ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ; ಬೈಕ್ ಸವಾರ ದುರ್ಮರಣ
ರಾಜೇಂದ್ರ ಪ್ರಸಾದ್ ಅವರು ಸವದತ್ತಿ ಯಲ್ಲಮ್ಮ ದೇವಿಯ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬರುವ ವೇಳೆ ಈ ದುರಂತ ಸಂಭವಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರ ಕಾರು ಗುರುವಾರ ರಾತ್ರಿ ಬೆಳಗಾವಿ ಸವದತ್ತಿ ಯಲ್ಲಮ್ಮ ಬಳಿಕ ಭೀಕರ ಅಪಘಾತಕ್ಕೀಡಾಗಿದೆ. ಕಾರು ಬೈಕ್ಗೆ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ. ಇನ್ನು ಮೃತ ಬೈಕ್ ಸವಾರನನ್ನು ಮಂಜುನಾಥ್ ಬೈರ್ನಟ್ಟಿ(30) ಎಂದು ಗುರುತಿಸಲಾಗಿದೆ. ಈತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆಯ ನೌಕರರಾಗಿದ್ದ ಎನ್ನಲಾಗಿದೆ.
ರಾಜೇಂದ್ರ ಪ್ರಸಾದ್ಗೂ ಗಂಭೀರ ಗಾಯ
ಇನ್ನು ಈ ಭೀಕರ ಅಪಘಾತದಲ್ಲಿ ಕಾರು ಪಲ್ಟಿಯಾಗಿದ್ದು, ಕಾರಿನ ಚಾಲಕ ಹಾಗೂ ಪಿಎಸ್ ರಾಜೇಂದ್ರ ಪ್ರಸಾದ್ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜೇಂದ್ರ ಪ್ರಸಾದ್ ಅವರು ಸವದತ್ತಿ ಯಲ್ಲಮ್ಮ ದೇವಿಯ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬರುವ ವೇಳೆ ಈ ದುರಂತ ಸಂಭವಿಸಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ದೌಡಾಯಿಸಿದ ಡಿಕೆಶಿ
ಇನ್ನು ಗಾಯಾಳು ರಾಜೇಂದ್ರ ಪ್ರಸಾದ್ ಮತ್ತು ಚಾಲಕ ಹೇಮಂತ್ನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಡಿಕೆ ಶಿವಕುಮಾರ್, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗಷ್ಟೇ ಡಾ. ರಾಜೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಅವರಿಗೆ ಎಲ್ಲಾ ಸ್ಕ್ಯಾನಿಂಗ್ ಮತ್ತು ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯಕ್ಕೆ ಆತಂಕ ಪಡುವಂತಹದ್ದೇನೂ ಇಲ್ಲ. ಯಾವುದೇ ದೊಡ್ಡ ಮಟ್ಟದ ಫ್ರ್ಯಾಕ್ಚರ್ಗಳು ಸಂಭವಿಸಿಲ್ಲ. ಆದರೆ ಕತ್ತಿನ ಭಾಗದಲ್ಲಿ ತೀವ್ರವಾದ ನೋವಿದೆ ಎಂದು ಅವರು ಹೇಳುತ್ತಿದ್ದಾರೆ. ವೈದ್ಯರು ಒಂದು ಅಥವಾ ಎರಡು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಇನ್ನು ಕಾರು ಚಾಲಕ ಹೇಮಂತ್ ಅವರಿಗೂ ಎದೆಯ ಭಾಗದಲ್ಲಿ ನೋವಿದ್ದು, ಅವರಿಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ" ಎಂದರು.
ಯಲ್ಲಮ್ಮ ದೇವಿಯ ದರ್ಶನ ಮುಗಿಸಿ ವಾಪಸಾಗುವಾಗ ಈ ಘಟನೆ ನಡೆದಿದೆ. ಚಾಲಕ ಹೇಮಂತ್ ಹೇಳುವ ಪ್ರಕಾರ, ಏಕಾಏಕಿ ಬೈಕ್ ಅಡ್ಡ ಬಂದ ಕಾರಣ ಈ ದುರ್ಘಟನೆ ಸಂಭವಿಸಿದೆ. ಕಾರಿನ ಸ್ಥಿತಿಯನ್ನು ನೋಡಿದರೆ ಆ ದೇವಿಯೇ ಇವರನ್ನು ಕಾಪಾಡಿದ್ದಾಳೆ ಎಂದು ಅನ್ನಿಸುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.
ಮೃತ ಯುವಕನಿಗೆ ಸಂತಾಪ
“ಈ ಭೀಕರ ದುರ್ಘಟನೆಯಲ್ಲಿ ಮಂಜುನಾಥ್ ಎಂಬ ಯುವಕ ಸಾವನ್ನಪ್ಪಿರುವ ವಿಚಾರ ಕೇಳಿ ಬಹಳ ದುಃಖವಾಗಿದೆ. ಆ ಯುವಕನಿಗೆ ಇನ್ನೂ ಚಿಕ್ಕ ವಯಸ್ಸು. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಆ ದೇವರು ಕೊಡಲಿ. ಈಗಾಗಲೇ ನಮ್ಮ ಸಚಿವರನ್ನು ಅವರ ಕುಟುಂಬದವರನ್ನು ಭೇಟಿ ಮಾಡಲು ಕಳುಹಿಸಿಕೊಡುತ್ತೇನೆ. ನಾನೂ ಕೂಡ ಬಿಡುವು ಮಾಡಿಕೊಂಡು ಅವರ ಮನೆಗೆ ಭೇಟಿ ನೀಡುತ್ತೇನೆ” ಎಂದು ಅವರು ತಿಳಿಸಿದ್ದಾರೆ.