Kolkata rape-murder| ಕಿರಿಯ ವೈದ್ಯರ ಪ್ರತಿಭಟನೆ ಮುಂದುವರಿಕೆ

Update: 2024-09-13 07:18 GMT

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ ಹೊರಗೆ ಕಿರಿಯ ವೈದ್ಯರು ತಮ್ಮ ನಿಲುಗಡೆ ಕೆಲಸ ಮತ್ತು ಧರಣಿಯನ್ನು ಮೂರನೇ ದಿನವಾದ ಶುಕ್ರವಾರವೂ ಮುಂದುವರಿಸಿದ್ದಾರೆ.

ಆರ್‌.ಜಿ. ಕರ್ ಆಸ್ಪತ್ರೆ ಬಿಕ್ಕಟ್ಟನ್ನು ಪರಿಹರಿಸಲು ಹಮ್ಮಿಕೊಂಡಿದ್ದ ಮಾತುಕತೆಯಲ್ಲಿ ಪಾಲ್ಗೊಳ್ಳಲು 26 ವೈದ್ಯಕೀಯ ಕಾಲೇಜುಗಳನ್ನು ಪ್ರತಿನಿಧಿಸುವ 30 ವೈದ್ಯಾಧಿಕಾರಿಗಳು ನಬಣ್ಣಕ್ಕೆ ಆಗಮಿಸಿದ್ದರು. ಆದರೆ, ಮಾತುಕತೆಯ ನೇರ ಪ್ರಸಾರ ಮಾಡಬೇಕೆಂಬ ವೈದ್ಯರ ಬೇಡಿಕೆಗೆ ಸರ್ಕಾರ ಸಮ್ಮತಿಸದ ಕಾರಣ ಸಭೆ ನಡೆಯಲಿಲ್ಲ. 

ʻಕಿರಿಯ ವೈದ್ಯರೊಂದಿಗಿನ ಸಭೆಯ ನೇರ ಪ್ರಸಾರ ಸಾಧ್ಯವಿಲ್ಲ.ಪ್ರಕರಣ ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್‌ನಲ್ಲಿದೆ. ರೆಕಾರ್ಡ್ ಮಾಡಿಕೊಂಡು, ಸುಪ್ರೀಂ ಕೋರ್ಟ್‌ ಅನುಮತಿ ನೀಡಿದಲ್ಲಿ ರೆಕಾರ್ಡಿಂಗ್ ನ್ನು ವೈದ್ಯರಿಗೆ ಹಸ್ತಾಂತರಿಸಲಾಗುತ್ತದೆ,ʼ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. 

ಪೊಲೀಸ್ ಆಯುಕ್ತ, ಆರೋಗ್ಯ ಕಾರ್ಯದರ್ಶಿ, ಆರೋಗ್ಯ ಸೇವೆಗಳ ನಿರ್ದೇಶಕ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ಅಮಾನತು ಸೇರಿದಂತೆ ಪ್ರಮುಖ ಬೇಡಿಕೆಗಳು ಈಡೇರುವವರೆಗೆ ಸ್ವಾಸ್ಥ್ಯಭವನದ ಹೊರಗೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಧರಣಿ ನಿರತ ವೈದ್ಯರು ಹೇಳಿದರು. ʻಬೇಡಿಕೆಗಳನ್ನು ಈಡೇರಿಸುವವರೆಗೆ ಆಂದೋಲನವನ್ನು ಮುಂದುವರಿಸುತ್ತೇವೆ,ʼ ಎಂದು ವೈದ್ಯರು ಹೇಳಿದರು.

ʻಅನೇಕ ಜನರು ದುರ್ಗಾ ಪೂಜೆ ಹಬ್ಬಕ್ಕೆ ವೆಚ್ಚ ಕಡಿತಗೊಳಿಸುವ ಅಥವಾ ನಮ್ಮೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಉಳಿಸಿದ ಹಣದಿಂದ ಆಹಾರ ಮತ್ತು ಅಗತ್ಯವಸ್ತುಗಳನ್ನು ತಂದುಕೊಟ್ಟು ಬೆಂಬಲ ತೋರಿಸುತ್ತಿದ್ದಾರೆ,ʼ ಎಂದು ವೈದ್ಯರು ಹೇಳಿದ್ದಾರೆ. 

ʻನನ್ನ 11 ವರ್ಷದ ಮಗಳ ಭವಿಷ್ಯಕ್ಕಾಗಿ ವೈದ್ಯರಿಗೆ ನನ್ನ ಗೌರವ ಅರ್ಪಿಸುತ್ತೇನೆ,ʼ ಎಂದು ಪ್ರತಿಭಟನಾನಿರತ ವೈದ್ಯರಿಗೆ ಸಿಹಿ ವಿತರಿಸಿದ ತಂದೆಯೊಬ್ಬರು ಹೇಳಿದರು. ʻಇಂಥ ಬೆಂಬಲ ನಮ್ಮನ್ನು ದಿಗ್ಮೂಢರನ್ನಾಗಿಸಿದೆ. ಇದು ನಮ್ಮ ನೈತಿಕತೆಯನ್ನು ಹೆಚ್ಚಿಸುತ್ತದೆ,ʼ ಎಂದು ಪ್ರತಿಭಟನಾನಿರತ ಕಿರಿಯ ವೈದ್ಯರೊಬ್ಬರು ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಾಲ್ಟ್ ಲೇಕ್‌ನಲ್ಲಿರುವ 'ಸ್ವಾಸ್ಥ್ಯ ಭವನ ಮತ್ತು ಸುತ್ತಮುತ್ತ ಪೊಲೀಸ್ ಸಿಬ್ಬಂದಿಯ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿದೆ.

Tags:    

Similar News