ಮುಂಬೈಗೆ ಬಾಂಬ್ ಬೆದರಿಕೆ: ನೋಯ್ಡಾ ಮೂಲದ ವ್ಯಕ್ತಿಯ ಬಂಧನ

ಮುಂಬೈ ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಕಳುಹಿಸಲಾಗಿದ್ದ ಈ ಸಂದೇಶದಲ್ಲಿ, "ಲಷ್ಕರ್-ಎ-ಜಿಹಾದಿ" ಎಂಬ ನಕಲಿ ಸಂಘಟನೆಯ ಹೆಸರಿನಲ್ಲಿ ಬೆದರಿಕೆ ಹಾಕಲಾಗಿತ್ತು.;

Update: 2025-09-06 07:26 GMT
ಬಾಂಬ್‌ ಬೆದರಿಕೆ ಹಾಕಿದ್ದ ನೋಯ್ಡ ಮೂಲದ ವ್ಯಕ್ತಿ
Click the Play button to listen to article

ಅನಂತ ಚತುರ್ದಶಿ ಹಬ್ಬದ ದಿನದಂದು ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವುದಾಗಿ ಸುಳ್ಳು ವ್ಯಾಟ್ಸ್​​ಆ್ಯಪ್ ಸಂದೇಶ ಕಳುಹಿಸಿದ್ದ 50 ವರ್ಷದ ವ್ಯಕ್ತಿಯನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ. ಅಶ್ವಿನ್ ಕುಮಾರ್ ಸುಪ್ರಾ ಎಂದು ಗುರುತಿಸಲಾದ ಈತ, 14 ಪಾಕಿಸ್ತಾನಿ ಉಗ್ರರು 400 ಕೆ.ಜಿ. ಆರ್​​ಡಿಎಕ್ಸ್​ ನೊಂದಿಗೆ ಮುಂಬೈಗೆ ನುಸುಳಿದ್ದಾರೆ ಎಂದು ಬೆದರಿಕೆ ಹಾಕಿದ್ದನು.

ಮುಂಬೈ ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಕಳುಹಿಸಲಾಗಿದ್ದ ಈ ಸಂದೇಶದಲ್ಲಿ, "ಲಷ್ಕರ್-ಎ-ಜಿಹಾದಿ" ಎಂಬ ನಕಲಿ ಸಂಘಟನೆಯ ಹೆಸರಿನಲ್ಲಿ ಬೆದರಿಕೆ ಹಾಕಲಾಗಿತ್ತು. ನಗರದಾದ್ಯಂತ 34 ವಾಹನಗಳಲ್ಲಿ "ಮಾನವ ಬಾಂಬ್‌ಗಳನ್ನು" ಇಡಲಾಗಿದ್ದು, "ಒಂದು ಕೋಟಿ" ಜನರನ್ನು ಕೊಲ್ಲುವ ಗುರಿ ಹೊಂದಲಾಗಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಆರೋಪಿಯ ಬಂಧನ

ಮುಂಬೈ ಪೊಲೀಸರ ಮನವಿಯ ಮೇರೆಗೆ, ನೋಯ್ಡಾ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಬಿಹಾರ ಮೂಲದ ಅಶ್ವಿನ್ ಕುಮಾರ್ ಸುಪ್ರಾ, ಕಳೆದ ಐದು ವರ್ಷಗಳಿಂದ ನೋಯ್ಡಾದ ಸೆಕ್ಟರ್ 113 ಪ್ರದೇಶದಲ್ಲಿ ವಾಸವಾಗಿದ್ದ. ಸ್ವಾಟ್ ತಂಡವು ಈತನನ್ನು ಬಂಧಿಸಿ, ಹೆಚ್ಚಿನ ತನಿಖೆಗಾಗಿ ಮುಂಬೈಗೆ ಕರೆದೊಯ್ಯುತ್ತಿದೆ. ಬೆದರಿಕೆ ಸಂದೇಶ ಕಳುಹಿಸಲು ಬಳಸಿದ್ದ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಭದ್ರತೆ ಹೆಚ್ಚಳ

ಗಣೇಶ ಮೂರ್ತಿ ವಿಸರ್ಜನೆಯ ಅಂತಿಮ ದಿನದಂದು ಈ ಬೆದರಿಕೆ ಬಂದಿದ್ದರಿಂದ ಮುಂಬೈನಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ಲಕ್ಷಾಂತರ ಭಕ್ತರು ಬೀದಿಗಿಳಿಯುವ ಈ ಸಂದರ್ಭದಲ್ಲಿ, ಅಧಿಕಾರಿಗಳು ತಕ್ಷಣವೇ ನಗರದಾದ್ಯಂತ ಕಟ್ಟೆಚ್ಚರ ವಹಿಸಿದರು. 21,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು ಮತ್ತು ಪ್ರಮುಖ ಸ್ಥಳಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು.

ಇತ್ತೀಚಿನ ತಿಂಗಳುಗಳಲ್ಲಿ ಮುಂಬೈನಲ್ಲಿ ಇಂತಹ ಹಲವಾರು ಸುಳ್ಳು ಬಾಂಬ್ ಬೆದರಿಕೆಗಳು ಬಂದಿದ್ದು, ಪೊಲೀಸರು ಹೆಚ್ಚಿನ ಜಾಗರೂಕತೆ ವಹಿಸಿದ್ದಾರೆ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ವರದಿ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Tags:    

Similar News