ಸೇವಾ ಮನೋಭಾವ ಇಲ್ಲದವರು ವೈದ್ಯರಾಗಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಪಾದನೆ

ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ ವೈದ್ಯರಿಗೆ ನಗರದಲ್ಲಿ ಕೆಲಸ ಮಾಡುವುದು ಸುಲಭ ಎಂದರು. ಹಳ್ಳಿಗಳಲ್ಲಿ ಸೀಮಿತ ಸೌಲಭ್ಯಗಳ ನಡುವೆಯೂ ವೈದ್ಯರು ಸ್ವತಃ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಿಸಿಎಂ ತಿಳಿಸಿದರು.

Update: 2025-12-13 14:25 GMT

ಡಿಸಿಎಂ ಡಿ.ಕೆ. ಶಿವಕುಮಾರ್‌ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.

Click the Play button to listen to article

"ಮಾನವ ಧರ್ಮದ ಸೇವೆ ಮಾಡಬೇಕು ಎಂಬ ಬದ್ಧತೆ ಇರುವವರು ಮಾತ್ರ ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸೇವಾ ಮನೋಭಾವ ಇಲ್ಲದವರು ವೈದ್ಯರಾಗಲು ಸಾಧ್ಯವೇ ಇಲ್ಲ," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜಯನಗರದಲ್ಲಿರುವ ಯುನೈಟೆಡ್ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು, ಒಂದು ಕೋಟಿ ರೂ.ವರೆಗಿನ 'ತುರ್ತು ಚಿಕಿತ್ಸೆ ಯೋಜನೆ'ಗೆ ಚಾಲನೆ ನೀಡಿ ಅವರು ಮಾತನಾಡಿದರು. ವೈದ್ಯ ವೃತ್ತಿಯಲ್ಲಿ ನಿಸ್ವಾರ್ಥ ಮನೋಭಾವ ಅತ್ಯಗತ್ಯ ಎಂದು ಹೇಳಿದ ಅವರು, ಈ ಕ್ಷೇತ್ರದಲ್ಲಿ ಅನೇಕ ಸವಾಲುಗಳಿದ್ದರೂ, ಈಗ ತಂತ್ರಜ್ಞಾನ ಮುಂದುವರಿದಿರುವುದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸಾಕಷ್ಟು ನೆರವಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಮತ್ತು ನಗರ ಪ್ರದೇಶದ ವೈದ್ಯರ ಕಾರ್ಯವೈಖರಿಯನ್ನು ಹೋಲಿಸಿದ ಶಿವಕುಮಾರ್, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ ವೈದ್ಯರಿಗೆ ನಗರದಲ್ಲಿ ಕೆಲಸ ಮಾಡುವುದು ಸುಲಭ ಎಂದರು. ಹಳ್ಳಿಗಳಲ್ಲಿ ಸೀಮಿತ ಸೌಲಭ್ಯಗಳ ನಡುವೆಯೂ ವೈದ್ಯರು ಸ್ವತಃ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ನಗರಗಳಲ್ಲಿ ಕಿರಿಯ ವೈದ್ಯರು ಹಿರಿಯರ ಸಲಹೆ ಪಡೆದು ಕೆಲಸ ಮಾಡುವ ಅವಕಾಶವಿರುತ್ತದೆ ಎಂದು ವಿಶ್ಲೇಷಿಸಿದರು. ತಾವು ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ ಅನುಭವ ಮತ್ತು ತಮ್ಮ ಮನೆಯಲ್ಲೇ ಅರ್ಧ ಡಜನ್ ವೈದ್ಯರಿರುವುದರಿಂದ ಈ ಕ್ಷೇತ್ರದ ಆಳ-ಅಗಲಗಳ ಅರಿವಿದೆ ಎಂದು ಅವರು ಸ್ಮರಿಸಿದರು.

ಯುನೈಟೆಡ್ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಕ್ರಮ್ ಅವರ ಹೊಸ ಸಾಹಸವನ್ನು ಶ್ಲಾಘಿಸಿದ ಡಿಸಿಎಂ, ದೂರದ ಕಲಬುರಗಿಯಿಂದ ಬಂದು ಇಲ್ಲಿ ಜನಪರ ಸೇವೆ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು. ಕೇವಲ 10 ರೂಪಾಯಿಗಳಿಗೆ 1 ಕೋಟಿ ರೂ.ವರೆಗಿನ ಆರೋಗ್ಯ ವಿಮೆ ನೀಡುವ ಅವರ ಯೋಜನೆ ಜನರಿಗೆ ತಲುಪಲಿ ಎಂದು ಹಾರೈಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಶಸ್ವಿನಿ ಸೇರಿದಂತೆ ಹಲವು ವಿಮಾ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕೆಲವು ಯಶಸ್ವಿಯಾಗಿವೆ ಮತ್ತು ಕೆಲವು ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಆಸ್ಪತ್ರೆಗಳ ಯಶಸ್ಸಿಗೆ ರೋಗಿಗಳ ನಂಬಿಕೆಯೇ ಬಂಡವಾಳ ಎಂದು ಹೇಳಿದ ಶಿವಕುಮಾರ್, ರೋಗಿಗಳು ಆಸ್ಪತ್ರೆಗೆ ಬರುವಾಗ 'ಇಲ್ಲಿ ಹೋದರೆ ಗುಣವಾಗುತ್ತೇನೆ' ಎಂಬ ವಿಶ್ವಾಸ ಮೂಡಬೇಕು ಎಂದರು. ವೈದ್ಯರ ಸಾಂತ್ವನದ ಮಾತು, ಕೈಗುಣ ಮತ್ತು ಸಿಬ್ಬಂದಿಯ ವರ್ತನೆ ಎಲ್ಲವೂ ಸೇರಿದಾಗ ಮಾತ್ರ ಚಿಕಿತ್ಸೆ ಪರಿಪೂರ್ಣವಾಗುತ್ತದೆ ಎಂದು ಹೇಳಿದರು. 'ಯುನೈಟೆಡ್' ಎಂದರೆ ಕನ್ನಡದಲ್ಲಿ ಒಗ್ಗಟ್ಟು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ, ಈ ಆಸ್ಪತ್ರೆ ಜನರ ಆರೋಗ್ಯ ರಕ್ಷಣೆ ಮಾಡಲಿ ಎಂದು ಶುಭ ಹಾರೈಸಿದರು. ಕೊನೆಯಲ್ಲಿ, "ಶುಭಂ ಕರೋತಿ ಕಲ್ಯಾಣಂ, ಆರೋಗ್ಯಂ ಧನಸಂಪದಂ" ಎಂಬ ಶ್ಲೋಕದ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.

Tags:    

Similar News