ಕಾಗಿನೆಲೆ ಪೀಠ ಸಿದ್ದರಾಮಯ್ಯನವರದ್ದಲ್ಲ, ರಾಜಕೀಯ ಮಾಡಿದರೆ ತಲೆದಂಡ: ಶ್ರೀಗಳಿಗೆ ಎಚ್. ವಿಶ್ವನಾಥ್ ಎಚ್ಚರಿಕೆ

ಈ ಹಿಂದೆ ಕುರುಬರನ್ನು ಎಸ್‌ಟಿಗೆ ಸೇರಿಸಬೇಕೆಂದು 350 ಕಿ.ಮೀ ಪಾದಯಾತ್ರೆ ಮಾಡಿದ್ದೆವು. ಆಗ ಸಿದ್ದರಾಮಯ್ಯನವರು ವಿರೋಧಿಸಿದ್ದರು. ಇದೀಗ ತಮ್ಮನ್ನು ರಕ್ಷಿಸಿಕೊಳ್ಳಲು ಸಮುದಾಯವನ್ನು ಗುರಾಣಿಯಂತೆ ಬಳಸುತ್ತಿದ್ದಾರೆ ಎಂದು ಎಚ್‌. ವಿಶ್ವನಾಥ್‌ ಟೀಕಿಸಿದರು.;

Update: 2025-09-16 10:37 GMT

ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಕಾಗಿನೆಲೆ ಶ್ರೀ ನಿರಂಜನನಾಂದಪುರಿ ಸ್ವಾಮೀಜಿ ಹಾಗೂ ಸಿಎಂ ಸಿದ್ದರಾಮಯ್ಯ

Click the Play button to listen to article

"ಕಾಗಿನೆಲೆ ಗುರುಪೀಠವು ಇಡೀ ಕುರುಬ ಸಮಾಜದ ಪೀಠವೇ ಹೊರತು, ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಖಾಸಗಿ ಆಸ್ತಿಯಲ್ಲ. ಶ್ರೀಗಳು ಸಿದ್ದರಾಮಯ್ಯನವರ ಪರವಾಗಿ ಬೀದಿಗಿಳಿದು ರಾಜಕೀಯ ಮಾಡಲು ಬಂದರೆ ನಿಮ್ಮ ತಲೆದಂಡವಾಗಲಿದೆ," ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಕಾಗಿನೆಲೆ ಶ್ರೀಗಳಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯನವರ ಕಾಲಾಳೂ ಅಲ್ಲ, ಕಾಂಗ್ರೆಸ್‌ನ ಜೀತದಾಳವೂ ಅಲ್ಲ. ಈ ಕಾಗಿನೆಲೆ ಪೀಠವನ್ನು ಸ್ಥಾಪಿಸಿದ್ದೇ ನಾನು, ಅದರ ಮೊದಲ ಪೀಠಾಧ್ಯಕ್ಷನೂ ನಾನೇ," ಎಂದು ಗುಡುಗಿದರು.

ಕುರುಬರ ಎಸ್‌ಟಿ ಮೀಸಲಾತಿ: ಸರ್ಕಾರದ ವಿರುದ್ಧ ವಾಗ್ದಾಳಿ

ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ವಿಚಾರವಾಗಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಶ್ವನಾಥ್, "ಈ ಹಿಂದೆ ನಾವು ಕುರುಬರನ್ನು ಎಸ್‌ಟಿಗೆ ಸೇರಿಸಬೇಕೆಂದು 350 ಕಿ.ಮೀ ಪಾದಯಾತ್ರೆ ಮಾಡಿದ್ದೆವು, ಆದರೆ ಆಗ ಸಿದ್ದರಾಮಯ್ಯನವರೇ ಅದನ್ನು ವಿರೋಧಿಸಿದ್ದರು. ಈಗ ತಮ್ಮನ್ನು ರಕ್ಷಿಸಿಕೊಳ್ಳಲು ಇಡೀ ಸಮುದಾಯವನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ," ಎಂದು ಟೀಕಿಸಿದರು.

"ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದಿದ್ದರೆ, ಎಸ್‌ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಕಳುಹಿಸಬೇಕಿತ್ತು. ಆದರೆ, ಉದ್ದೇಶಪೂರ್ವಕವಾಗಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ," ಎಂದು ಅವರು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ

"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಇತರ ನಾಯಕರನ್ನು ಬೆಳೆಯಲು ಬಿಡಲಿಲ್ಲ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಅವರು, ಆ ವರ್ಗಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ, ಅವರಿಗಾಗಿ ಹೋರಾಟವನ್ನೂ ಮಾಡಲಿಲ್ಲ," ಎಂದು ವಿಶ್ವನಾಥ್ ಆರೋಪಿಸಿದರು.

"ನಾಯಕ ಸಮುದಾಯವನ್ನು ಎಸ್‌ಟಿಗೆ ಸೇರಿಸಿದ್ದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ನಮ್ಮೆಲ್ಲರ ಒತ್ತಾಯದ ಮೇರೆಗೆ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿ, ಕುಲಶಾಸ್ತ್ರೀಯ ಅಧ್ಯಯನವನ್ನೂ ಮಾಡಿಸಿದ್ದರು. ಆದರೆ, ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರವು ಈ ಬಗ್ಗೆ ಕಾನೂನು ಪ್ರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ," ಎಂದು ಅವರು ಕಿಡಿಕಾರಿದರು. 

Tags:    

Similar News