ರಾಯ್‌ಪುರ: ನಕ್ಸಲಿಸಂ ಕುರಿತು ಸಮನ್ವಯ ಸಭೆ

Update: 2024-08-24 12:06 GMT
ಕೇಂದ್ರ ಗೃಹ ಸಚಿವ ಅಮಿತ್ ಶಾ, ಚತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಮತ್ತು ಇತರರು ರಾಯ್‌ಪುರ ಜಿಲ್ಲೆಯ ಚಂಪಾರಣ್‌ನಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು

ರಾಯ್‌ಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಕ್ಸಲಿಸಂ ಕುರಿತ ಅಂತಾರಾಜ್ಯ ಸಮನ್ವಯ ಸಭೆಯು ಶನಿವಾರ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಆರಂಭವಾಗಿದೆ. 

ಏಳು ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದು, ಅಂತಾರಾಜ್ಯ ಸಮನ್ವಯ ಮತ್ತು ಎಡಪಂಥೀಯ ಉಗ್ರರ ಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಚತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹಾಗೂ ಚತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿಗಳು) ಭಾಗವಹಿಸಲಿದ್ದಾರೆ ಎಂದು ಅಧಿಕಾರಿ ಹೇಳಿದರು. 

ʻಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಏಳು ರಾಜ್ಯಗಳಲ್ಲಿ, ವಿಶೇಷವಾಗಿ ಅಂತಾರಾಜ್ಯ ಗಡಿಗಳಲ್ಲಿ ನಕ್ಸಲರ ಉಪಸ್ಥಿತಿ ಇದೆ. ಚತ್ತೀಸ್‌ಗಢದ ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ಭದ್ರತೆ ಮತ್ತು ಅಭಿವೃದ್ಧಿ ಕುರಿತ ಸಬೆ ನಡೆಯಲಿದ್ದು, ಷಾ ಅಧ್ಯಕ್ಷತೆ ವಹಿಸಲಿದ್ದಾರೆ,ʼ ಎಂದು ಅಧಿಕಾರಿ ತಿಳಿಸಿದರು. 

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಚತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದೆ. ಈ ವರ್ಷ ಇದುವರೆಗೆ 142 ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.

ಲೋಕಸಭೆ ಪ್ರಚಾರದ ವೇಳೆ, ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಚುನಾಯಿತರಾದರೆ ಚತ್ತೀಸ್‌ಗಢದಲ್ಲಿ ನಕ್ಸಲಿಸಂ ಅನ್ನು ಮೂರು ವರ್ಷಗಳಲ್ಲಿ ತೊಡೆದುಹಾಕಲಾಗುವುದು ಎಂದು ಶಾ ಹೇಳಿದ್ದರು. 

Tags:    

Similar News