ಹುದ್ದೆ ಖಾಲಿ ಇಲ್ಲವೆಂದು ಅನುಕಂಪದ ನೌಕರಿ ನಿರಾಕರಿಸುವಂತಿಲ್ಲ: ಹೈಕೋರ್ಟ್ ಆದೇಶ
ಬೇವೂರಿನ ಆದರ್ಶ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ನೌಕರರೊಬ್ಬರು ನಿಧನರಾದ ನಂತರ, ಅವರ ಮಗ ಸಂತೋಷ್ ಯಮನಪ್ಪ ವಡಕರ್ ಅವರು ಅನುಕಂಪದ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು.;
ಕರ್ನಾಟಕ ಹೈಕೋರ್ಟ್
ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಹುದ್ದೆ ಖಾಲಿ ಇಲ್ಲ ಎಂಬ ಕಾರಣ ನೀಡಿ ಮೃತ ನೌಕರನ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನಿರಾಕರಿಸುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಆದೇಶದ ಮೂಲಕ, ಪದವಿ ಪೂರ್ವ ಶಿಕ್ಷಣ ಇಲಾಖೆಯು ಈ ಹಿಂದಿನ ಆದೇಶವನ್ನು ರದ್ದುಗೊಳಿಸಿದ್ದು, ಅರ್ಜಿಯನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಬಾಗಲಕೋಟೆ ಜಿಲ್ಲೆಯ ಬೇವೂರಿನ ಆದರ್ಶ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ನೌಕರರೊಬ್ಬರು ನಿಧನರಾದ ನಂತರ, ಅವರ ಮಗ ಸಂತೋಷ್ ಯಮನಪ್ಪ ವಡಕರ್ ಅವರು ಅನುಕಂಪದ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಮೃತರು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಹುದ್ದೆ ಖಾಲಿ ಇಲ್ಲ ಎಂದು ಕಾರಣ ನೀಡಿ ಇಲಾಖೆಯ ಉಪನಿರ್ದೇಶಕರು ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಸಂತೋಷ್ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಇಲಾಖೆಯ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿತು. 'ಕರ್ನಾಟಕ ಪದವಿ ಪೂರ್ವ ಶಿಕ್ಷಣ (ತಿದ್ದುಪಡಿ) ನಿಯಮಗಳು-2010'ರ ಪ್ರಕಾರ, ಅನುಕಂಪದ ನೇಮಕಾತಿಯನ್ನು ಕೇವಲ ಮೃತ ನೌಕರರು ಸೇವೆ ಸಲ್ಲಿಸಿದ ಸಂಸ್ಥೆಗೆ ಸೀಮಿತಗೊಳಿಸುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ನ್ಯಾಯಾಲಯವು ಅನುಕಂಪದ ಹುದ್ದೆ ನೀಡಲು ಒಂದು ಶ್ರೇಣೀಕೃತ ಪ್ರಕ್ರಿಯೆಯನ್ನು ವಿವರಿಸಿದೆ. ಮೊದಲಿಗೆ, ಮೃತ ನೌಕರರು ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯಲ್ಲಿಯೇ ಖಾಲಿ ಹುದ್ದೆಯನ್ನು ಪರಿಗಣಿಸಬೇಕು. ಅಲ್ಲಿ ಹುದ್ದೆ ಲಭ್ಯವಿಲ್ಲದಿದ್ದರೆ, ಅದೇ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಯಾವುದೇ ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಬೇಕು. ಒಂದು ವೇಳೆ, ಜಿಲ್ಲೆಯಲ್ಲೂ ಹುದ್ದೆ ಲಭ್ಯವಿಲ್ಲದಿದ್ದರೆ, ರಾಜ್ಯದ ಯಾವುದೇ ಭಾಗದಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿನ ಖಾಲಿ ಹುದ್ದೆಯನ್ನು ಗುರುತಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಕೇವಲ ಒಂದೇ ಸಂಸ್ಥೆಯಲ್ಲಿ ಹುದ್ದೆ ಇಲ್ಲವೆಂದು ಅರ್ಜಿ ತಿರಸ್ಕರಿಸಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಇಲಾಖೆಯ ಆದೇಶವನ್ನು ರದ್ದುಪಡಿಸಿ, ಸಂತೋಷ್ ವಡಕರ್ ಅವರ ಅರ್ಜಿಯನ್ನು ನಿಯಮಾನುಸಾರ ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.