ಮಂಡ್ಯಕ್ಕೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ; ಬೆಳ್ತಂಗಡಿಯಲ್ಲಿ ಸಿಐಡಿ ಉಪವಿಭಾಗ ಸ್ಥಾಪನೆ
ಕಳೆದ ಎರಡು ವರ್ಷದಲ್ಲಿ ನಮ್ಮ ಸರ್ಕಾರ ಹಾಗೂ ಪೊಲೀಸ್ ಅನೇಕ ಸವಾಲುಗಳನ್ನು ಎದುರಿಸಿಕೊಂಡು ಬಂದಿದೆ. ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂಬುದು ಪೊಲೀಸ್ ಇಲಾಖೆಯ ಉದ್ದೇಶ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ, ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜನರಿಗೆ ಕೇಂದ್ರಿಕೃತವಾಗಿ ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ 'ಹೈಜಿನ್ ಆನ್ ಗೋ' ವಾಹನಗಳ ಹಸ್ತಾಂತರ ಹಾಗೂ ಪೊಲೀಸ್ ಇಲಾಖೆಯ 'ಪ್ರಗತಿಯ ಸ್ತಂಭಗಳು' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.
ಜನಸ್ನೇಹಿ ಪೊಲೀಸ್ ಇಲಾಖೆ
ಕಳೆದ ಎರಡು ವರ್ಷದಲ್ಲಿ ನಮ್ಮ ಸರ್ಕಾರ ಹಾಗೂ ಪೊಲೀಸ್ ಅನೇಕ ಸವಾಲುಗಳನ್ನು ಎದುರಿಸಿಕೊಂಡು ಬಂದಿದೆ. ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂಬುದು ಪೊಲೀಸ್ ಇಲಾಖೆಯ ಉದ್ದೇಶ. ಯಾವುದೇ ಅಹಿತಕರ ಘಟನೆ ಆಗಬಾರದು. ಕಳೆದ ಎರಡು ವರ್ಷ ದ ಅವಧಿಯಲ್ಲಿ ಈ ನಿಟ್ಟಿನಲ್ಲೇ ಕೆಲಸ ಇಲಾಖೆ ಮಾಡಿದೆ ಎಂದು ಹೇಳಿದರು.
ಇಲಾಖೆಯಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದಲಾವಣೆಗಳನ್ನು ತಂದಿದ್ದೇವೆ. ರಾಜ್ಯದ ಪೊಲೀಸ್ ಇಲಾಖೆ ಸ್ನೇಹತ್ವದಿಂದ ಜನಗಳ ಕೆಲಸಗಳಾಗಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ಅನ್ಯರಿಗೆ ತೊಂದರೆಯಾಗಬಾರದು. ಬದಲಾದ ಪರಿಸ್ಥಿತಿಯಲ್ಲಿ ತಂತ್ರಜ್ಞಾನವನ್ನು ಉಪಯೋಗದಿಂದ ಅಪರಾಧಗಳನ್ನು ಕಂಡು ಹಿಡಿಯುವ ರೀತಿಯಲ್ಲಿ ಕೆಲಸ ಮಾಡಲಾಗಿದೆ ಎಂದರು.
ನ್ಯಾಯ ನೀಡುವಲ್ಲಿ ಕರ್ನಾಟಕ ಮೊದಲನೆಯದು
ಕರ್ನಾಟಕ ಪೊಲೀಸ್ ನಾಗರಿಕರಿಗೆ ನ್ಯಾಯವನ್ನು ಒದಗಿಸುವುದರಲ್ಲಿ ಇಡೀ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ವಿವಿಧ ಮಾನದಂಡಗಳನ್ನು ಇಟ್ಟುಕೊಂಡು ಇಂಡಿಯಾ ಜಸ್ಟೀಸ್ ರಿಪೋರ್ಟ್ ಸಮೀಕ್ಷಾ ವರದಿ ನೀಡಿದೆ. 10 ಅಂಕಗಳಲ್ಲಿ ಕರ್ನಾಟಕಕ್ಕೆ 6.78 ಅಂಕಗಳನ್ನು ಪಡೆದು ಮೊದಲನೆಯ ಸ್ಥಾನ ಗಳಿಸಿದೆ. ಪೊಲೀಸ್ ಮತ್ತು ನ್ಯಾಯಾಂಗ ಎರಡು ಸಾಮ್ಯತೆಯಿಂದ ಕೆಲಸ ಮಾಡಿ, ವಿಶೇಷವಾಗಿ ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಿಸುವುದರಲ್ಲಿ ಮೊದಲನೇ ಸ್ಥಾನದಲ್ಲಿದೆ.
ಡಿಸಿಆರ್ಇ ಪ್ರತ್ಯೇಕ ಠಾಣೆಗಳು
ನಮ್ಮ ಸರ್ಕಾರವು ಅನೇಕ ಬದಲಾವಣೆಗಳನ್ನು ತಂದಿದೆ. ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ 33 ಡಿಸಿಆರ್ಇ ಠಾಣೆಗಳನ್ನು ಸ್ಥಾಪಿಸಲಾಗಿದೆ. ಡಿಸಿಆರ್ಇ ಅಧಿಕಾರಿಗಳು ಪ್ರತಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಪ್ರತ್ಯೇಕಗೊಳಿಸಿ ಎಸ್ಸಿ, ಎಸ್ಟಿ ಸಮುದಾಯಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ.
ದೇಶದಲ್ಲಿ ಬೇರೆ ಯಾವ ರಾಜ್ಯದಲ್ಲಿಯೂ ಡಿಸಿಆರ್ಇ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿಲ್ಲ. ಜಿಲ್ಲೆಗಳ ಪೊಲೀಸ್ ಪ್ರಗತಿ ಪರಿಶೀಲನೆ ವೇಳೆ ಎಸ್ಸಿ, ಎಸ್ಟಿ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದನ್ನು ಆದರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಮಂಡ್ಯಕ್ಕೂ ವಿಶೇಷ ಕಾರ್ಯಪಡೆ
ಕರಾವಳಿ ಭಾಗದಲ್ಲಿ ಕೊಲೆ, ಕೋಮು ಗಲಭೆಗಳು ನಡೆದವು. ಶಾಂತಿ ಇಲ್ಲದಂತಾಗಿತ್ತು. ಸಮಾಜದಲ್ಲಿ ದ್ವೇಷದ ಭಾವನೆ ಮೂಡುತ್ತಿರುವುದನ್ನು ಗಮನಿಸಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ವಿಶೇಷ ಕಾರ್ಯಪಡೆ (ಸ್ಪೆಷಲ್ ಆ್ಯಕ್ಷನ್ ಫೋರ್ಸ್) ಸ್ಥಾಪನೆ ಮಾಡಲಾಗಿದೆ. 300ಕ್ಕು ಹೆಚ್ಚು ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.
ನಮಗೆ ಸಿಕ್ಕ ಮಾಹಿತಿ ಆಧರಿಸಿ ಮಂಡ್ಯ ಜಿಲ್ಲೆಗೂ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ನೇಮಕ ಮಾಡಲಾಗಿದೆ. ಸ್ಪೆಷಲ್ ಆ್ಯಕ್ಷನ್ ಫೋರ್ಸ್ ನೇಮಕ ಮಾಡಿದ ಬಳಿಕ ಕರಾವಳಿ ಭಾಗದಲ್ಲಿ ಯಾವುದೇ ರೀತಿಯ ಕೊಲೆ, ಗಲಭೆಗಳಾಗಿಲ್ಲ. ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಮೂರು ದಿನಗಳ ಹಿಂದೆ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸರ್ಕಾರದ ಕಾರ್ಯವೈಖರಿ ಬಗ್ಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಯಿತು ಎಂದು ಹೇಳಿದರು.
ಬೆಳ್ತಂಗಡಿಯಲ್ಲಿ ಸಿಐಡಿ ಉಪವಿಭಾಗ
ಬೆಂಗಳೂರು ನಗರದಲ್ಲಿ ಹೊಸದಾಗಿ ಮೂರು ವಿಭಾಗಗಳನ್ನು ಮಾಡಲಾಗಿದೆ. ಸಿಐಡಿಯಲ್ಲಿ ಠೇವಣಿ ವಂಚನೆ ಮತ್ತು ಕ್ರಿಮಿನಲ್ ಗುಪ್ತಚರ ಘಟಕವನ್ನು ಮಾಡಲಾಗಿದೆ. ಬೆಳ್ತಂಗಡಿಯಲ್ಲಿ ಸಿಐಡಿ ಉಪ ವಿಭಾಗವನ್ನು ಸ್ಥಾಪನೆ ಮಾಡಲಾಗಿದೆ. ಅನೇಕ ಘಟನೆಗಳು ಮತ್ತು ಪ್ರಕರಣಗಳು ಬರುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸಿಐಡಿ ಉಪವಿಭಾಗ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
112 ಸಹಾಯವಾಣಿ ಸೇವೆ
ಎಮೆರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ 112 ಸಹಾಯವಾಣಿಗೆ ಪ್ರತಿದಿನ ರಾಜ್ಯದಾದ್ಯಂತ 24 ಸಾವಿರ ಕರೆಗಳು ಬರುತ್ತಿವೆ. 1400 ದೂರುಗಳಿಗೆ ನಮ್ಮ ಸಿಬ್ಬಂದಿಗಳು ಸ್ಪಂದಿಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 112 ಸಹಾಯವಾಣಿ ದೂರುಗಳಿಗೆ 6.59 ನಿಮಿಷದಲ್ಲಿ ಸ್ಪಂದಿಸುತ್ತಾರೆ. ಗ್ರಾಮೀಣ ಭಾಗದಲ್ಲಿ 13.58 ನಿಮಿಷದಲ್ಲಿ ಘಟನಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ಪೊಲೀಸ್ ಸಿಬ್ಬಂದಿಗೆ ವಸತಿ
ಇಲಾಖೆಯ ಪೊಲೀಸ್ ಸಿಬ್ಬಂದಿಗಳಿಗೆ ಪೊಲೀಸ್ ಗೃಹ ಯೋಜನೆಯಡಿ 10,034 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಶೇ. 33ರಷ್ಟು ಸಿಬ್ಬಂದಿಗಳಿಗೆ ಪೊಲೀಸ್ ವಸತಿ ಲಭ್ಯವಾಗಿದೆ. ಶೇ.60 ರಿಂದ 80ರಷ್ಟು ಸಿಬ್ಬಂದಿಗಳಿಗೆ ವಸತಿ ಕಲ್ಪಿಸುವ ಗುರಿ ಹೊಂದಲಾಗಿದ್ದು, ಹಂತಹಂತವಾಗಿ ಈಡೇರಿಸಲಾಗುವುದು ಎಂದು ತಿಳಿಸಿದರು.
ಮನೆಮನೆಗೆ ಪೊಲೀಸ್ ಕಾರ್ಯಕ್ರಮ
ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸ್ ಅಂದ ತಕ್ಷಣ ಭಯದ ವಾತವಾರಣ ಇದೆ. ಇದನ್ನು ನಿವಾರಿಸಲು ಮನೆಮನೆಗೆ ಪೊಲೀಸ್ ಸಹಕಾರಿಯಾಗುತ್ತಿದೆ. ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಶೇ. 95ರಷ್ಟು ಪೂರ್ಣಗೊಂಡಿದೆ. ಪೊಲೀಸ ಸುರಕ್ಷತೆ ಮತ್ತು ಪಾರದರ್ಶಕತೆಯ ನಿಟ್ಟಿನಲ್ಲಿ ಬಾಡಿವೋರ್ನ್ ಕ್ಯಾಮೆರಾಗಳನ್ನು ಒದಗಿಸಲಾಗಿದೆ ಎಂದರು.
ಎಐ ಕ್ಯಾಮೆರಾ ಮೇಲ್ವಿಚಾರಣೆ
ಬೆಂಗಳೂರು ನಗರದಲ್ಲಿ 160 ಪ್ರಮುಖ ಜಂಕ್ಷನ್ಗಳಲ್ಲಿ 9 ಸಾವಿರ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವುದೇ ರೀತಿಯ ಘಟನೆ ನಡೆದರ ಕಂಟ್ರೋಲ್ ರೂಮ್ಗೆ ಲೈವ್ಫೀಡ್ ಸಿಗುತ್ತಿದೆ. ಇತರೆ 7 ಲಕ್ಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಆಧುನೀಕರಗೊಳಿಸಲಾಗಿದ್ದು, ಎರಡು ತಿಂಗಳಲ್ಲಿ ವರದಿ ಲಭ್ಯವಾಗುತ್ತಿದೆ. ಇಡೀ ದೇಶದಲ್ಲಿ ಉತ್ತಮ ವಿಧಿವಿಜ್ಞಾನ ಪ್ರಯೋಗಾಲಯವಿದೆ ಎಂದು ಹೇಳಿದರು.
ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ
ಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯನ್ನು (ಎಎನ್ಟಿಎಫ್) ಸ್ಥಾಪಿಸಲಾಗಿದ್ದು, ಈಗಾಗಲೇ ಕಾರ್ಯಾರಂಭಿಸಿದೆ.
ಬೆಂಗಳೂರು ನಗರದಲ್ಲಿ ಕಳೆದ 11 ತಿಂಗಳಲ್ಲಿ 160 ಕೋಟಿ ರೂ. ಮೌಲ್ಯದ 1407 ಕೆಜಿ ವಿವಿಧ ರೂಪದ ಮಾದಕ ದ್ರವ್ಯ ಪತ್ತೆಹಚ್ಚಲಾಗಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 300ಕ್ಕು ಹೆಚ್ಚು ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. 2024ರಲ್ಲಿ 98 ಕೋಟಿ, 2023ರಲ್ಲಿ 103 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಲಾಗಿದೆ. ಇದು ಪೊಲೀಸ್ ಇಲಾಖೆಯ ದೊಡ್ಡ ಸಾಧನೆ. ಬೆಂಗಳೂರು ನಗರದಲ್ಲಿ ಒಂದೇ ದಿನ ಶಾಲಾ ಕಾಲೇಜುಗಳಿಗೆ ಭೇಟಿ ಕೊಟ್ಟು, ಡ್ರಗ್ಸ್ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಿದ್ದಾರೆ. ಇದು ನಿರಂತರವಾಗಿ ನಡೆಯಲಿದೆ. ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವ ವಿಚಾರದಲ್ಲಿ ಯಾವುದೇ ರೀತಿಯ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕೊಲೆ ಪ್ರಕರಣಗಳು ಇಳಿಕೆ
ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ವಿಪಕ್ಷದವರು ಬಿಂಬಿಸುತ್ತಿದ್ದಾರೆ. ಕೊಲೆ ಪ್ರಕರಣಗಳು ಹೆಚ್ಚಾಗಿಲ್ಲ. 2021ರಲ್ಲಿ 1340 ಪ್ರಕರಣಗಳು, 2022ರಲ್ಲಿ 1364, 2023ರಲ್ಲಿ 1389, 2024ರಲ್ಲಿ 1202 ಪ್ರಕರಣಗಳು ಹಾಗೂ ಪ್ರಸಕ್ತ ವರ್ಷ ನವೆಂಬರ್ ತಿಂಗಳವರೆಗೆ 1142 ಪ್ರಕರಣಗಳು ವರದಿಯಾಗಿವೆ. ಕೌಟುಂಬಿಕ ಕಲಹ, ಆಸ್ತಿ ವಿಚಾರಕ್ಕೆ ಹೆಚ್ಚಿನಂಶ ಕೊಲೆಗಳಾಗುತ್ತಿವೆ.
ಸೈಬರ್ ಅಪರಾಧ ನಿಯಂತ್ರಣ
ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು, ಇಡೀ ದೇಶದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಮ್ಗೆ ಡಿಜಿಪಿಯನ್ನು ನೇಮಿಸಲಾಗಿದೆ. ಜಿಲ್ಲೆಗೊಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದ ಬಳಿಕ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. 2022ರಲ್ಲಿ 12550 ಸೈಬರ್ ಪ್ರಕರಣಗಳು ದಾಖಲಾಗಿದ್ದವು. ಸೈಬರ್ ಕ್ರೈಮ್ಗೆ ಪ್ರತ್ಯೇಕ ಪೊಲೀಸ್ ಠಾಣೆಗಳು ಸ್ಥಾಪನೆಯಾದ ಬಳಿಕ 2023ರಲ್ಲಿ 21903 ಪ್ರಕರಣಗಳು, 2024ರಲ್ಲಿ 21995 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ 1300 ಪ್ರಕರಣಗಳು ವರದಿಯಾಗಿವೆ.
ಅಮೆರಿಕಾದಲ್ಲಿದ್ದವರಿಗೆ ಬೆಂಗಳೂರಿನಿಂದ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. 1930 ಸಹಾಯವಾಣಿ ತೆರೆಯಲಾಗಿದ್ದು ಸೈಬರ್ ಕ್ರೈಮ್ ದೂರುಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಲಾಗುತ್ತಿದೆ. ಸೈಬರ್ ಕ್ರೈಮ್ ಸಹಾಯವಾಣಿಯಲ್ಲಿ 66 ಜನ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸೈಬರ್ ಕ್ರೈಮ್ ನಿಯಂತ್ರಣಕ್ಕೆ ಇಲಾಖೆಯಲ್ಲಿ ಬಲವರ್ಧನೆಗೊಳಿಸಲಾಗಿದೆ ಎಂದು ತಿಳಿಸಿದರು.
ಕಾರಾಗೃಹ ಕಮಾಂಡ್ ಸೆಂಟರ್
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರಾಗೃಹ ಅಧೀಕ್ಷಕರ ಹುದ್ದೆಗೆ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ ಚಟುವಟಿಕೆಯ ಮೇಲೆ ನಿಗಾವಹಿಸಲು ಕಮಾಂಡ್ ಸೆಂಟರ್ ಮಾಡಲಾಗುವುದು. ಕಾರಾಗೃಹಗಳಲ್ಲಿ ಜಾಮರ್ ಅಳವಡಿಕೆಯಿಂದ ಕಾರಾಗೃಹ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಪಿಎಸ್ಐ ಮತ್ತು ಪಿಸಿ ನೇಮಕಾತಿ
ಹಿಂದಿನ ಸರ್ಕಾರ ಅವಧಿಯಲ್ಲಿ 545 ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದಿಂದ ಪೊಲೀಸ್ ನೇಮಕಾತಿಗೆ ತೊಂದರೆ ಉಂಟಾಯಿತು. ಸಾವಿರಾರು ಹುದ್ದೆಗಳು ಖಾಲಿ ಉಳಿದಿದ್ದವು. ರೂಲ್ 32 ಅಡಿ ಬಡ್ತಿ ನೀಡಲಾಯಿತು. 545 ಪಿಎಸ್ಐ ನೇಮಕಾತಿಯಲ್ಲಿಮ ಸಮಸ್ಯೆಯನ್ನು ಬಗೆಹರಿಸಿ ತರಬೇತಿಗೆ ಕಳುಹಿಸಲಾಗಿದೆ. 402 ಪಿಎಸ್ಐ ನೇಮಕಾತಿಯು ಪೂರ್ಣಗೊಂಡಿದ್ದು ತರಬೇತಿಗೆ ಕಳುಹಿಸಲಾಗುತ್ತಿದೆ. ಇನ್ನೂ 600 ಪಿಎಸ್ಐ ಹುದ್ದೆಗಳು ಖಾಲಿ ಇದ್ದು, ಅಧಿಸೂಚನೆ ಹೊರಡಿಸಲಾಗುವುದು.
4500 ಪೊಲೀಸ್ ಕಾನ್ಸ್ಟೇಬಲ್ಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಒಳಮೀಸಲಾತಿ ಪ್ರಕ್ರಿಯೆಯಿಂದ ಒಟ್ಟು 75 ಸಾವಿರ ಹುದ್ದೆಗಳ ಭರ್ತಿಗೆ ಸಾಧ್ಯವಾಗಿಲ್ಲ. ನಾಳೆ ಸಂಜೆ ಸಿಎಂ ಅವರು ಸಭೆ ಕರೆದಿದ್ದಾರೆ. ಇದು ಬಗೆಹರಿದರೆ, ಇಲಾಖೆಯಲ್ಲಿನ ಒಟ್ಟು 8 ಸಾವಿರ ನೇಮಕಾತಿಗೂ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಭ್ರಷ್ಟಚಾರ ವಿರೋಧಿ ಕ್ರಮ
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಚಾರ, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದರೆ ಅಮಾನತು ಅಥವಾ ಸೇವೆಯಿಂದ ವಜಾ ಮಾಡಲಾಗುತ್ತಿದೆ ಎಂದು ತಿಳಿಸಿದರು. ಭ್ರಷ್ಟಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದ, ಆತನನ್ನು ಡಿಸ್ಮಿಸ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಭ್ರಷ್ಟಚಾರವನ್ನು ಸಹಿಸುವುದಿಲ್ಲ. ವರ್ಗಾವಣೆ ದಂಧೆಯಲ್ಲಿ ತೊಡಗುವ ಏಜೆಂಟ್ಗಳ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.