ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಣೆ: ಸ್ಪಷ್ಟೀಕರಣ ಕೋರಿ ವಿದೇಶಾಂಗ ಸಚಿವಾಲಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಕರ್ನಾಟಕವು ದೇಶದ ಆರ್ಥಿಕ ಎಂಜಿನ್‌ ಆಗಿದ್ದು, ರಾಜ್ಯದ ಯಶಸ್ಸು ರಾಷ್ಟ್ರಕ್ಕೂ ಒಳಿತು. ಆದರೆ, ಕೇಂದ್ರ ಸರ್ಕಾರ ಯಾವುದೇ ಕಾರಣವಿಲ್ಲದೆ ಈ ರೀತಿ ತಿರಸ್ಕರಿಸಿರುವುದು ಸರಿಯಲ್ಲ ಎಂದು ಪ್ರಿಯಾಂಕ್​ ಖರ್ಗೆ ಟೀಕಿಸಿದ್ದಾರೆ.;

Update: 2025-06-20 10:33 GMT

ಕರ್ನಾಟಕದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಮೆರಿಕದ ಬಾಸ್ಟನ್‌ನಲ್ಲಿ ನಡೆಯಲಿರುವ ಬಯೋ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ವಿದೇಶಾಂಗ ಸಚಿವಾಲಯವು ಅನುಮತಿ ನಿರಾಕರಿಸಿದ್ದು ವಿವಾದವಾಗಿತ್ತು. ಇದೀಗ ಈ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡುವಂತೆ ಒತ್ತಾಯಿಸಿರುವ ಸಚಿವ ಖರ್ಗೆ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆದ ವಿವಾ ಟೆಕ್ನಾಲಜಿ, ಪ್ಯಾರಿಸ್ ಏರ್ ಫೋರಂ ಮತ್ತು ಪ್ಯಾರಿಸ್ ಏರ್ ಶೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ವಾಪಸಾಗಿರುವ ಪ್ರಿಯಾಂಕ್ ಖರ್ಗೆ, ಗುರುವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಅಂತೆಯೇ ಶುಕ್ರವಾರ 'ದ ಫೆಡರಲ್​ ಕರ್ನಾಟಕ' ಜತೆ ಮಾತನಾಡುತ್ತಾ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಅಮೆರಿಕದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೇ 15 ರಂದೇ ಕೇಂದ್ರ ವಿದೇಶಾಂಗ ಇಲಾಖೆಗೆ ಸಂಪೂರ್ಣ ವಿವರಗಳನ್ನು ಒದಗಿಸಲಾಗಿತ್ತು. ಆದರೆ, ಜೂನ್ 12ರಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಸೇರಿದಂತೆ ಇತರ ಅಧಿಕಾರಿಗಳಿಗೆ ಅನುಮತಿ ನೀಡಲಾಗಿದ್ದರೂ, ತಮಗೆ ಮಾತ್ರ ಯಾವುದೇ ಕಾರಣವಿಲ್ಲದೆ ಅನುಮತಿ ನಿರಾಕರಿಸಲಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

"ನಾವು ಆಟವಾಡಲು ಅಮೆರಿಕಕ್ಕೆ ಹೋಗಿದ್ದಲ್ಲ. ಕರ್ನಾಟಕದ ಆರ್ಥಿಕ ಪ್ರಗತಿಗಾಗಿ, ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ಆಕರ್ಷಣೆಗಾಗಿ ಈ ಪ್ರವಾಸ ಯೋಜಿಸಲಾಗಿತ್ತು. ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಅಡ್ಡಿಪಡಿಸುವ ಈ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಬೇಕು," ಎಂದು ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದರು.

"ಕರ್ನಾಟಕವು ದೇಶದ ಆರ್ಥಿಕ ಎಂಜಿನ್‌ ಆಗಿದ್ದು, ರಾಜ್ಯದ ಯಶಸ್ಸು ರಾಷ್ಟ್ರಕ್ಕೂ ಒಳಿತು. ಆದರೆ, ಕೇಂದ್ರ ಸರ್ಕಾರ ಯಾವುದೇ ಕಾರಣವಿಲ್ಲದೆ ಈ ರೀತಿ ತಿರಸ್ಕರಿಸಿರುವುದು ಸರಿಯಲ್ಲ," ಎಂದು ಅವರು ಟೀಕಿಸಿದ್ದರು.

ಕಳೆದ ವರ್ಷ ಖರ್ಗೆ ಅವರು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಅಮೆರಿಕಕ್ಕೆ ತೆರಳಿದ್ದಾಗ 10 ದಿನಗಳಲ್ಲಿ 72 ಸಭೆಗಳನ್ನು ನಡೆಸಿದ್ದರು. ಈ ಬಾರಿಯ ಪ್ರವಾಸವೂ ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ತರಲು ಮತ್ತು ರಾಜ್ಯವನ್ನು ನವೋದ್ಯಮದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯಲು ಉದ್ದೇಶಿಸಿತ್ತು ಎಂದು ಅವರು ವಿವರಿಸಿದ್ದಾರೆ. 

Tags:    

Similar News