Bangalore Stampede | ವಿಜಯೋತ್ಸವ ದುರಂತ: ಸಂಪುಟದಲ್ಲಿ ಬಿಸಿಯೇರಿದ ʼವೈಫಲ್ಯದʼ ಚರ್ಚೆ; ಆರ್‌ಸಿಬಿ ವಿರುದ್ಧ ಎಫ್‌ಐಆರ್‌

ಬೆಂಗಳೂರು ಕಾಲ್ತುಳಿತ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು , ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್‌ ಮತ್ತಿತರ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ,.;

Update: 2025-06-04 10:09 GMT

ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡದ ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ವಿಚಾರವು ಗುರುವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ. ಘಟನೆಯು ಕೇವಲ ರಾಜ್ಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿರುವುದರಿಂದ ಸರ್ಕಾರದ ವಿರುದ್ಧ ಆಕ್ಷೇಪಗಳು ವ್ಯಕ್ತಗೊಂಡಿವೆ. ಹೀಗಾಗಿ ಸಂಪುಟ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲು ಹಲವಾರು ಸಚಿವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ವಿಜಯೋತ್ಸವದಲ್ಲಿ ಸುಮಾರು 2-3 ಲಕ್ಷ ಜನರು ಸೇರಿದ್ದರು. ಈ ಅನಿರೀಕ್ಷಿತ ಜನಸಂದಣಿ ನಿಯಂತ್ರಿಸಲು ಭದ್ರತಾ ವ್ಯವಸ್ಥೆ ವಿಫಲವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಪ್ರಕಾರ, ಗೇಟ್ 7ರ ಬಳಿ "ಉಚಿತ ಟಿಕೆಟ್" ಎಂಬ ವದಂತಿ ಹರಡಿದ್ದರಿಂದ ಜನರು ಒಳನುಗ್ಗಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಉಂಟಾದ ಗೊಂದಲ ಮತ್ತು ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಯಿತು. ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರು ಮತ್ತು ವಿದ್ಯಾರ್ಥಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ ಈ ಎಲ್ಲ ವಿಚಾರಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.

ಈ ದುರಂತಕ್ಕೆ ಯಾರು ಜವಾಬ್ದಾರರು ಎಂಬುದು ಸಭೆಯಲ್ಲಿ ಚರ್ಚೆಯಾಗಲಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಆಯೋಜನೆಯ ಹೊಣೆಗಾರಿಕೆಯನ್ನು ಹೊಂದಿದ್ದರೂ, ಭದ್ರತಾ ನಿರ್ವಹಣೆ ರಾಜ್ಯ ಪೊಲೀಸ್ ಇಲಾಖೆಯದ್ದಾಗಿತ್ತು. ಕೇವಲ 2,000 ಪೊಲೀಸ್ ಸಿಬ್ಬಂದಿಯನ್ನು 2-3 ಲಕ್ಷ ಜನರನ್ನು ನಿಯಂತ್ರಿಸಲು ನಿಯೋಜಿಸಿದ್ದು ಭದ್ರತಾ ವೈಫಲ್ಯಕ್ಕೆ ಕಾರಣವಾಯಿತೇ ಎಂಬ ಆರೋಪಗಳ ಕುರಿತು ಪ್ರಶ್ನೆಗಳು ಸಭೆಯಲ್ಲಿ ಏಳಲಿವೆ.

ಸಂಭ್ರಮಾಚರಣೆಯನ್ನು ತರಾತುರಿಯಲ್ಲಿ ಆಯೋಜಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ದೊಡ್ಡ ಸಂಖ್ಯೆಯ ಜನ ಸೇರುವ ನಿರೀಕ್ಷೆಯಿದ್ದರೂ ಸೂಕ್ತ ಯೋಜನೆ ರೂಪಿಸದಿರುವುದು ಏಕೆ ಎಂಬ ಪ್ರಶ್ನೆಗಳು ಸಚಿವರ ವಲಯದಲ್ಲೇ ಎದ್ದಿವೆ. ವಿಜಯ ಪಥಯಾತ್ರೆಯ ಕುರಿತು ಆರ್‌ಸಿಬಿಯ ಸಾಮಾಜಿಕ ಮಾಧ್ಯಮ ಘೋಷಣೆ ಮತ್ತು ಗೃಹ ಸಚಿವರ ಪ್ರಕಟಣೆಗಳ ನಡುವಿನ ಗೊಂದಲವೂ ಚರ್ಚೆಯಾಗಲಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಘಟನೆಯ ಸಮಗ್ರ ತನಿಖೆ, ಭದ್ರತಾ ಕ್ರಮಗಳ ಸುಧಾರಣೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮೃತರ ಕುಟುಂಬಗಳಿಗೆ ಮತ್ತಷ್ಟು ಬೆಂಬಲ ಹಾಗೂ ಕೆಸಿಎಯ ಪಾತ್ರದ ಕುರಿತು ಮಹತ್ವದ ತೀರ್ಮಾನಗಳನ್ನು ನಿರೀಕ್ಷಿಸಲಾಗಿದೆ.  

ಪರಿಶೀಲನೆ

ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಮ್ಯಾಜಿಸ್ಟೀರಿಯಲ್‌ ತನಿಖೆ ಆರಂಭವಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್‌ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು, ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಲ್ತುಳಿತಕ್ಕೂ ಮುನ್ನ ಹಾಗೂ ನಂತರದ ಸನ್ನಿವೇಶಗಳ ಕುರಿತು ಮಾಹಿತಿ ಪಡೆದರು. ಅಲ್ಲದೇ ಕಾಲ್ತುಳಿತ ಸಂಭವಿಸಿದ ಸ್ಥಳಗಳನ್ನು ಪರಿಶೀಲಿಸಿದರು.

ಇದಕ್ಕೂ ಮುನ್ನ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಕೂಡ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಇನ್ನು ಮುಂದೆ ಬೃಹತ್‌ ಸಮಾರಂಭ, ಮೆರವಣಿಗೆ, ಸಭೆ ಹಾಗೂ ವಿಜಯೋತ್ಸವಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲು ನಿರ್ಧರಿಸಲಾಗಿದೆ.

ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ರಾಷ್ಟ್ರ ನಾಯಕರಲ್ಲದೆ ಇತರ ದೇಶಗಳ ನಾಯಕರೂ ಆಘಾತ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌  ಅವರೂ ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ವಿಷಾದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು,  ‘ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆದ ದುರಂತಲ್ಲಾದ ಜೀವಹಾನಿ ಆಘಾತಕಾರಿ ಮತ್ತು ಹೃದಯವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಆಶಿಸಿದ್ದಾರೆ.

ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ‘ಬೆಂಗಳೂರಿನ ದುರಂತದಲ್ಲಿ ಮೃತರಾದವರ ಸಂಬಂಧಿಗಳು ಮತ್ತು ಗಾಯಗೊಂಡವರ ನೋವಿನಲ್ಲಿ ನಾನು ಮತ್ತು ಅಕ್ಷತಾನ (ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಮಗಳು) ಭಾಗಿಯಾಗಿದ್ದೇವೆ. ನಾವು ನಿಮ್ಮೊಂದಿಗೆ ಸಂಭ್ರಮಾಚಾರಣೆ ಮಾಡಿದ್ದೆವು; ಆದರೆ, ಈಗ ಶೋಕಾಚರಣೆ ಮಾಡುತ್ತಿದ್ದೇವೆ’ ಎಂದು  ನೋವು ಹಂಚಿಕೊಂಡಿದ್ದಾರೆ.

ಬುಧವಾರ ಏನಾಯಿತು?

ಐಪಿಎಲ್ 2025ನಲ್ಲಿ ಐತಿಹಾಸಿಕ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡಕ್ಕೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. 18 ವರ್ಷಗಳ ನಿರೀಕ್ಷೆಯ ನಂತರ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದ ಆರ್​ಸಿಬಿ ತಂಡಕ್ಕೆ ನಗರದೆಲ್ಲೆಡೆ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು.

ಬುಧವಾರ ಮಧ್ಯಾಹ್ನ ತಂಡವು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗಲೇ ಸಾವಿರಾರು ಅಭಿಮಾನಿಗಳು ತಂಡವನ್ನು ಬರಮಾಡಿಕೊಂಡರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೈಯಕ್ತಿಕವಾಗಿ ವಿರಾಟ್ ಕೊಹ್ಲಿ ಮತ್ತು ಆಟಗಾರರನ್ನು ಸ್ವಾಗತಿಸಿ, ಅವರಿಗೆ ಬೊಕೆ ಹಾಗೂ ಆರ್​ಸಿಬಿ ಮತ್ತು ಕನ್ನಡ ಬಾವುಟಗಳನ್ನು ನೀಡಿ ಗೌರವಿಸಿದರು.

ವಿಜಯೋತ್ಸವದ ಪ್ರಮುಖ ಭಾಗವಾಗಿ, ಆರ್​ಸಿಬಿ ತಂಡದ ಆಟಗಾರರು ವಿಧಾನಸೌಧದ ಮೆಟ್ಟಿಲುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ಸಚಿವರಿಂದ ಅಧಿಕೃತ ಸನ್ಮಾನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಂಡದ ನಾಯಕ ರಜತ್ ಪಟೀದಾರ್, ವಿರಾಟ್ ಕೊಹ್ಲಿ, ಮತ್ತು ಇತರ ಆಟಗಾರರು ಭಾಗವಹಿಸುತ್ತಾರೆ.

ಸನ್ಮಾನ ನಂತರ, ತಂಡದ ಆಟಗಾರರು ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಬಸ್​​ನಲ್ಲಿ ಸಾಗಲಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿತ್ತು; ಮೂರು ಡಿಸಿಪಿಗಳು, ಒಂಬತ್ತು ಎಸಿಪಿಗಳು, ಹನ್ನೆರಡು ಇನ್ಸ್‌ಪೆಕ್ಟರ್‌ಗಳು ಮತ್ತು ಹಲವಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Live Updates
2025-06-05 14:14 GMT

 

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಳಿ ಬುಧವಾರ(ಜೂ.4) ದಂದು ನಡೆದ ಕಾಲ್ತುಳಿತ‌ ಘಟನೆಯಲ್ಲಿ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್‌ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರೀಡಾಂಗಣದ ಗೇಟ್ ನಂ.19 ರ ಬಳಿ ಜನ ಒಮ್ಮೆಲೆ ನುಗ್ಗಿದ್ದಾರೆ. ಆದರೆ ಅಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿರಲಿಲ್ಲ. ಈ ಸಮಯದಲ್ಲಿ ಡಿಸಿಪಿ ಒಬ್ಬರೇ ಲಾಠಿ ಹಿಡಿದು ಗುಂಪು ಚದುರಿಸುತ್ತಿದ್ದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

2025-06-05 13:52 GMT

 

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸೇರಿದಂತೆ ಹಲವು ಸಚಿವರು ಸಚಿವ ಸಂಪುಟ ಸಭೆಯಲ್ಲಿ ಕೆಎಸ್‌ಸಿಎ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಸಭೆಗೆ ಮಾಹಿತಿ ನೀಡಿದ ಗೃಹ ಸಚಿವರು, ಕಾರ್ಯಕ್ರಮ ಆಯೋಜನೆ ಬಗ್ಗೆ ಕೆಎಸ್‌ಸಿಎ ಕಾರ್ಯಕ್ರಮ ನಡೆಸುತ್ತೇವೆ ಪೊಲೀಸ್‌ ಭದ್ರತೆ ಬೇಕೆಂದು ನನ್ನ ಗಮನಕ್ಕೆ ತಂದರು. ಆದರೆ ನಾನು ಈಗ ಕಾರ್ಯಕ್ರಮ ನಡೆಸುವುದು ಬೇಡ ಎಂದು ತಿಳಿಸಿದ್ದೆ ಎಂದರು.

ಆರ್‌ಸಿಬಿ ಹದಿನೆಂಟು ವರ್ಷಗಳ ನಂತರ ಗೆಲುವು ಸಾಧಿಸಿದೆ. ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಕ್ಕೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ ಹಾಗಾಗಿ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಕೇಳಿದರು. ನಾವು ಅನುಮತಿ ನೀಡಬಾರದಾಗಿತ್ತು ಎಂದ ಗೃಹ ಸಚಿವರು ಅಭಿಪ್ರಾಯಪಟ್ಟರು. ಸಭೆಯಲ್ಲಿ ಹಾಜರಿದ್ದ ಎಲ್ಲ ಸಚಿವರು ದುರಂತಕ್ಕೆ ಕೆಎಸ್‌ಸಿಎ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.

2025-06-05 13:17 GMT

ರಾಜ್ಯ ಸರ್ಕಾರ, ಕೆಎಸ್‌ಸಿಎ ಹಾಗೂ ಆರ್‌ಸಿಬಿ ಆಡಳಿತ ಮಂಡಳಿ ಸರಿಯಾದ ಯೋಜನೆ ರೂಪಿಸದೆ ಬುಧವಾರ(ಜೂ.4)ದಂದು ಕಾಲ್ತುಳಿತ ದುರಂತ ಸಂಭವಿಸಿದೆ ಎಂದು ಸರ್ಕಾರದ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದರು. ಹೈಕೋರ್ಟ್ ಸಹ ಸರ್ಕಾರಕ್ಕೆ ಚಾಟಿ ಬೀಸಿದ ಬೆನ್ನಲ್ಲೇ ಕೊನೆಗೂ ಎಚ್ಚೆತ್ತ ಪೊಲೀಸ್ ಇಲಾಖೆ ಕಾಲ್ತುಳಿತ ಪ್ರಕರಣವನ್ನು ಯುಡಿಆರ್ ಬದಲು ಎಫ್ಐಆರ್ ಆಗಿ ದಾಖಲಿಸಿದೆ. ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಆಡಳಿತ ಮಂಡಳಿ ವಿರುದ್ಧ ಬಿಎನ್ಎಸ್ 195 ಅಜಾಗರೂಕತರೆ ಅಡಿ ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

2025-06-05 12:05 GMT

 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಕ್ರಿಕೆಟ್ ಪ್ರೇಮಿಗಳ ಸಾವಿಗೆ ಕಾರಣವಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ತಕ್ಷಣವೇ ಸಂಪುಟದಿಂದ ಹೊರ ಹಾಕಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದು, ಡಿಸಿಎಂ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧೈರ್ಯವಿದ್ದರೆ ತಕ್ಷಣವೇ ಅವರನ್ನು ಸಂಪುಟದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

2025-06-05 11:43 GMT

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ(ಜೂ.4) ದಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬದವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಲಾ 1 ಕೋಟಿ ರೂ. ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ತಿಳಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 35 ಸಾವಿರ ಜನರು ಕೂರುವಷ್ಟು ಸಾಮರ್ಥ್ಯವಿದೆ. ಆದರೆ ಕ್ರೀಡಾಂಗಣದ ಬಳಿ ಎರಡು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರಿದ್ದರು. ದುರಂತಕ್ಕೆ ಯಾರು ಕಾರಣವೆಂದು ಸರ್ಕಾರ ತಿಳಿಸಬೇಕು ಎಂದರು.  

2025-06-05 10:44 GMT

ಬುಧವಾರ(ಜೂ.4)ದಂದು ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಘಟನೆಯು ಆರ್‌ಸಿಬಿ ಕುಟುಂಬಕ್ಕೆ ತೀವ್ರ ನೋವನ್ನುಂಟು ಮಾಡಿದೆ. ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ, ಆರ್‌ಸಿಬಿ ಮೃತರ 11 ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದೆ. ಇದರ ಜತೆಗೆ, ಈ ದುರಂತ ಘಟನೆಯಲ್ಲಿ ಗಾಯಗೊಂಡ ಅಭಿಮಾನಿಗಳನ್ನು ಬೆಂಬಲಿಸಲು ಆರ್‌ಸಿಬಿ ಕೇರ್ಸ್ ಎಂಬ ನಿಧಿಯನ್ನು ರಚಿಸಲಾಗುತ್ತಿದೆ. ನಮ್ಮ ಅಭಿಮಾನಿಗಳು ಯಾವಾಗಲೂ ಹೃದಯದಲ್ಲಿರುತ್ತಾರೆ. ನಾವು ದುಃಖದಲ್ಲಿ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಆರ್‌ಸಿಬಿ ಆಡಳಿತ ಮಂಡಳಿ ತಿಳಿಸಿದೆ.

2025-06-05 10:14 GMT

 

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆಯಾಗಿದೆ. ಬುಧವಾರ ನಡೆದ ಘಟನೆಗೆ ಹೊಣೆ ಯಾರು, ಯಾಕಾಗಿ ಈ ದುರ್ಘಟನೆ ನಡೆದಿದೆ ಎಂದು ಚರ್ಚೆ ನಡೆದಿದೆ. ಕ್ರೀಡಾಂಗಣದ ಬಳಿ ನಡೆದ ದುರ್ಘಟನೆ ರಾಜ್ಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಷಯ ಹಬ್ಬಿದೆ. ಸಂಭ್ರಮ ಬೇಡ ಎಂದು ಸಲಹೆ ಇದ್ದರು ತರಾತುರಿಯಲ್ಲಿ ಯಾಕೆ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಮಾಡಲು ಯಾರಾದರೂ ಒತ್ತಡ ಹಾಕಿದರೆ? ಕರ್ನಾಟಕ ಕ್ರಿಕೆಟ್‌ ಮಂಡಳಿ ಇದಕ್ಕೆ ಹೊಣೆಯೇ ಅಥವಾ ಭದ್ರತಾ ವೈಫಲ್ಯವೇ ಎಂದು ಹಲವು ಸಚಿವರು ಪ್ರಶ್ನಿಸಿದ್ದಾರೆ.

2025-06-05 09:43 GMT

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಚಾರ ಹಾಗೂ ಲಾಭಕ್ಕಾಗಿ ಸಿಎಂ ಹಾಗೂ ಡಿಕೆಶಿ ಅವರು ‌ಆರ್‌ಸಿಬಿ ಸನ್ಮಾನ ಕಾರ್ಯಕ್ರಮ ಮಾಡಿದ್ದಾರೆ. ಇದರಿಂದ 11 ಜನರ ಸಾವಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕ್ರಿಕೆಟ್ ಮಂಡಳಿ ಪದಾಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

2025-06-05 08:41 GMT

 

ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೆಟಿಯಲ್‌ ತನಿಖೆ ನಡೆಸುವಂತೆ ಸರ್ಕಾರ ಬುಧವಾರ (ಜೂ.4)ದಂದು ಆದೇಶಿಸಿತ್ತು. ಈ ಹಿನ್ನೆಲೆ ಕಾಲ್ತುಳಿತ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಕುರಿತು 15 ದಿನಗಳ ಒಳಗೆ ಸರ್ಕಾರಕ್ಕೆ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು.

2025-06-05 08:27 GMT

 

ಬುಧವಾರ(ಜೂ.4)ದಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ನ್ಯಾಯಾಂಗ ತನಿಖೆ ನಡೆಸುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೈಕೋರ್ಟ್‌ನ ಮಾನ್ಯ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು 45 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಅಸ್ವಸ್ಥರಾದವರನ್ನು ಶಿವಾಜಿನಗರದ ಬೌರಿಂಗ್‌, ಲೇಡಿ ಕರ್ಜನ್‌ ಹಾಗೂ ವೈದೇಹಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

Tags:    

Similar News