Operation Sindoor |ಜೆಟ್‌ ಪತನ ಮುಖ್ಯವಲ್ಲ, ಏಕೆ ಹೊಡೆದರು ಎಂಬುದೇ ಮುಖ್ಯ; ಸಂಚಲನ ಸೃಷ್ಟಿಸಿದ ಸಿಡಿಎಸ್‌ ಮಾತು

ಪಾಕ್‌ ಜತೆಗಿನ ಸಂಘರ್ಷದಲ್ಲಿ ಭಾರತೀಯ ಯುದ್ಧ ವಿಮಾನಗಳ ನಷ್ಟದ ಬಗ್ಗೆ ಪ್ರತಿಕ್ರಿಯಿಸಿರುವ ಸಶಸ್ತ್ರಪಡೆಗಳ ಮುಖ್ಯಸ್ಥ ಅನಿಲ್‌ ಚೌಹಾಣ್‌ ಅವರು ಜೆಟ್‌ ಪತನ ಮುಖ್ಯವಲ್ಲ ಎಂದು ಹೇಳುವ ಮೂಲಕ ಆಪರೇಷನ್‌ ಸಿಂದೂರ್‌ ನಷ್ಟದ ಕುರಿತ ಮಾಹಿತಿ ಕುತೂಹಲ ಕೆರಳಿಸಿದೆ.;

Update: 2025-05-31 13:28 GMT

ಅನಿಲ್ ಚೌಹಾಣ್

ಪಾಕಿಸ್ತಾನದ ಮೇಲೆ ಭಾರತ ನಡೆಸಿದ ʼಆಪರೇಶನ್‌ ಸಿಂದೂರ್‌ʼ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾರತದ ಜೆಟ್‌ ವಿಮಾನ ಪತನದ ವರದಿಯನ್ನು ಭಾರತೀಯ ಸೇನೆ ಮೊದಲ ಬಾರಿಗೆ ಅಧಿಕೃತವಾಗಿ ದೃಡೀಕರಿಸಿದೆ. ಆದರೆ, ಎಷ್ಟು ಯುದ್ಧ ವಿಮಾನಗಳನ್ನು ಪಾಕ್‌ ಹೊಡೆದುರುಳಿಸಿದೆ ಎಂಬ ನಿಖರ ಸಂಖ್ಯೆಯನ್ನು ಅದು ಬಹಿರಂಗಪಡಿಸಿಲ್ಲ.

ಸಿಂಗಾಪುರದಲ್ಲಿ ಶಾಂಗ್ರಿ-ಲಾ ಸಂವಾದದ ಸಂದರ್ಭದಲ್ಲಿ ಬ್ಲೂಮ್‌ಬರ್ಗ್ ಟಿವಿಗೆ ಸಶಸ್ತ್ರ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದು, ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ಮತ್ತೆ ದಾಳಿ ಮಾಡಲು ತನ್ನ ತಪ್ಪುಗಳನ್ನು ತ್ವರಿತವಾಗಿ ಸರಿಪಡಿಸಿಕೊಂಡವು' ಎಂದು ಪ್ರತಿಪಾದಿಸಿದ್ದಾರೆ.

ಸಂಖ್ಯೆ ಬಹಿರಂಗಪಡಿಸಿಲ್ಲ

ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಚೌಹಾಣ್ ನೇರವಾಗಿ ಒಪ್ಪಿಕೊಳ್ಳದೇ ಹೋದರೂ ಈ ಕುರಿತ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ. "ಜೆಟ್ ಹೊಡೆದುರುಳಿಸಿರುವುದು ಮುಖ್ಯ ಅಲ್ಲ, ಆದರೆ, ಏಕೆ ಹೊಡೆದರು, ಯಾವ ತಪ್ಪುಗಳನ್ನು ಮಾಡಲಾಯಿತು ಎಂಬುದು ಮುಖ್ಯ. ನಮ್ಮ ಸಶಸ್ತ್ರ ಪಡೆಗಳು ಯುದ್ಧತಂತ್ರದ ತಪ್ಪುಗಳನ್ನು ವಿಶ್ಲೇಷಿಸಲು, ಅವುಗಳನ್ನು ಸರಿಪಡಿಸಲು ಮತ್ತು ಎರಡು ದಿನಗಳ ನಂತರ ಮತ್ತೆ ಪಾಕಿಸ್ತಾನವನ್ನು ಗುರಿಯಾಗಿಸಲು ತ್ವರಿತವಾಗಿ ಎಲ್ಲಾ ಜೆಟ್‌ಗಳನ್ನು ಹಾರಿಸಿ, ದೀರ್ಘ ವ್ಯಾಪ್ತಿಯನ್ನು ಗುರಿಯಾಗಿರಿಸಿಕೊಂಡವು" ಎಂದು ಹೇಳಿದರು. 

ಆದಾಗ್ಯೂ, ನಷ್ಟವಾದ ಭಾರತೀಯ ಜೆಟ್‌ಗಳ ಸಂಖ್ಯೆ ಬಹಿರಂಗಪಡಿಸಲು ಅವರು ನಿರಾಕರಿಸಿದರು. ಆದರೆ, ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆ “ಸಂಪೂರ್ಣವಾಗಿ ಸುಳ್ಳು" ಎಂದು ಹೇಳಿದರು. ಮೂಲಗಳ ಪ್ರಕಾರ ಭಾರತದ 1 ಫೈಟರ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎನ್ನಲಾಗುತ್ತಿದೆ. 

ಟ್ರಂಪ್ ಹೇಳಿಕೆಗೆ ವ್ಯತಿರಿಕ್ತ 

ಮೇ 7 ರಂದು ಪ್ರಾರಂಭವಾದ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ಯುದ್ಧ ವಿಮಾನಗಳ ಭವಿಷ್ಯದ ಬಗ್ಗೆ ಭಾರತ ಸರ್ಕಾರ ಅಥವಾ ಸೇನೆಯಿಂದ ಬಂದಿರುವ ಸಿಡಿಎಸ್ ಹೇಳಿಕೆಗಳು ಇಲ್ಲಿಯವರೆಗಿನ ಅತ್ಯಂತ ನಿಖರ ಹೇಳಿಕೆಗಳಾಗಿವೆ.

ಎರಡು ನೆರೆಯ ರಾಷ್ಟ್ರಗಳ ನಡುವಿನ ಪರಮಾಣು ಯುದ್ಧವನ್ನು ತಪ್ಪಿಸಲು ಅಮೆರಿಕದ ಮಧ್ಯಸ್ಥಿಕೆ ಸಹಾಯ ಮಾಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎರಡೂ ದೇಶಗಳು ಪರಮಾಣು ಶಸ್ತ್ರಾಸ್ತ್ರ ಬಳಸುವ ಅಂಚಿನಲ್ಲಿದ್ದವು ಎಂಬುದು "ಅಸಂಬದ್ಧ" ಎಂದು ಸಿಡಿಎಸ್ ಅನಿಲ್‌ ಚೌಹಾಣ್‌ ಅವರು ಟ್ರಂಪ್‌ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ಸಾಂಪ್ರದಾಯಿಕ ಕಾರ್ಯಾಚರಣೆಗಳ ನಡವಳಿಕೆ ಮತ್ತು ಪರಮಾಣು ಮಿತಿಯ ನಡುವೆ ಸಾಕಷ್ಟು ಅಂತರವಿದೆ ಎಂಬುದು ನನ್ನ ವೈಯಕ್ತಿಕ ಭಾವನೆ.  ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪಾಕಿಸ್ತಾನದೊಂದಿಗಿನ ಸಂವಹನ ಮಾರ್ಗಗಳು ಯಾವಾಗಲೂ ತೆರೆದಿರುತ್ತವೆ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಚೀನಾ ಮತ್ತು ಇತರ ದೇಶಗಳಿಂದ ಪೂರೈಕೆಯಾದ ಶಸ್ತ್ರಾಸ್ತ್ರಗಳು ಕೆಲಸ ಮಾಡಲಿಲ್ಲ. ಪಾಕಿಸ್ತಾನದೊಳಗೆ 300 ಕಿಲೋಮೀಟರ್ ದೂರದಲ್ಲಿರುವ ವಾಯುನೆಲೆಗಳ ಮೇಲೆ ಭಾರತ ನಿಖರ ದಾಳಿಗಳನ್ನು ನಡೆಸಿದೆ. ಸದ್ಯ ಕದನ ವಿರಾಮ ಮುಂದುವರೆದಿದೆ. ಅದರ ಭವಿಷ್ಯವು ಪಾಕಿಸ್ತಾನದ ‌ಕೈಗೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು.

Tags:    

Similar News