ತಮ್ಮನ ತಿಥಿಗೆ ಬಂದಿದ್ದ ಅಕ್ಕ ಅಪಘಾತದಲ್ಲಿ ಸಾವು: ಮಂಗಳೂರಿನಲ್ಲಿ ಮನಕಲಕುವ ದುರಂತ

ಉಡುಪಿ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದ್ದು ಯುವತಿಯನ್ನು ಎಳೆದೊಯ್ದು ರಸ್ತೆ ಪಕ್ಕದ ಸಿಮೆಂಟ್‌ ಸ್ಲಾಬ್‌ಗೆ ಗುದ್ದಿದೆ. ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ;

Update: 2025-06-28 12:36 GMT

ತಮ್ಮ ಸುಜಿತ್‌ ಹಾಗೂ ಅಕ್ಕ ಶೃತಿ

ತಮ್ಮನ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಚೆನ್ನೈನಿಂದ ಬಂದಿದ್ದ ಅಕ್ಕನೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶನಿವಾರ (ಜೂನ್ 28) ಮಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟ ಯುವತಿ ಮಂಗಳೂರು ಹೊರವಲಯದ ಬಂಗ್ರಕೂಳೂರು ನಿವಾಸಿ ಶ್ರುತಿ (27). ಇವರು ಚೆನ್ನೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 10ರಂದು ಮೃತಪಟ್ಟಿದ್ದ ತಮ್ಮ ಸುಜಿತ್‌ನ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರುತಿ ಊರಿಗೆ ಬಂದಿದ್ದರು.

ಘಟನೆ ನಡೆದ ದಿನ ಶ್ರುತಿ ತಮ್ಮ ತಂದೆಯೊಂದಿಗೆ ಬ್ಯಾಂಕ್‌ಗೆ ಹೋಗಿ ವಾಪಸ್ ಬರುತ್ತಿದ್ದಾಗ ಮಳೆ ಪ್ರಾರಂಭವಾಗಿತ್ತು. ನಗರ ಸಮೀಪದ ಪಾವಂಜೆ ಬಳಿ ಸ್ಕೂಟರ್ ನಿಲ್ಲಿಸಿ ರೈನ್‌ ಕೋಟ್‌ ಹಾಕಿಕೊಳ್ಳುತ್ತಿದ್ದಾಗ, ಉಡುಪಿ ಕಡೆಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಕಾರು ಯುವತಿಯನ್ನು ಎಳೆದೊಯ್ದು ರಸ್ತೆ ಪಕ್ಕದ ಸಿಮೆಂಟ್ ಸ್ಲಾಬ್‌ಗೆ ಗುದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಶ್ರುತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಯುವತಿಯ ತಂದೆಯ ಕಾಲಿನ ಮೂಳೆ ಮುರಿದಿದ್ದು, ಮತ್ತೊಬ್ಬ ಮಹಿಳೆ ಸಹ ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಮಗನನ್ನು ಕಳೆದುಕೊಂಡಿದ್ದ ನೋವಿನಲ್ಲಿದ್ದ ಪೋಷಕರು, ಇದೀಗ ಜೀವನಕ್ಕೆ ಆಸರೆಯಾಗಿದ್ದ ಏಕೈಕ ಮಗಳನ್ನು ಸಹ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. 

Tags:    

Similar News