Textile Industry | ಬೆಂಗಳೂರು ಸುತ್ತಮುತ್ತ ಬಂಡವಾಳ ಹೂಡಿಕೆಗೆ ಬಾಂಗ್ಲಾ ದೇಶದ ಜವಳಿ ಉದ್ಯಮಿಗಳ ಆಸೆ

ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ, ವ್ಯಾಪಾರಕ್ಕೆ ಉತ್ತೇಜನ ಸಿಗದೇ ಬೇಸತ್ತಿರುವ ಜವಳಿ ಉದ್ಯಮಿಗಳು ಜವಳಿ ಕ್ಷೇತ್ರದಲ್ಲಿ ಧಾಪುಗಾಲು ಇಡುತ್ತಿರುವ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆಗೆ ಒಲವು ತೋರಿದ್ದಾರೆ.;

Update: 2025-06-11 10:52 GMT

ಬಾಂಗ್ಲಾದೇಶದ ಜವಳಿ ಉದ್ಯಮಿಗಳು ಕರ್ನಾಟಕದ ಜವಳಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಬಂಡವಾಳ ಹೂಡಿಕೆ ಕುರಿತು ಚರ್ಚಿಸಿದರು

ಸಿದ್ಧ ಉಡುಪು ತಯಾರಿಕೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಾಂಗ್ಲಾದೇಶದ ಜವಳಿ ಉದ್ಯಮ ಈಗ ಕರ್ನಾಟಕಕ್ಕೆ ಕಾಲಿಡುತ್ತಿದೆ. 

ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ, ವ್ಯಾಪಾರಕ್ಕೆ ಉತ್ತೇಜನ ಸಿಗದೇ ಬೇಸತ್ತಿರುವ ಜವಳಿ ಉದ್ಯಮಿಗಳು ಜವಳಿ ಕ್ಷೇತ್ರದಲ್ಲಿ ಧಾಪುಗಾಲು ಇಡುತ್ತಿರುವ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆಗೆ ಒಲವು ತೋರಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಜವಳಿ ಸಚಿವ ಶಿವಾನಂದ ಪಾಟೀಲ್‌ ಅವರನ್ನು ಭೇಟಿ ಮಾಡಿದ ಬಾಂಗ್ಲಾದೇಶದ ಪೆಂಟಗಾನ್ ನಿಟ್ ಕಾಂನ ಬಿಪಿನ್ ಮುಂದ್ರಾ ಅವರು ಈ ಕುರಿತು ಚರ್ಚಿಸಿದ್ದಾರೆ. 

ಉದ್ಯಮ ಸ್ಥಾಪನೆಗೆ ಅಗತ್ಯ ಸಹಕಾರ

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರುವವರಿಗೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಗ್ಗಾವಿಯಲ್ಲಿ ಸಿದ್ಧ ಉಡುಪು ಕಾರ್ಖಾನೆಯ ಆರಂಭಿಸಲು ಅನುಕೂಲಕರ ವಾತಾವರಣ ಇದೆ. ವಿದೇಶಿ ಹೂಡಿಕೆದಾರರಿಗೆ ರಾಜ್ಯ ಸರ್ಕಾರ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಿದೆ ಎಂದು ಬಾಂಗ್ಲಾದ ಜವಳಿ ಉದ್ಯಮಿಗೆ ಸಚಿವ ಶಿವಾನಂದ ಪಾಟೀಲ್‌ ಅವರು ಭರವಸೆ ನೀಡಿದ್ದಾರೆ.

ಶಿಗ್ಗಾವಿ ಪಟ್ಟಣದಲ್ಲಿ ಸಿದ್ಧ ಉಡುಪು ಕಾರ್ಖಾನೆ ಸ್ಥಾಪಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ. ಪಟ್ಟಣಕ್ಕೆ ವಿಮಾನ ಸಂಪರ್ಕ ಮತ್ತು ರೈಲ್ವೆ ಸಂಪರ್ಕ ಇದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಯೂನಿಟ್ ಆರಂಭಿಸಬಹುದು. ಇನ್ನೆರಡು ಸ್ಥಳಗಳು ರಾಜಧಾನಿಗೆ ಸಮೀಪದಲ್ಲಿವೆ. ಈ ಸ್ಥಳಗಳಿಗೆ ಭೇಟಿ ನೀಡಿ, ಯಾವುದು ಸೂಕ್ತ ಎಂಬುದನ್ನು ನಿರ್ಧರಿಸುವಂತೆ ಸಚಿವರು ಸಲಹೆ ನೀಡಿದ್ದಾರೆ. 

ಬಾಂಗ್ಲಾಗಿಂತ ಕರ್ನಾಟಕದಲ್ಲಿ ಹೆಚ್ಚು ಸೌಕರ್ಯ

ಬಾಂಗ್ಲಾದೇಶಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕ ಸರ್ಕಾರವೇ ಹೆಚ್ಚಿನ ಮೂಲ ಸೌಕರ್ಯ ಕಲ್ಪಿಸುತ್ತಿದೆ. ವಿದ್ಯುತ್ ಶುಲ್ಕ ಬಾಂಗ್ಲಾಗಿಂತ ಕಡಿಮೆ ಇದೆ. ರಾಜ್ಯ ಸರ್ಕಾರ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿದೆ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು. 

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಆಸಕ್ತಿ ಬಗ್ಗೆ ಕೇಳಿದ ಸಚಿವರು, ರಾಜ್ಯದಲ್ಲಿನ ಸ್ಥಳಗಳನ್ನು ಪರಿಶೀಲನೆ ಮಾಡಿ, ನಿಮಗೆ ಸೂಕ್ತ ಎನಿಸಿದ ಸ್ಥಳ ಆಯ್ಕೆ ಮಾಡಿಕೊಂಡರೆ ರಾಜ್ಯ ಸರ್ಕಾರ ಜವಳಿ ಘಟಕ ಆರಂಭಿಸಲು ಅಗತ್ಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ.

ಬಾಂಗ್ಲಾ ಪರಿಸ್ಥಿತಿ ವಿವರಿಸಿದ ಉದ್ಯಮಿ

ಜವಳಿ ಉದ್ಯಮಿ ಪೆಂಟಗಾನ್‌ ನಿಟ್ ಕಾಂನ ಬಿಪಿನ್ ಮುಂದ್ರಾ ಅವರು ಉದ್ಯಮ ಸ್ಥಾಪನೆಗೆ ಬಾಂಗ್ಲಾದಲ್ಲಿರುವ ಪರಿಸ್ಥಿತಿ ಕುರಿತು ವಿವರಿಸಿದರು.

ತಮ್ಮ ಸಂಸ್ಥೆ ವಾರ್ಷಿಕ 13 ಸಾವಿರ ಮಿಲಿಯನ್ ಡಾಲರ್ ವಹಿವಾಟು ಹೊಂದಿದೆ. 1980ರಿಂದಲೂ ನಾನು ಜವಳಿ ಕ್ಷೇತ್ರದಲ್ಲಿದ್ದೇನೆ. ಉದ್ಯಮ ವಿಸ್ತರಣೆ ಉದ್ದೇಶದಿಂದ ಕರ್ನಾಟಕದಲ್ಲಿ ಉದ್ಯಮ ಆರಂಭಿಸುವ ಅಭಿಲಾಷೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ ಒಂಬತ್ತು ರೂ. ಇದೆ. ಸದ್ಯದ ಪರಿಸ್ಥಿತಿ ಅಲ್ಲಿ ಜವಳಿ ಕ್ಷೇತ್ರಕ್ಕೆ ಪೂರಕ ವಾತಾವರಣ ಇಲ್ಲ. ಜವಳಿ ಉದ್ಯಮದಲ್ಲಿ ಬಾಂಗ್ಲಾದೊಂದಿಗೆ ಕರ್ನಾಟಕ ಉತ್ತಮ ನಂಟು ಹೊಂದಿರುವ ಕಾರಣ ಇಲ್ಲಿ ಉದ್ಯಮ ಆರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಉದ್ಯಮ ಆರಂಭಿಸಲು ಆಸಕ್ತಿ ಇದೆ. ಏಕಗವಾಕ್ಷಿ ಪದ್ದತಿ ಇದ್ದರೆ ಅನುಕೂಲ, ಆಡಳಿತಾತ್ಮಕವಾಗಿ ವಿಳಂಬವಾಗದಿದ್ದರೆ ತ್ವರಿತವಾಗಿ ಬಂಡವಾಳ ಹೂಡಲು ಸಿದ್ದರಿದ್ದೇವೆ ಎಂದು ಬಾಂಗ್ಲಾದ ಜವಳಿ ಉದ್ಯಮಿ ಬಿಪಿನ್‌ ಮುಂದ್ರಾ ಘೋಷಿಸಿದ್ದಾರೆ. 

ಬಾಂಗ್ಲಾದ ಆರ್ಥಿಕತೆಗೆ ಸಿದ್ಧ ಉಡುಪು ವಲಯ ಕೊಡುಗೆ 

ಸಿದ್ಧ ಉಡುಪು ತಯಾರಿಕೆ ಕಾರ್ಖಾನೆ(RMG) ವಲಯವು ಬಾಂಗ್ಲಾದೇಶದ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದು.  2002 ರಿಂದ 2012 ರವರೆಗೆ ಶೇ 55 ರಷ್ಟು ಬೆಳವಣಿಗೆ ದರ ದಾಖಲಿಸಿದೆ. 2024 ಡಿಸೆಂಬರ್‌ ಅಂತ್ಯದ ವೇಳೆಗೆ ಬಾಂಗ್ಲಾದೇಶವು ಸಿದ್ಧ ಉಡುಪು ರಫ್ತಿನಿಂದ 50 ಬಿಲಿಯನ್ ಡಾಲರ್‌ ವಹಿವಾಟು ದಾಖಲಿಸಿತ್ತು.

ಜವಳಿ, ಬಟ್ಟೆ ಮತ್ತು ಸಿದ್ಧ ಉಡುಪುಗಳ ರಫ್ತು ಪ್ರಮಾಣವು ಬಾಂಗ್ಲಾದೇಶದ ಒಟ್ಟು ಸರಕು ರಫ್ತಿನ ಶೇ 77 ರಷ್ಟಿದೆ. ಸಿದ್ಧ ಉಡುಪು ಉತ್ಪನ್ನಗಳಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿ ಬಾಂಗ್ಲಾದೇಶ ಹೊರಹೊಮ್ಮುತ್ತಿದೆ. ಇದು ಉತ್ಪಾದನಾ ವಲಯದಲ್ಲಿ ಅತಿ ಹೆಚ್ಚು ಉದ್ಯೋಗವನ್ನು ಹೆಚ್ಚಿಸಿದೆ. 

ರಾಜಕೀಯ ಅಸ್ಥಿರತೆಯಿಂದ ಬೆಳವಣಿಗೆ ಕುಂಠಿತ 

ಪ್ರಧಾನಿ ಶೇಖ್ ಹಸೀನಾ ಸರ್ಕಾರದ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಎದುರಾಗಿದೆ. ಇದು ದೇಶದ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.

ಕಳೆದ ವರ್ಷ 2024 ಆಗಸ್ಟ್ ತಿಂಗಳಲ್ಲಿ ಅಧಿಕಾರದಿಂದ ಪದಚ್ಯುತಗೊಳಿಸಲಾಯಿತು. ಹಸೀನಾ ಅವರ ದೂರದ ಸಂಬಂಧಿಯೇ ಆದ ಜನರಲ್ ವಾಕರ್-ಉಜ್-ಜಮಾನ್ ನೇತೃತ್ವದಲ್ಲಿ ಮಿಲಿಟರಿ ಆಡಳಿತ ಹೇರಲಾಯಿತು. ಇದಾದ ಬಳಿಕ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರನ್ನು ನೇಮಿಸಲಾಯಿತು. 

ಮಧ್ಯಂತರ ಸರ್ಕಾರದಲ್ಲಿ ಪ್ರಧಾನಿಯಾಗಿ ನೇಮಕವಾದ ಮುಹಮ್ಮದ್‌ ಯೂನಸ್‌  ಅವರು ಕೆಲ ಮೂಲಭೂತವಾದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿರುವುದು ಮಿಲಿಟರಿ ಹಾಗೂ ಮಧ್ಯಂತರ ಸರ್ಕಾರದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಈ ರಾಜಕೀಯ ಅಸ್ಥಿರತೆಯಿಂದ ಉತ್ಪಾದನಾ ವಲಯ ಅಗತ್ಯ ಮೂಲ ಸೌಲಭ್ಯಗಳಿಲ್ಲದೇ ಸೊರಗುತ್ತಿದೆ ಎನ್ನಲಾಗಿದೆ. 

Tags:    

Similar News