ವೋಟ್‌ ಚೋರಿ ಸುಳ್ಳನ್ನು ಸತ್ಯ ಮಾಡುವ ಯತ್ನ: ಬಸವರಾಜ ಬೊಮ್ಮಾಯಿ ಟೀಕೆ

ನೈತಿಕ ಪೊಲಿಸ್ ಗಿರಿ ಒಪ್ಪುವುದಿಲ್ಲ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅದರ ಬದಲು ರಸ್ತೆಯಲ್ಲಿ ಮೆರವಣಿಗೆ ಮಾಡಿ ಬಟ್ಟೆ ಹರಿಯುವುದು ಸರಿಯಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Update: 2025-12-14 12:22 GMT

ವೋಟ್‌ ಚೋರಿ ಹೆಸರಿನಲ್ಲಿ ಕಾಂಗ್ರೆಸ್ಸಿಗರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ‌. ಅದರಿಂದೇನೂ ಪ್ರಯೋಜನ ಆಗುವುದಿಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೋಟ್‌ ಚೋರಿ ಸುಳ್ಳನ್ನು ಸತ್ಯ ಮಾಡುವ ಅಭಿಯಾನಕ್ಕೆ ಬಹಳಷ್ಟು ಕಾಂಗ್ರೆಸ್ ನಾಯಕರಲ್ಲೇ ನಂಬಿಕೆ ಇಲ್ಲ. ಪ್ರತಿಷ್ಠೆಗಾಗಿ ಅವರು ಅಲ್ಲಿಗೆ ಹೋಗುತ್ತಿದ್ದಾರೆ. ಸುಳ್ಳು ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟವರ ಮೇಲೆ ಕಾಂಗ್ರೆಸ್ ನವರಿಗೆ ನಂಬಿಕೆ ಇದೆ. ಅದರಿಂದ ಏನೂ‌ ಆಗಲ್ಲ. ಬಿಹಾರದಲ್ಲಿ ಇದನ್ನೇ ಮುಂದಿಟ್ಟುಕೊಂಡು ಚುನಾವಣೆ ಮಾಡಿದರು. ಅಲ್ಲಿ ಕಾಂಗ್ರೆಸ್ ಅತ್ಯಂತ ಕಡಿಮೆ ಸ್ಥಾನ ಪಡೆಯಿತು. ಅದರಿಂದ ಇನ್ನೂ ಪಾಠ ಕಲಿತಿಲ್ಲ ಅಂದರೆ ಏನು ಮಾಡಲು ಆಗುವುದಿಲ್ಲ ಎಂದು ಹೇಳಿದರು.

ಸತ್ಯ ಹೊರಬರುತ್ತದೆ

ಆಳಂದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತಿದಾರ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಾರ್ಜ್ ಶೀಟ್ ಸಲ್ಲಿಸಿದ ತಕ್ಷಣ ಏನೂ ಆಗಲ್ಲ. ಕೋರ್ಟ್ ನಲ್ಲಿ ಸಾಬೀತಾಗಬೇಕು. ಯಾವ ಸಂದರ್ಭದಲ್ಲಿ ಎಸ್ ಐ ಟಿ ರಚನೆ ಆಗಿದೆ. ಎಸ್ ಐಟಿ ಯಾವ ರೀತಿ ತನಿಖೆ ಮಾಡಿದೆ. ಚುನಾವಣಾ ಆಯೋಗ ಆಗಲೇ ಸ್ಪಷ್ಟನೆ ನೀಡಿದೆ. ಆರು ಸಾವಿರ ಮತ ಕಡಿತ ಮಾಡುವಂತೆ ಅರ್ಜಿ ಬಂದರೂ ಕೇವಲ 18 ಮತ ಕಡಿತ ಮಾಡಿದ್ದಾರೆ. ಹೀಗಾಗಿ ಕೋರ್ಟ್ ನಲ್ಲಿ ಸತ್ಯ ಹೊರಬರುತ್ತದೆ. ಚುನಾವಣಾ ಆಯೋಗದ ಪಾತ್ರ ಏನು, ಸತ್ಯಾಂಶ ಏನು ಎಲ್ಲವೂ ಹೊರ ಬರುತ್ತದೆ ಎಂದು ಹೇಳಿದರು.

ನೈತಿಕ ಪೊಲೀಸ್ ಗಿರಿ ಒಪ್ಪುವುದಿಲ್ಲ

ಸವಣೂರಿನಲ್ಲಿ ಶಿಕ್ಷಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೈತಿಕ ಪೊಲಿಸ್ ಗಿರಿ ಒಪ್ಪುವುದಿಲ್ಲ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅದರ ಬದಲು ರಸ್ತೆಯಲ್ಲಿ ಮೆರವಣಿಗೆ ಮಾಡಿ ಬಟ್ಟೆ ಹರಿಯುವುದು ಸರಿಯಲ್ಲ. ಅಮಾನವೀಯವಾಗಿ ಮಾಡುವ ಕೃತ್ಯಕ್ಕೆ ಅವಕಾಶ ಕೊಡಬಾರದು. ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಕಾನೂನು ಕೈ ತೆಗೆದುಕೊಂಡಿದ್ದಾರೆ. ಆತ ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು. ಅದಕ್ಕಿಂತ ಮುಂಚೆ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿರುವುದು ಅನಾಗರಿಕತೆ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶ ಇಲ್ಲ. ಇಲ್ಲಿ ಪೊಲೀಸರು ನಿಷ್ಕ್ರಿಯ ಆಗಿದ್ದಾರೆ. ಅವರ ನಿರ್ಲಕ್ಷ್ಯದಿಂದ ಇದೆಲ್ಲಾ ಆಗಿದೆ. ಹಲವು ರೇಪ್ ಪ್ರಕರಣಗಳು ನಡೆದರೂ ಪುಂಡ ಪೋಕರಿಗಳನ್ನೇ ಹಿಡಿದಿಲ್ಲ. ಕಾನೂನು ಉಲ್ಲಂಘನೆ ಮಾಡುವವರಿಗೆ ಪ್ರೋತ್ಸಾಹ ಕೊಟ್ಟಿದ್ದಕ್ಕೆ ಇಂತಹ ಪ್ರಕರಣ ನಡೆಯುತ್ತಿವೆ. ಹೀಗಾಗಿ ಇದೆಲ್ಲಾ ಆಗುತ್ತಿದೆ. ಇಲ್ಲದಿದ್ದರೆ ಇದನ್ನು ತಡೆಯಬಹುದಿತ್ತು ಒಂದು ವರ್ಗ ಓಲೈಸುವ ಕೆಲಸದ ಪರಿಣಾಮ ಈ ರೀತಿ ನಡೆದಿದೆ. ಓಲೈಕೆ ರಾಜಕಾರಣದ ಪ್ರತಿಬಿಂಬ ಇದು ಎಂದು ಆರೋಪಿಸಿದರು.

ಸ್ಥಳೀಯ ಶಾಸಕರು ಕೆಲವರು ನೀರು ಹಾಕುತ್ತಾರೆ, ಕೆಲವರು ಪೆಟ್ರೋಲ್ ಹಾಕುತ್ತಾರೆ ಎಂದು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ನೀರು ಹಾಕುತ್ತಾರೆ, ಯಾರು ಪೆಟ್ರೋಲ್ ಹಾಕುತ್ತಾರೆ ಎಂದು ಶಾಸಕರೇ ಹೇಳಬೇಕು. ನಾವು ಆರೋಪಿ ಪರ ಮಾತನಾಡುತ್ತಿಲ್ಲ. ತಪ್ಪು ಮಾಡಿದವರನ್ನೆಲ್ಲ ಚಪ್ಪಲಿಯಲ್ಲಿ ಹೊಡೆಯುತ್ತಾರಾ? ಹಾನಗಲ್ ನಲ್ಲಿ ರೇಪ್ ಮಾಡಿದವರನ್ನು ಚಪ್ಪಲಿಯಲ್ಲಿಯೇ ಹೊಡೆದು ಕರೆದುಕೊಂಡು ಹೋಗಿದ್ದರಾ ಎಂದು ಪ್ರಶ್ನಿಸಿದರು.

Tags:    

Similar News