ಆರು ವರ್ಷದ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ: ತಂದೆಯಿಂದ ದೂರು
ಮಗುವಿನ ಅಂತಿಮ ದರ್ಶನದ ವಿಚಾರವಾಗಿ ಶವಾಗಾರದ ಬಳಿ ಶ್ವೇತಾ ಸಂಬಂಧಿಕರು ಮತ್ತು ರಘು ಕುಟುಂಬಸ್ಥರ ನಡುವೆ ಜಗಳ ನಡೆದು ಪರಸ್ಪರ ಬಡಿದಾಡಿಕೊಂಡಿದ್ದಾರೆ.;
ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ. ಜಿನ್ನೇನಹಳ್ಳಿಕೊಪ್ಪಲು ಗ್ರಾಮದಲ್ಲಿ ಸಾನ್ವಿ ಕೊಲೆಯಾದ ಬಾಲಕಿ. ಆಕೆಯ ತಾಯಿ ಶ್ವೇತಾ ವಿರುದ್ಧ ದೂರು ದಾಖಲಾಗಿದೆ.
ಶ್ವೇತಾ ಮತ್ತು ಶಿವಮೊಗ್ಗ ಮೂಲದ ರಘು ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮದುವೆಯಾಗಿ ಎರಡೇ ವರ್ಷಕ್ಕೆ ದಂಪತಿ ನಡುವೆ ಜಗಳ ಶುರುವಾಗಿ, ಕಳೆದ ನಾಲ್ಕು ವರ್ಷಗಳಿಂದ ಶ್ವೇತಾ ಪತಿಯಿಂದ ದೂರವಾಗಿದ್ದಳು. ಹಲವು ಬಾರಿ ರಾಜಿ ಸಂಧಾನಕ್ಕೆ ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಈ ನಡುವೆ, ಶ್ವೇತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಬಾಲಕಿ ಸಾನ್ವಿಯ ಆರೈಕೆಯ ಜವಾಬ್ದಾರಿಯನ್ನು ರಘು ಪೋಷಕರು ವಹಿಸಿಕೊಂಡಿದ್ದರು.
ಶನಿವಾರ ಬೆಂಗಳೂರಿನಿಂದ ಮಗಳು ಸಾನ್ವಿಯನ್ನು ಕರೆದುಕೊಂಡು ತವರು ಮನೆಗೆ ಬಂದಿದ್ದ ಶ್ವೇತಾ, ನಿನ್ನೆ (ಭಾನುವಾರ, ಜೂನ್ 8, 2025) ಬೆಳಿಗ್ಗೆ ಗ್ರಾಮದ ಕಟ್ಟೆಯ ಕಡೆಗೆ ಹೋಗುವುದಾಗಿ ಹೇಳಿ ಹೋಗಿದ್ದಾಳೆ. ಬಳಿಕ ಜಮೀನಿನ ಬಳಿ ನೀರಿನಲ್ಲಿ ಮಗಳನ್ನು ಮುಳುಗಿಸಿ ಕೊಲೆಗೆ ಯತ್ನಿಸಿದ್ದಾಳೆ. ಮಗು ಕಿರುಚಾಡುತ್ತಿದ್ದ ಶಬ್ದ ಕೇಳಿ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಓಡಿ ಬಂದು ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಮಗು ತೀವ್ರ ಅಸ್ವಸ್ಥಗೊಂಡಿತ್ತು. ತಕ್ಷಣವೇ ಗ್ರಾಮಸ್ಥರು ಬಾಲಕಿಯನ್ನು ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಘಟನೆ ನಡೆದಾಗ, ನಾನು ಹಾಗೂ ಮಗು ಇಬ್ಬರೂ ಸಾಯಲು ಪ್ರಯತ್ನಿಸಿದ್ದೆವು ಎಂದು ಶ್ವೇತಾ ಹೇಳಿಕೊಂಡಿದ್ದಾಳೆ.
ಮಗಳ ಸಾವಿನ ಸುದ್ದಿ ಕೇಳಿ ತಂದೆ ರಘು ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿ ಕಣ್ಣೀರಿಟ್ಟಿದ್ದಾರೆ. ಹಿರಿಸಾವೆ ಠಾಣೆಯಲ್ಲಿ ದೂರು ದಾಖಲಾಗಿದೆ. ಮಗುವಿನ ಅಂತಿಮ ದರ್ಶನದ ವಿಚಾರವಾಗಿ ಶವಾಗಾರದ ಬಳಿ ಶ್ವೇತಾ ಸಂಬಂಧಿಕರು ಮತ್ತು ರಘು ಕುಟುಂಬಸ್ಥರ ನಡುವೆ ಜಗಳ ನಡೆದು ಪರಸ್ಪರ ಬಡಿದಾಡಿಕೊಂಡಿದ್ದಾರೆ.