ಇಂದಿನಿಂದ ವಿಧಾನಮಂಡಲ ಅಧಿವೇಶನ ; ಸರ್ಕಾರ - ವಿಪಕ್ಷಗಳ ಜಂಗೀಕುಸ್ತಿಗೆ ಅಖಾಡ ಸಜ್ಜು
ಶಾಸಕರಿಗೆ ಅನುದಾನ ಕೊರತೆ ವಿಚಾರವಾಗಿ ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ. ಇದಲ್ಲದೇ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಿವೆ.;
ವಿಧಾನ ಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ, ಶಾಸಕರ ಅನುದಾನ ಕೊರತೆ, ರಸಗೊಬ್ಬರ ಸಮಸ್ಯೆ ಸೇರಿದಂತೆ ಹಲವು ವಿಷಯಗಳು ಸರ್ಕಾರ ಹಾಗೂ ವಿಪಕ್ಷಗಳ ಮಧ್ಯೆಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ವಿಧಾನಸಭಾ ಕಲಾಪದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯವನ್ನು ಸ್ಪೀಕರ್ ಯು.ಟಿ.ಖಾದರ್ ಅವರು ಕೈಗೆತ್ತಿಕೊಳ್ಳಲಿದ್ದಾರೆ.
ಸಾಹಿತಿಗಳಾದ ಎಚ್. ಎಸ್.ವೆಂಕಟೇಶಮೂರ್ತಿ, ಜಿ.ಎಸ್.ಸಿದ್ದಲಿಂಗಯ್ಯ, ಪೋಪ್ ಫ್ರಾನ್ಸಿಸ್, ಹಿರಿಯ ರಾಜಕಾರಣಿ ಡಾ.ಎನ್.ತಿಪ್ಪಣ್ಣ ಸೇರಿ ಹಲವು ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಬಳಿಕ ಪ್ರತಿಪಕ್ಷಗಳ ಶಾಸಕರ ಅಮಾನತು ಸ್ಥಿರೀಕರಣ ಪ್ರಸ್ತಾಪ ಕುರಿತು ಚರ್ಚಿಸಲಾಗುವುದು. ಕಳೆದ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಸದನಕ್ಕೆ ಬಾರದಂತೆ ಅಮಾನತು ಮಾಡಲಾಗಿತ್ತು. ನಂತರ ಸಂಧಾನ ಸಭೆ ನಡೆಸಿ, ಅಮಾನತು ನಿರ್ಣಯವನ್ನು ಮೇ 25 ರಿಂದ ಜಾರಿಗೆ ಬರುವಂತೆ ಸ್ಪೀಕರ್ ಹಿಂಪಡೆದಿದ್ದರು.ಹಾಗಾಗಿ ಮೊದಲ ದಿನವೇ ಈ ಕುರಿತ ಸ್ಥಿರೀಕರಣ ಪ್ರಸ್ತಾವ ಮಂಡನೆ ಬಳಿಕ ಅನುಮೋದನೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ನಂತರ ಆರಂಭವಾಗಲಿರುವ ಪ್ರಶೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಕಲಾಪದಲ್ಲಿ ಎತ್ತಿನ ಹೊಳೆಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ಯೋಜನೆ ವಿಳಂಬದ ಬಗ್ಗೆ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸರ್ಕಾರದ ವೈಫಲ್ಯದ ವಿರುದ್ದ ಮೈತ್ರಿ ಹೋರಾಟ
ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಜೆಡಿಎಸ್ ಮತ್ತು ಬಿಜೆಪಿ (NDA) ಮೈತ್ರಿಕೂಟ ಜಂಟಿಯಾಗಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಭಾನುವಾರ ಈ ಸಂಬಂಧ ನಡೆದ ಸಮನ್ವಯ ಸಭೆಯಲ್ಲಿ ಸುಮಾರು ಒಂದು ಗಂಟೆಗಳ ಸಮಾಲೋಚನೆ ನಡೆಸಲಾಯಿತು.
ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಸರ್ಕಾರ ಎರಡು ವರ್ಷಗಳಲ್ಲಿ ಭ್ರಷ್ಟಾಚಾರ, ದುರಾಡಳಿತದಲ್ಲಿ ತೊಡಗಿಸಿಕೊಂಡಿದೆ. ಯಾವ ವಿಚಾರಗಳನ್ನು ಚರ್ಚಿಸಬೇಕು ಎಂದು ಆಂತರಿಕ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಸಂಸತ್ ಕಲಾಪ ನಡೆಯುತ್ತಿರುವ ಕಾರಣ ಕುಮಾರಸ್ವಾಮಿ ಅವರು ಈ ಸಭೆಗೆ ಬಂದಿರಲಿಲ್ಲ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ; ರೈತರಿಗೆ ರಸಗೊಬ್ಬರ ವಿತರಣೆ ಮಾಡಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡ್ತಾರೆ. ಅಧಿವೇಶನದಲ್ಲಿ ಬೆಲೆ ಏರಿಕೆ, ಕಾಲ್ತುಳಿತ ಎಲ್ಲವನ್ನ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಶಾಸಕರ ಅನುದಾನದಲ್ಲೂ ತಾರತಮ್ಯ ಆಗಿದೆ. ಎಲ್ಲ ಇಲಾಖೆಗೂ ಅನುದಾನ ಕೊಟ್ಟಿಲ್ಲ. ಎಲ್ಲ ವಿಚಾರಗಳ ಬಗ್ಗೆ, ಸರ್ಕಾರದ ಲೋಪದೋಷದ ಬಗ್ಗೆ ಚರ್ಚೆ ಮಾಡ್ತೇವೆ. ಯುವನಿಧಿಗೆ 2.80 ಲಕ್ಷ ಜನ ಮಾತ್ರ ಅರ್ಜಿ ಹಾಕಿದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿತಂತ್ರ ಹೆಣೆದ ಸರ್ಕಾರ
ಹತ್ತು ಹಲವು ಅಸ್ತ್ರಗಳೊಂದಿಗೆ ಸರ್ಕಾರವನ್ನು ಕಟ್ಟಿ ಹಾಕಲು ಪ್ರತಿ ಪಕ್ಷಗಳು ರೂಪಿಸಿರುವ ತಂತ್ರಕ್ಕೆ ಸರ್ಕಾರ ಪ್ರತಿತಂತ್ರ ರೂಪಿಸಿದೆ.
ಸದನದಲ್ಲಿ ಪ್ರತಿ ಹಂತದಲ್ಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ, ಜೆಡಿಎಸ್ ಯೋಜನೆ ರೂಪಿಸಿವೆ. ಪ್ರಮುಖವಾಗಿ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಮುಜುಗರವನ್ನುಂಟು ಮಾಡಲು ತಯಾರಿ ನಡೆಸಿವೆ.
ಆದರೆ, ಪ್ರತಿಪಕ್ಷಗಳ ವಿರುದ್ದ ಒಟ್ಟಾಗಿ ಹೋರಾಟ ನಡೆಸಲು ತಯಾರಾಗಿರುವ ಸರ್ಕಾರ ಅಂಕಿ, ಅಂಶಗಳ ಸಮೇತ ದಾಖಲೆ ಒದಗಿಸಿ ಬಿಜೆಪಿ, ಜೆಡಿಎಸ್ ಆರೋಪಗಳಿಗೆ ಠಕ್ಕರ್ ನೀಡಲು ಮುಂದಾಗಲಿದೆ.
ವಿಪಕ್ಷಗಳ ಬಳಿ ಇರುವ ಅಸ್ತ್ರಗಳೇನು?
* ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ, ಪೋಲಿಸ್ ಅಧಿಕಾರಿಗಳ ಅಮಾನತು ಹಾಗೂ ಮರು ನೇಮಕ ದಂದ್ವ.
*ರಾಜ್ಯದಲ್ಲಿ ರಸಗೊಬ್ಬರ ಅಭಾವದಿಂದ ರೈತರ ಆಕ್ರೋಶ ವಿಚಾರ.
*ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಪ್ರಸ್ತಾಪ.
* ಪ್ರತಿಪಕ್ಷಗಳ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಅಗಿರುವ ತಾರತಮ್ಯ.
* ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿಗಣತಿ ವರದಿಯನ್ನು ಕೈಬಿಟ್ಟಿರುವುದು.
*ಎಸ್ಸಿಎಸ್ಪಿ, ಟಿಎಸ್ಪಿ ಹಣ ದುರ್ಬಳಕೆ ವಿಚಾರ.
* ಒಳಮೀಸಲಾತಿ ವಿಳಂಬ ಆಗಿರುವುದು.
*ಧರ್ಮಸ್ಥಳ ನಡೆಯುತ್ತಿರುವ ತನಿಖೆ ವಿಚಾರ, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ನಡೆಸಿದ ಸಭೆಗಳು.
*ಚುನಾವಣಾ ಅಕ್ರಮವೆಂದು ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡುವ ವಿಚಾರಗಳು ಪ್ರಮುಖವಾಗಿ ಚರ್ಚೆಗೆ ಬರಲಿವೆ.
ಸರ್ಕಾರದ ಬಳಿ ಇರುವ ಅಸ್ತ್ರಗಳೇನು?
* ಕೇಂದ್ರದ ಅನುದಾನ ತಾರತಮ್ಯ, ಮತಗಳ್ಳತನ ಹಾಗೂ ಮತಪಟ್ಟಿ ಹಗರಣ.
* ರೈತರ ಮೇಲೆ ಬಿಜೆಪಿ ಸರ್ಕಾರದ ಮೇಲೆ ನಡೆದಿರುವ ಗೋಲಿಬಾರ್ ವಿಚಾರ ಪ್ರಸ್ತಾಪ.
* ತಲಾದಾಯದಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಆಗಿದೆ ಎಂಬುದನ್ನು ಗಟ್ಟಿಯಾಗಿ ಹೇಳುವುದು.
* ಚಿಕ್ಕಬಳ್ಳಾಪುರದಲ್ಲಿ ಸಂಸದರ ಹೆಸರು ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಪ್ರಸ್ತಾಪಿಸುವುದು.
* ಗ್ಯಾರಂಟಿ ಸಾಧನೆಯನ್ನು ಪ್ರಸ್ತಾಪಿಸುವುದು. ಬಿಜೆಪಿ ಅವಧಿಯಲ್ಲಿ ಮಾಡಿದ್ದ ಯಡವಟ್ಟುಗಳನ್ನು ಪ್ರಸ್ತಾಪಿಸುವುದು.
ಬೆಂಗಳೂರು ನಗರದ ಮಲ್ಲೇಶ್ವರಂನ 11ನೇ ಮುಖ್ಯ ರಸ್ತೆಗೆ ಚಿತ್ರನಟಿ ದಿವಂಗತ ಬಿ.ಸರೋಜಾದೇವಿ ಹೆಸರಿಡಬೇಕು ಹಾಗೂ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಂದಿನಿಂದ ಆರಂಭವಾಗಿರುವ ವಿಧಾನಸಭಾ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಕೆಯಾಗಲಿದೆ. ಗುಜರಾತ್ನಲ್ಲಿ ಸಂಭವಿಸಿದ ವಿಮಾನ ದುರಂತ ಮತ್ತು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುವುದು.
ಮಾಜಿ ಸಚಿವ ಬೇಗಾನೆ ರಾಮಯ್ಯ, ಮಾಜಿ ಶಾಸಕ ಕಾಕಸೋ ಪಾಂಡುರಂಗ ಪಾಟೀಲ್, ಎನ್ ರಾಜಣ್ಣ, ಡೆರ್ರಿಕ್ ಎಂ. ಬಿ, ಹಂಗಾಮಿ ಸಭಾಪತಿ ಎನ್ ತಿಪ್ಪಣ್ಣ, ಮಾಜಿ ಉಪಸಭಾಪತಿ ಡೇವಿಡ್ ಸಿಮೆಯೋನ್, ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್, ಕೃಷಿ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್, ಅಣು ವಿಜ್ಞಾನಿ ಎಂ. ಆರ್. ಶ್ರೀನಿವಾಸನ್, ಸಾಹಿತಿ ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ, ಹಿರಿಯ ಕವಿ ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ, ಚಿತ್ರನಟಿ ಬಿ. ಸರೋಜಾದೇವಿ, ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರಿಗೆ ಸಂತಾಪ ಸಲ್ಲಿಕೆಯಾಗಲಿದೆ.
ಬೆಂಗಳೂರಿನ ಕಾಡುಗೋಡಿ ಪ್ಲಾಂಟೇಷನ್ ಪ್ರದೇಶದಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದ ದಿನ್ನೂರು ಗ್ರಾಮದ ಹಿಂದುಳಿದ ಮತ್ತು ದಲಿತ ಕುಟುಂಬಗಳನ್ನು ಸರ್ಕಾರ ಏಕಾಏಕಿ ಎತ್ತಂಗಡಿ ಮಾಡಿ, "ಅರಣ್ಯ ಭೂಮಿ” ಎಂದು ಘೋಷಿಸಿದೆ. ರೈತರ ಅನುಮತಿ, ಪರಿಶೀಲನೆ ಹಾಗೂ ದಾಖಲಾತಿಗಳ ಪರಿಶೀಲನೆ ಮಾಡದೇ ನಿರ್ಧಾರ ಕೈಗೊಂಡಿರುವುದು ಕಾನೂನು ಬಾಹಿರ. ಇದು ಸಂವಿಧಾನದಲ್ಲಿ ಭದ್ರಪಡಿಸಿದ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಮೇಲೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂಬುದರ ಕುರಿತು ಚರ್ಚಿಸಕು ಅವಕಾಶ ನೀಡುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ನಿಲುವಳಿ ಸೂಚನೆ ಮಂಡಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲಿ 18ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿವೆ.
* ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ, 2025
* ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ಮಸೂದೆ, 2025
* ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣ) (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ, 2024