬೇಕು. ಈ ಕೊಳಕು ರಾಜಕೀಕರಣ ಲಕ್ಷಾಂತರ ರೋಗಿಗಳ ನೋವಿಗೆ ಕಾರಣವಾಗುತ್ತದೆ,ʼ ಎಂದು ಅವರು ಹೇಳಿದರು.

ಮತ್ತೊಬ್ಬ ಟಿಎಂಸಿ ಸಂಸದ ಕಲ್ಯಾಣ್ ಕೂಡ ಪ್ರತಿಭಟನಾನಿರತ ವೈದ್ಯರನ್ನು 'ಅಮಾನವೀಯ ಮತ್ತು ವೈದ್ಯರಾಗಲು ಅನರ್ಹರು' ಎಂದು ಜರಿದರು. ಅಂತಿಮ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬಾರದು ಎಂದು ಬಂಗಾಳ ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿ ದಾಳಿ: ʻಸಿಎಂ ಪ್ರತಿಭಟನಾಕಾರರ ಮುಖಭಂಗ ಮಾಡಲು ಸಭೆಯನ್ನು ರದ್ದುಗೊಳಿಸಿದ್ದಾರೆ,ʼ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ, ʼಮಮತಾ ಅವರು ಪಾರದರ್ಶಕತೆಗೆ ಹೆದರುತ್ತಿದ್ದು, ಸಭೆಯ ನೇರ ಪ್ರಸಾರಕ್ಕೆ ಒಪ್ಪಿಲ್ಲ. ಅವರು ಏಕಪಕ್ಷೀಯವಾಗಿ ಸಭೆಯನ್ನು ರದ್ದುಗೊಳಿಸಿದ್ದಲ್ಲದೆ, ಪತ್ರಿಕಾಗೋಷ್ಠಿಯಲ್ಲಿ ಕಿರಿಯ ವೈದ್ಯರು ರೋಗಿಗಳ ಸಾವಿಗೆ ಕಾರಣ ಎಂದು ದೂಷಿಸಿದ್ದಾರೆ. ಇದು ಅಪರಾಧ,ʼ ಎಂದು ಹೇಳಿದರು.

Tags:    

Similar News