Kolkata rape-murder: ಆಸ್ಪತ್ರೆ ಭದ್ರತೆಗೆ ಸಿಐಎಸ್‌ಎಫ್ ನಿಯೋಜನೆ

Update: 2024-08-21 11:45 GMT

ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಭದ್ರತೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ ಎಫ್)ಯನ್ನು ನಿಯೋಜಿಸಲಾಗಿದೆ. ಸಿಐಎಸ್‌ಎಫ್‌ನ ಉನ್ನತ ಅಧಿಕಾರಿಗಳು ಆಗಸ್ಟ್ 21 ರಂದು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸುತ್ತಿರುವುದು ಕಂಡುಬಂದಿದೆ. 

ಆ. 15ರಂದು ಗುಂಪು ಆಸ್ಪತ್ರೆಗೆ ನುಗ್ಗಿ ಎರಡು ಮಹಡಿಗಳಲ್ಲಿನ ವೈದ್ಯಕೀಯ ಉಪಕರಣಗಳು ಮತ್ತು ಸಾಮಗ್ರಿಗಳನ್ನು ಹಾನಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಮಮತಾ ನೇತೃತ್ವದ ಟಿಎಂಸಿ ಸರ್ಕಾರ ಮತ್ತು ನಗರ ಪೊಲೀಸರನ್ನು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಅದೇ ದಿನ ನಾಗರಿಕ ಸಮಾಜ ಮತ್ತು ವೈದ್ಯರು ಕೋಲ್ಕತ್ತಾ ಮತ್ತು ಇತರ ಹಲವು ನಗರಗಳಲ್ಲಿ ವೈದ್ಯೆಗೆ ನ್ಯಾಯವನ್ನು ಕೋರಿ 'ರಾತ್ರಿಯನ್ನು ಮರುಪಡೆಯಿರಿ' ಪ್ರತಿಭಟನೆ ನಡೆಸಿದ್ದರು. 

ಆಸ್ಪತ್ರೆ ಆವರಣದಲ್ಲಿ ವಿಧ್ವಂಸಕರನ್ನು ನಿಭಾಯಿಸುವಲ್ಲಿ ರಾಜ್ಯದ ವೈಫಲ್ಯಕ್ಕೆ ಸುಪ್ರೀಂ ಕೋರ್ಟ್ ತನ್ನ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿತು. ಆಗಸ್ಟ್ 15 ರ ಗುಂಪು ಹಿಂಸಾಚಾರದ ನಂತರ, ಆಸ್ಪತ್ರೆಯ ಬಹುತೇಕ ವೈದ್ಯರು ಕ್ಯಾಂಪಸ್ ತೊರೆದಿದ್ದಾರೆ. ವೈದ್ಯರು ಹಿಂತಿರುಗಲು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಲು ಸುರಕ್ಷಿತ ವಾತಾವರಣ ಅಗತ್ಯ ಎಂದು ನ್ಯಾಯಾಲಯ ಹೇಳಿತು. ಕೇಂದ್ರ ಪಡೆಗಳು ಆಸ್ಪತ್ರೆ ಆವರಣವನ್ನು ಕಾವಲು ಕಾಯುತ್ತವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಸಲಹೆಯನ್ನು ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಒಪ್ಪಿಕೊಂಡರು. 

ಪ್ರತಿಭಟನೆ ಮುಂದುವರಿಕೆ: ಸಂತ್ರಸ್ತೆಗೆ ನ್ಯಾಯಕ್ಕಾಗಿ ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ಪ್ರತಿಭಟನೆ ಮುಂದುವರಿದಿದೆ. ಸಂತ್ರಸ್ತೆಯ ಪೋಷಕರ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಆರ್‌.ಜಿ. ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ವಿಚಾರಣೆ ಆರನೇ ದಿನವೂ ಮುಂದುವರಿದಿದೆ. ಸಿಬಿಐ ಅಧಿಕಾರಿಗಳು ಘೋಷ್ ಅವರನ್ನು ಒಟ್ಟು 64 ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ. ಸಂದೀಪ್ ಘೋಷ್ ಅವರು ಸರ್ಕಾರಿ ಸಂಸ್ಥೆಯ ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ನಡೆದ ಹಣಕಾಸು ಅವ್ಯವಹಾರಗಳ ಆರೋಪಗಳ ಕುರಿತು ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರವು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದೆ.

ಆಗಸ್ಟ್ 15 ರಂದು ಆಸ್ಪತ್ರೆಯಲ್ಲಿ ನಡೆದ ವಿಧ್ವಂಸಕ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

Tags:    

Similar News