
ಮುಂಗಾರು ಅಧಿವೇಶನ | ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್; ಪ್ರಸ್ತಾಪ ಅಂಗೀಕರಿಸಿದ ಸದನ
ಶಾಸಕರಿಗೆ ಅನುದಾನ ಕೊರತೆ ವಿಚಾರವಾಗಿ ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ. ಇದಲ್ಲದೇ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಿವೆ.
ಇಂದಿನಿಂದ ಆರಂಭವಾದ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಅಗಲಿದ ಸಾಹಿತಿಗಳಾದ ಎಚ್. ಎಸ್.ವೆಂಕಟೇಶಮೂರ್ತಿ, ಜಿ.ಎಸ್.ಸಿದ್ದಲಿಂಗಯ್ಯ, ಪೋಪ್ ಫ್ರಾನ್ಸಿಸ್, ಹಿರಿಯ ರಾಜಕಾರಣಿ ಡಾ.ಎನ್.ತಿಪ್ಪಣ್ಣ ಸೇರಿ ಹಲವು ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಎಕೆ. ಪಾಟೀಲ್ ಅವರು ಅಮಾನತುಗೊಂಡ ಸದಸ್ಯರ ಸದಸ್ಯತ್ವ ಸ್ಥಿರೀಕರಣಗೊಳಿಸುವ ಪ್ರಸ್ತಾಪವನ್ನು ಸದನದಲ್ಲಿ ಮಂಡಿಸಿದರು.
ಬಿಜೆಪಿಯ ಪ್ರತಿಪಕ್ಷ ನಾಯಕರು ಸೇರಿ ಹಲವರು 18ಬಿಜೆಪಿ ಸದಸ್ಯರ ಅಮಾನತು ಆದೇಶ ಹಿಂಪಡೆಯುವಂತೆ ಕೋರಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು ಅಮಾನತು ಆದೇಶ ಹಿಂಪಡೆಯುವುದಾಗಿ ಅಧಿಕೃತವಾಗಿ ಪ್ರಕಟಿಸಿದರು.
ಈ ಹಿಂದೆ ಪ್ರತಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಮಾನತು ಆದೇಶ ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದರು. ಪ್ರತಿಪಕ್ಷ ಸದಸ್ಯರ ಮನವಿ ಮೇರೆಗೆ ಸಿದ್ದರಾಮಯ್ಯ ಅವರು ಸಭೆ ನಡೆಸಿ ಸದಸ್ಯತ್ವ ಅಮಾನತು ಆದೇಶ ಹಿಂಪಡೆಯಲು ನಿರ್ಧರಿಸಿದ್ದರು.
ಕಳೆದ ಬಜೆಟ್ ಅಧಿವೇಶನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವೇಳೆ 18ಸದಸ್ಯರ ಸಭಾಧ್ಯಕ್ಷರ ಪೀಠದ ಮುಂದೆ ಅಗೌರವಯುವಾಗಿ ನಡೆದುಕೊಂಡಿದ್ದರು. ಸದಕ್ಕೆ ಅಗೌರವ ತಂದ ಹಿನ್ನೆಲೆಯಲ್ಲಿ ಅವರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿತ್ತು. ಆದರೆ, ಪ್ರತಿಪಕ್ಷ ಸದಸ್ಯರ ಒತ್ತಾಯದ ಮೇರೆಗೆ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.
ಪ್ರಶೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಕಲಾಪದಲ್ಲಿ ಎತ್ತಿನ ಹೊಳೆಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ಯೋಜನೆ ವಿಳಂಬದ ಬಗ್ಗೆ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸರ್ಕಾರದ ವೈಫಲ್ಯದ ವಿರುದ್ದ ಮೈತ್ರಿ ಹೋರಾಟ
ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಜೆಡಿಎಸ್ ಮತ್ತು ಬಿಜೆಪಿ (NDA) ಮೈತ್ರಿಕೂಟ ಜಂಟಿಯಾಗಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಭಾನುವಾರ ಈ ಸಂಬಂಧ ನಡೆದ ಸಮನ್ವಯ ಸಭೆಯಲ್ಲಿ ಸುಮಾರು ಒಂದು ಗಂಟೆಗಳ ಸಮಾಲೋಚನೆ ನಡೆಸಲಾಯಿತು.
ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಸರ್ಕಾರ ಎರಡು ವರ್ಷಗಳಲ್ಲಿ ಭ್ರಷ್ಟಾಚಾರ, ದುರಾಡಳಿತದಲ್ಲಿ ತೊಡಗಿಸಿಕೊಂಡಿದೆ. ಯಾವ ವಿಚಾರಗಳನ್ನು ಚರ್ಚಿಸಬೇಕು ಎಂದು ಆಂತರಿಕ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಸಂಸತ್ ಕಲಾಪ ನಡೆಯುತ್ತಿರುವ ಕಾರಣ ಕುಮಾರಸ್ವಾಮಿ ಅವರು ಈ ಸಭೆಗೆ ಬಂದಿರಲಿಲ್ಲ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ; ರೈತರಿಗೆ ರಸಗೊಬ್ಬರ ವಿತರಣೆ ಮಾಡಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡ್ತಾರೆ. ಅಧಿವೇಶನದಲ್ಲಿ ಬೆಲೆ ಏರಿಕೆ, ಕಾಲ್ತುಳಿತ ಎಲ್ಲವನ್ನ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಶಾಸಕರ ಅನುದಾನದಲ್ಲೂ ತಾರತಮ್ಯ ಆಗಿದೆ. ಎಲ್ಲ ಇಲಾಖೆಗೂ ಅನುದಾನ ಕೊಟ್ಟಿಲ್ಲ. ಎಲ್ಲ ವಿಚಾರಗಳ ಬಗ್ಗೆ, ಸರ್ಕಾರದ ಲೋಪದೋಷದ ಬಗ್ಗೆ ಚರ್ಚೆ ಮಾಡ್ತೇವೆ. ಯುವನಿಧಿಗೆ 2.80 ಲಕ್ಷ ಜನ ಮಾತ್ರ ಅರ್ಜಿ ಹಾಕಿದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿತಂತ್ರ ಹೆಣೆದ ಸರ್ಕಾರ
ಹತ್ತು ಹಲವು ಅಸ್ತ್ರಗಳೊಂದಿಗೆ ಸರ್ಕಾರವನ್ನು ಕಟ್ಟಿ ಹಾಕಲು ಪ್ರತಿ ಪಕ್ಷಗಳು ರೂಪಿಸಿರುವ ತಂತ್ರಕ್ಕೆ ಸರ್ಕಾರ ಪ್ರತಿತಂತ್ರ ರೂಪಿಸಿದೆ.
ಸದನದಲ್ಲಿ ಪ್ರತಿ ಹಂತದಲ್ಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ, ಜೆಡಿಎಸ್ ಯೋಜನೆ ರೂಪಿಸಿವೆ. ಪ್ರಮುಖವಾಗಿ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಮುಜುಗರವನ್ನುಂಟು ಮಾಡಲು ತಯಾರಿ ನಡೆಸಿವೆ.
ಆದರೆ, ಪ್ರತಿಪಕ್ಷಗಳ ವಿರುದ್ದ ಒಟ್ಟಾಗಿ ಹೋರಾಟ ನಡೆಸಲು ತಯಾರಾಗಿರುವ ಸರ್ಕಾರ ಅಂಕಿ, ಅಂಶಗಳ ಸಮೇತ ದಾಖಲೆ ಒದಗಿಸಿ ಬಿಜೆಪಿ, ಜೆಡಿಎಸ್ ಆರೋಪಗಳಿಗೆ ಠಕ್ಕರ್ ನೀಡಲು ಮುಂದಾಗಲಿದೆ.
ವಿಪಕ್ಷಗಳ ಬಳಿ ಇರುವ ಅಸ್ತ್ರಗಳೇನು?
* ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ, ಪೋಲಿಸ್ ಅಧಿಕಾರಿಗಳ ಅಮಾನತು ಹಾಗೂ ಮರು ನೇಮಕ ದಂದ್ವ.
*ರಾಜ್ಯದಲ್ಲಿ ರಸಗೊಬ್ಬರ ಅಭಾವದಿಂದ ರೈತರ ಆಕ್ರೋಶ ವಿಚಾರ.
*ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಪ್ರಸ್ತಾಪ.
* ಪ್ರತಿಪಕ್ಷಗಳ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಅಗಿರುವ ತಾರತಮ್ಯ.
* ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿಗಣತಿ ವರದಿಯನ್ನು ಕೈಬಿಟ್ಟಿರುವುದು.
*ಎಸ್ಸಿಎಸ್ಪಿ, ಟಿಎಸ್ಪಿ ಹಣ ದುರ್ಬಳಕೆ ವಿಚಾರ.
* ಒಳಮೀಸಲಾತಿ ವಿಳಂಬ ಆಗಿರುವುದು.
*ಧರ್ಮಸ್ಥಳ ನಡೆಯುತ್ತಿರುವ ತನಿಖೆ ವಿಚಾರ, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ನಡೆಸಿದ ಸಭೆಗಳು.
*ಚುನಾವಣಾ ಅಕ್ರಮವೆಂದು ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡುವ ವಿಚಾರಗಳು ಪ್ರಮುಖವಾಗಿ ಚರ್ಚೆಗೆ ಬರಲಿವೆ.
ಸರ್ಕಾರದ ಬಳಿ ಇರುವ ಅಸ್ತ್ರಗಳೇನು?
* ಕೇಂದ್ರದ ಅನುದಾನ ತಾರತಮ್ಯ, ಮತಗಳ್ಳತನ ಹಾಗೂ ಮತಪಟ್ಟಿ ಹಗರಣ.
* ರೈತರ ಮೇಲೆ ಬಿಜೆಪಿ ಸರ್ಕಾರದ ಮೇಲೆ ನಡೆದಿರುವ ಗೋಲಿಬಾರ್ ವಿಚಾರ ಪ್ರಸ್ತಾಪ.
* ತಲಾದಾಯದಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಆಗಿದೆ ಎಂಬುದನ್ನು ಗಟ್ಟಿಯಾಗಿ ಹೇಳುವುದು.
* ಚಿಕ್ಕಬಳ್ಳಾಪುರದಲ್ಲಿ ಸಂಸದರ ಹೆಸರು ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಪ್ರಸ್ತಾಪಿಸುವುದು.
* ಗ್ಯಾರಂಟಿ ಸಾಧನೆಯನ್ನು ಪ್ರಸ್ತಾಪಿಸುವುದು. ಬಿಜೆಪಿ ಅವಧಿಯಲ್ಲಿ ಮಾಡಿದ್ದ ಯಡವಟ್ಟುಗಳನ್ನು ಪ್ರಸ್ತಾಪಿಸುವುದು.
Live Updates
- 11 Aug 2025 6:14 PM IST
ಸೆಪ್ಟಂಬರ್ನಲ್ಲಿ ನಡೆಯಬೇಕಿದ್ದ ಕ್ರಾಂತಿ ಆಗಸ್ಟ್ನಲ್ಲೇ ಪ್ರಾರಂಭ: ಆರ್. ಅಶೋಕ್
ಕಾಂಗ್ರೆಸ್ನಲ್ಲಿ ಸೆಪ್ಟಂಬರ್ ಕ್ರಾಂತಿ ನಡೆಯಲಿದೆ ಎಂಬ ಊಹಾಪೋಹಗಳಿದ್ದವು. ಆದರೆ ಸೆಪ್ಟಂಬರ್ನಲ್ಲಿ ನಡೆಯಬೇಕಿದ್ದ ಕ್ರಾಂತಿ ಆಗಸ್ಟ್ನಲ್ಲೇ ಆರಂಭವಾಗಿದೆ. ಕೆ.ಎನ್. ರಾಜಣ್ಣ ಸತ್ಯ ಹೇಳಿದ್ದಕ್ಕೆ ಹೈಕಮಾಂಡ್ ರಾಜೀನಾಮೆ ಪಡೆದಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
- 11 Aug 2025 5:34 PM IST
ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಕಾಮಗಾರಿ ಶೀಘ್ರ ಚಾಲನೆ
ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ ಮೂಲಕ ಶೀಘ್ರವೇ ಕುಡಿಯುವ ನೀರು ಪೂರೈಸಲಾಗುವುದು ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಶ್ರೀನಿವಾಸಪುರ ಶಾಸಕ ಜಿ.ಕೆ. ವೆಂಕಟಶಿವ ರೆಡ್ಡಿ ಅವರ ಗಮನಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಅವರು, ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಕುಡಿಯವ ನೀರು ಪೂರೈಸುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
- 11 Aug 2025 5:21 PM IST
ಉತ್ತರ ಕರ್ನಾಟಕಕ್ಕೆ ಹೊಸ ಬಸ್ ನೀಡುವಂತೆ ವಿಜಯಾನಂದ ಕಾಶಪ್ಪನವರ್ ಮನವಿ
ಉತ್ತರ ಕರ್ನಾಟಕಕ್ಕೆ ಹೊಸ ಬಸ್ ನೀಡುವಂತೆ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಮಾಡಿದರು. ವಿಧಾನಸಭೆ ಗಮನಸೆಳೆಯುವ ಸೂಚನೆ ಕಾಲಾವಧಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಹಳೇ ಬಸ್ಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಬಸ್ ನೀಡುವಂತೆ ತಿಳಿಸಿದರು.
- 11 Aug 2025 4:46 PM IST
ರಾಜ್ಯಪಾಲರಿಂದ ಕೆ.ಎನ್. ರಾಜಣ್ಣ ರಾಜೀನಾಮೆ ಅಂಗೀಕಾರ
ಕೆ.ಎನ್. ರಾಜಣ್ಣ ಅವರ ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅಂಗೀಕರಿಸಿ ರಾಜ್ಯಪಾಲರಿಗೆ ಕಳಿಸಿದ್ದರು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
- 11 Aug 2025 4:37 PM IST
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿಯಾದ ಕೆ.ಎನ್. ರಾಜಣ್ಣ, ಆರ್. ರಾಜೇಂದ್ರ
ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ ಕೆ.ಎನ್. ರಾಜಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ತುಮಕೂರಿನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್ನ್ನು ಕೆ.ಎನ್. ರಾಜಣ್ಣ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
- 11 Aug 2025 4:16 PM IST
ಸಚಿವ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ ಕೆ.ಎನ್. ರಾಜಣ್ಣ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯನ್ನು ಕೆ.ಎನ್. ರಾಜಣ್ಣ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಇಬ್ಬರು ನಾಯಕರ ಚರ್ಚೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
- 11 Aug 2025 4:07 PM IST
ರಾಜೀನಾಮೆ ಅಂಗೀಕರಿಸಿದ ಸಿಎಂ ಸಿದ್ದರಾಮಯ್ಯ
ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ರಾಜೀನಾಮೆಯನ್ನು ಸಿಎಂ ಸಿದ್ದರಾಮಯ್ಯ ಅಂಗೀಕಾರ ಮಾಡಿದ್ದಾರೆ. ನಂತರ ಈ ರಾಜೀನಾಮೆ ಅಂಗೀಕಾರ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಲಿದ್ದಾರೆ. ಅಂಗೀಕಾರಕ್ಕೂ ಮೊದಲು ರಾಜೀನಾಮೆ ಕುರಿತು ಸ್ಪಷ್ಟನೆ ನೀಡುವಂತೆ ಅಧಿವೇಶನದಲ್ಲಿ ಪ್ರತಿಪಕ್ಷಗಳ ಆಗ್ರಹಿಸಿದ್ದವು.
- 11 Aug 2025 3:55 PM IST
ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ವಿಚಾರ: ಸಿಎಂ ಸಿದ್ದರಾಮಯ್ಯ ಜತೆ ಡಿಸಿಎಂ ಚರ್ಚೆ
ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಕಚೇರಿಗೆ ತೆರಳಿ ಚರ್ಚೆ ನಡೆಸಿದ್ದಾರೆ. ಈ ಮೊದಲು ಗೃಹ ಸಚಿವ ಡಾ.ಜಿ . ಪರಮೇಶ್ವರ್ ಕೂಡ ಸಿಎಂ ಜತೆ ಚರ್ಚೆ ಮಾಡಿದ್ದರು. ಸಿಎಂ ಹಾಗೂ ಡಿಸಿಎಂ ಭೇಟಿ ಕುತೂಹಲ ಮೂಡಿಸಿದೆ.
- 11 Aug 2025 3:47 PM IST
ಸಿಎಂ ರಾಜೀನಾಮೆ ಬಗ್ಗೆ ಮಾಹಿತಿ ನೀಡಲಿದ್ದಾರೆ: ಕೆ.ಎನ್. ರಾಜಣ್ಣ
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ರಾಜೀನಾಮೆ ಕುರಿತು ಸ್ಪಷ್ಟನೆ ನೀಡುವಂತೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ. ಈ ಕುರಿತು ಸದನದಲ್ಲಿ ಮಾತನಾಡಿರುವ ಸಚಿವ ಕೆ.ಎನ್. ರಾಜಣ್ಣ, ರಾಜೀನಾಮೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ತಿಳಿಸಲಿದ್ದಾರೆ ಎಂದರು.
- 11 Aug 2025 3:35 PM IST
ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ಕುರಿತು ಸ್ಪಷ್ಟನೆ ನೀಡುವಂತೆ ಪ್ರತಿಪಕ್ಷಗಳ ಆಗ್ರಹ
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ರಾಜೀನಾಮೆ ಕುರಿತಂತೆ ಸ್ಪಷ್ಟನೆ ನೀಡುವಂತೆ ಪ್ರತಿಪಕ್ಷಗಳು ಅಧಿವೇಶನದಲ್ಲಿ ಆಗ್ರಹಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಭಾಧ್ಯಕ್ಷ ಯು.ಟಿ. ಖಾದರ್, ರಾಜೀನಾಮೆ ಕುರಿತು ಸಿಎಂ ಸಿದ್ದರಾಮಯ್ಯ ಸದನಕ್ಕೆ ಆಗಮಿಸಿ ಮಾಹಿತಿ ನೀಡಲಿದ್ದಾರೆ ಎಂದರು.