Lok Sabha Election: ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಕ್ತಾಯ

Update: 2024-05-07 01:28 GMT
Live Updates - Page 2
2024-05-07 04:31 GMT

ಶಿಗ್ಗಾವಿಯಲ್ಲಿ ಹಕ್ಕು ಚಲಾಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಶಿಗ್ಗಾವಿಯಲ್ಲಿ ಮತ ಚಲಾಯಿಸಿದರು.

2024-05-07 04:23 GMT

14 ಲೋಕಸಭಾ ಕ್ಷೇತ್ರ: 2 ಗಂಟೆಯಲ್ಲಿ 9.45 ಪ್ರತಿಶತ ಮತದಾನ

ಕರ್ನಾಟಕದ 14 ಲೋಕಸಭಾ ಕ್ಷೇತ್ರದಲ್ಲಿ ಎರಡು ಗಂಟೆಯ ಅವಧಿಯಲ್ಲಿ (ಬೆಳಿಗ್ಗೆ 7ರಿಂದ 9ರ ವರೆಗೆ) ಒಟ್ಟು 9.45 ಪ್ರತಿಶತ ಮತದಾನ ಆಗಿದೆ. ಶಿವಮೊಗ್ಗದಲ್ಲಿ 11.39, ಉತ್ತರ ಕನ್ನಡದಲ್ಲಿ 11.07 ಹಾಗೂ ಚಿಕ್ಕೋಡಿಯಲ್ಲಿ 10.81 ಪ್ರತಿಶತ ಮತದಾನ ಆಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ತಿಳಿಸಿದೆ.

ಕ್ಷೇತ್ರವಾರು ಮತದಾನ ಪ್ರಮಾಣದ ವಿವರ ಈ ರೀತಿ ಇದೆ

ಲೋಕಸಭಾ ಕ್ಷೇತ್ರ  ಮತದಾನ ಪ್ರಮಾಣ

ಚಿಕ್ಕೋಡಿ                    10.81%

ಬೆಳಗಾವಿ                     9.48%

ಬಾಗಲಕೋಟೆ              8.59%

ವಿಜಯಪುರ                 9.26%

ಕಲಬುರಗಿ                    8.71%

ರಾಯಚೂರು               8.27%

ಬೀದರ್                        8.90%

ಕೊಪ್ಪಳ                       8.79%

ಬಳ್ಳಾರಿ                        10.37%

ಹಾವೇರಿ                       8.62%

ಧಾರವಾಡ                   9.38%

ಉತ್ತರ ಕನ್ನಡ              11.07%

ದಾವಣಗೆರೆ                   9.11%

ಶಿವಮೊಗ್ಗ                    11.39%


  

2024-05-07 04:17 GMT

ಬೆಳಗಾವಿ: ಹೆಬ್ಬಾಳಕರ ಕುಟುಂಬದಿಂದ ಮತದಾನ

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದ ವಿಜಯನಗರದ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮತ ಚಲಾಯಿಸಿದರು. ಮತ ಚಲಾಯಿಸಿ ಹೊರಬಂದು ವಿಜಯದ ಸಂಕೇತ ತೋರಿದರು.

2024-05-07 03:53 GMT

ಹಲವು ಲೋಕಸಭಾ ಕ್ಷೇತ್ರದಲ್ಲಿ ಕೈಕೊಟ್ಟ ಇವಿಎಂ

ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಮಂಗಳವಾರ (ಮೇ 7) ಮತದಾನ ನಡೆದಿದೆ. ಮಂಗಳವಾರ ಬೆಳಿಗ್ಗೆ 7ರಿಂದ ಮತದಾನ ಪ್ರಾರಂಭವಾಗಿದೆ. ಆದರೆ, ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಮತಯಂತ್ರದಲ್ಲಿ ದೋಷ ಉಂಟಾಗಿದ್ದು, ಸಮಸ್ಯೆ ಎದುರಾಗಿದೆ. ಬೆಳಗಾವಿ, ಕಾರವಾರ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತಲಾ ಒಂದು ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟ ಪರಿಣಾಮ ಮತದಾರರು ನಿರಾಸೆ ಎದುರಿಸಿದ್ದಾರೆ.


 

2024-05-07 03:51 GMT

ಸಂವಿಧಾನ ಉಳಿಸಲು, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ ನೀಡಿ: ಮಲ್ಲಿಕಾರ್ಜುನ ಖರ್ಗೆ ಮನವಿ

ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜನತೆ ಕೇವಲ ತಮ್ಮ ಹಕ್ಕು ಚಲಾಯಿಸುವುದು ಮಾತ್ರವಲ್ಲದೆ ಸೂಕ್ತ ಅಭ್ಯರ್ಥಿಯನ್ನು ದೇಶದ ಭವಿಷ್ಯದ ದೃಷ್ಟಿಯಿಂದ ಆರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲು ನಾನು ನಿಮ್ಮನ್ನು ಪ್ರಾಮಾಣಿಕವಾಗಿ ಒತ್ತಾಯಿಸುತ್ತೇನೆ, ಇದರಿಂದ ನಮ್ಮ ಸಂಸ್ಥೆಗಳು ತಮ್ಮ ಸ್ವತಂತ್ರ ಸ್ವರೂಪಕ್ಕೆ ಮರಳಬಹುದು ಮತ್ತು ವಿವೇಚನಾರಹಿತ ವ್ಯಕ್ತಿಗಳ ಕೈಕೆಳಗೆ ಅಧಿಕಾರ ಇರುವುದಿಲ್ಲ ಎಂದು ಹೇಳಿದ್ದಾರೆ.

2024-05-07 03:47 GMT

ಮತಯಂತ್ರದಲ್ಲಿ ದೋಷ: 1 ಗಂಟೆ ತಡವಾಗಿ ಮತದಾನ ಆರಂಭ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳುಗೋಡು ಗ್ರಾಮ ಮತಗಟ್ಟೆ ಸಂಖ್ಯೆ 171 ರಲ್ಲಿ ತಾಂತ್ರಿಕ ಕಾರಣದಿಂದ ಮತಯಂತ್ರದಲ್ಲಿ ಸಮಸ್ಯೆ ಕಂಡು ಬಂದಿತ್ತು. ಇದರಿಂದ ಒಂದು ಗಂಟೆ ತಡವಾಗಿ ಮತದಾನ ಆಂಭವಾಗಿದೆ.

2024-05-07 03:20 GMT

ಯಡಿಯೂರಪ್ಪ, ಬಿ.ವೈ.ರಾಘವೇಂದ್ರರಿಂದ ಮತ ಚಲಾವಣೆ

ಶಿಕಾರಿಪುರ ತಾಲ್ಲೂಕು ಕಚೇರಿ ಮತಗಟ್ಟೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಮತ ಚಲಾಯಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ 24ರಿಂದ 25 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪುತ್ರ ಬಿ.ವೈ.ರಾಘವೇಂದ್ರ 2.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು. ಮತದಾನಕ್ಕೂ ಮುನ್ನ ಪುತ್ರ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಯಡಿಯೂರಪ್ಪ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

2024-05-07 03:13 GMT

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮತದಾನ

ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ತೀರ್ಥಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊಪ್ಪುಗುಡ್ಡೆ ಬೂತ್ ನಂಬರ್ 180ರಲ್ಲಿ ಪತ್ನಿಯೊಂದಿಗೆ. ಬೂತ್ ನಲ್ಲಿ ಮೊದಲಿಗರಾಗಿ ಮತದಾನ ಮಾಡಿದರು. ಜೊತೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಶಬನಮ್ ಸಹ ಜೊತೆ ಇದ್ದರು.

2024-05-07 01:33 GMT

14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದು, ಇಂದು ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೆ ಮತಗಟ್ಟೆಗಳ ಬಳಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ.

Tags:    

Similar News