ಅರುಣಾಚಲ: ಕಮರಿಗೆ ಉರುಳಿದ ಟ್ರಕ್, ಮೂವರು‌ ಸೈನಿಕರು ಸಾವು

Update: 2024-08-28 06:58 GMT

ಇಟಾನಗರ: ಅರುಣಾಚಲ ಪ್ರದೇಶದ ಮೇಲಣ ಸುಬರ್ಣಸಿರಿ ಜಿಲ್ಲೆಯಲ್ಲಿ ಟ್ರಕ್ ರಸ್ತೆಯಿಂದ ಜಾರಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 

ತಾಪಿ ಗ್ರಾಮದ ಬಳಿಯ ಅರುಣಾಚಲ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಹವಾಲ್ದಾರ್ ನಖತ್ ಸಿಂಗ್, ನಾಯಕ್ ಮುಖೇಶ್ ಕುಮಾರ್ ಮತ್ತು ಗ್ರೆನೇಡಿಯರ್ ಆಶಿಶ್ ಕುಮಾರ್ ಮೃತರು ಎಂದು ಸೇನೆಯ ಮೂಲಗಳು ತಿಳಿಸಿವೆ. 

ಅಪಘಾತಕ್ಕೀಡಾದ ಟ್ರಕ್ ಸಿಬ್ಬಂದಿಯನ್ನು ಸಾಗಿಸುವ ಬೆಂಗಾವಲು ಪಡೆಯ ಭಾಗವಾಗಿತ್ತು. ಸುಬರ್ಣಸಿರಿಯ ಜಿಲ್ಲಾ ಕೇಂದ್ರ ಪಟ್ಟಣ ದಪೋರಿಜೋದಿಂದ ಲೆಪರಾಡಾ ಜಿಲ್ಲೆಯ ಬಸರ್‌ಗೆ ತೆರಳುತ್ತಿದ್ದಾಗ, ಅಪಘಾತ ಸಂಭವಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಲು ಮತ್ತು ಮೃತರ ದೇಹಗಳನ್ನು ಹೊರತೆಗೆಯಲು ಸಹಕರಿಸಿದರು.

ನಖತ್ ಸಿಂಗ್, ಮುಖೇಶ್ ಕುಮಾರ್ ಮತ್ತು ಆಶಿಶ್ ಅವರ ದುಃಖದ ನಿಧನಕ್ಕೆ ಸೇನೆಯ ಈಸ್ಟರ್ನ್ ಕಮಾಂಡ್ ಸಂತಾಪ ವ್ಯಕ್ತಪಡಿಸಿದೆ. ಮೂವರು ಸೇನಾ ಸಿಬ್ಬಂದಿ ಸಾವಿಗೆ ಮುಖ್ಯಮಂತ್ರಿ ಪೆಮಾ ಖಂಡು ಸಂತಾಪ ಸೂಚಿಸಿದ್ದಾರೆ.

Tags:    

Similar News