ಪಾಕಿಸ್ತಾನ ಗಡಿಯಿಂದ ಹಾರಿ ಬರುವ ಗುಂಡಿಗೆ ಫಿರಂಗಿಯಿಂದಲೇ ಉತ್ತರ; ಪ್ರಧಾನಿ ಮೋದಿ ಎಚ್ಚರಿಕೆ
ʼಆಪರೇಷನ್ ಸಿಂದೂರ್' ಶೌರ್ಯದ ಸಂಕೇತ. ಇನ್ನು ಮುಂದೆ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನದಿಂದ ಹಾರುವ ಗುಂಡುಗಳಿಗೆ ಭಾರತದ ಫಿರಂಗಿಗಳು ತಕ್ಕ ಉತ್ತರ ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.;
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಹಾಗೂ ಪಾಕಿಸ್ತಾನದ ನೆಲದ ಮೇಲಿನ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ʼಆಪರೇಷನ್ ಸಿಂದೂರ್' ಕಾರ್ಯಾಚರಣೆ ಶೌರ್ಯದ ಸಂಕೇತ. ಇನ್ನು ಮುಂದೆ ನಿಯಂತ್ರಣ ರೇಖೆಯುದ್ದಕ್ಕೂ ಹಾರುವ ಗುಂಡುಗಳಿಗೆ ಭಾರತದ ಫಿರಂಗಿಗಳು ತಕ್ಕ ಉತ್ತರ ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಶನಿವಾರ ನಡೆದ ಲೋಕಮಾತಾ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತೀಕರಣ ಮಹಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ʼಆಪರೇಷನ್ ಸಿಂದೂರ್ʼ ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಾಗೂ ಅತ್ಯಂತ ಯಶಸ್ವಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಎಂದು ಶ್ಲಾಘಿಸಿದರು.
ಮಹಿಳಾ ಶಕ್ತಿಗೆ ಸವಾಲಾಕಿದ್ದ ಉಗ್ರರ ದಮನ
ʼಆಪರೇಷನ್ ಸಿಂದೂರ್ʼ ಶೌರ್ಯದ ಸಂಕೇತ. ನೀವು ಗಡಿಯ ಮೂಲಕ ಗುಂಡುಗಳನ್ನು ಹಾರಿಸಿದರೆ, ಅವುಗಳಿಗೆ ನಮ್ಮ ಫಿರಂಗಿಯಿಂದ ಹಾರುವ ಗುಂಡುಗಳು ಉತ್ತರ ನೀಡುವುದು ಖಚಿತ. ಪಾಕಿಸ್ತಾನದ ಭಯೋತ್ಪಾದಕರು ಭಾರತೀಯ ಸಂಸ್ಕೃತಿ ಮೇಲೆ ದಾಳಿ ಮಾಡಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸಿದರು. ಭಾರತ ಮಹಿಳಾ ಶಕ್ತಿಗೆ ಸವಾಲು ಹಾಕಿದ್ದರು. ಆದರೆ, ಅದೇ ಸವಾಲು ಉಗ್ರರಿಗೆ ಮಾರಕವಾಯಿತು ಎಂದು ಪ್ರಧಾನಿ ಮೋದಿ ಹೇಳಿದರು.
ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಭಾರತೀಯರ ರಕ್ತ ಹರಿಸಿದ್ದಲ್ಲದೆ ನಮ್ಮ ಸಂಸ್ಕೃತಿಯ ಮೇಲೂ ದಾಳಿ ಮಾಡಿದ್ದರು. ಈಗ ಸವಾಲು ಹಾಕಿದ್ದ ಭಯೋತ್ಪಾದಕರು ಹಾಗೂ ಅವರ ಪ್ರೇರಕರಿಗೆ ಕಠಿಣ ಶಿಕ್ಷೆ ನೀಡಿದ್ದೇವೆ. ಪಾಕಿಸ್ತಾನ ಸೇನೆಯ ಊಹೆಗೂ ನಿಲುಕದಂತೆ ನಮ್ಮ ಸೇನೆ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿತು ಎಂದು ಹೇಳಿದರು.
ಮಹಿಳಾ ಸಂಸದರ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನ
ಮಹಿಳಾ ಸಬಲೀಕರಣದ ಸಲುವಾಗಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನು ಒದಗಿಸುವ ಪ್ರಯತ್ನ ನಡೆಯುತ್ತಿದೆ. ಸಂಸತ್ತಿನಲ್ಲಿ ಒಟ್ಟು 75 ಮಹಿಳಾ ಸಂಸದರಿದ್ದಾರೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಘೋಷಿಸಿದರು.
ಮಹಿಳಾ ಮೀಸಲಾತಿ ಮಸೂದೆ ಎಂದು ಕರೆಯುವ ನಾರಿ ಶಕ್ತಿ ವಂದನ ಅಧಿನಿಯಮ್ ಅಡಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡುವ ಗುರಿ ಹೊಂದಲಾಗಿದೆ ಎಂದರು.
ರಾಷ್ಟ್ರ ರಕ್ಷಣೆಯಲ್ಲಿ ಹೆಣ್ಣುಮಕ್ಕಳು
ದೇಶದ ರಕ್ಷಣೆಯಲ್ಲಿ ನಮ್ಮ ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಇಡೀ ಜಗತ್ತು ನೋಡುತ್ತಿದೆ. ಶಾಲೆಯಿಂದ ಯುದ್ಧಭೂಮಿಯವರೆಗೆ ದೇಶವು ಇಂದು ಹೆಣ್ಣುಮಕ್ಕಳ ಧೈರ್ಯದಲ್ಲಿ ನಂಬಿಕೆ ಇಟ್ಟಿದೆ. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಸಿಡಿಆರ್ ರೂಪಾ ಎ, ಲೆಫ್ಟಿನೆಂಟ್ ಸಿಡಿಆರ್ ದಿಲ್ನಾ ಕೆ ಅವರ ಸಾಧನೆಯನ್ನು ಪ್ರಧಾನಿ ಇದೇ ವೇಳೆ ಉಲ್ಲೇಖಿಸಿದರು.