ಭಾರತ-ಪಾಕ್‌ ಸಂಘರ್ಷ ನಿಲ್ಲಿಸಿದ್ದು ನಾನೇ; ಟ್ರಂಪ್‌ ಪುನರುಚ್ಚಾರ

"ನಾವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ನಿಲ್ಲಿಸಿದೆವು. ಇಲ್ಲದೇ ಹೋಗಿದ್ದರೆ ಅದು ಪರಮಾಣು ವಿಪತ್ತಾಗಿ ಪರಿಣಮಿಸುತ್ತಿತ್ತುʼʼ ಎಂದು ಟ್ರಂಪ್ ಹೇಳಿದ್ದಾರೆ.;

Update: 2025-05-31 09:17 GMT

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉಲ್ಬಣಿಸಿದ್ದ ಸಂಘರ್ಷವನ್ನು ತಾವೇ ನಿಲ್ಲಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಪರಸ್ಪರ ಕಾದಾಡುವ ರಾಷ್ಟ್ರಗಳೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂಬ ಷರತ್ತಿಗೆ ಎರಡೂ ರಾಷ್ಟ್ರಗಳು ಒಪ್ಪಿ ಕದನ ವಿರಾಮ ಘೋಷಿಸಿದವು ಎಂಬ ಅವರ ಹೇಳಿಕೆ ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.  

"ನಾವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ನಿಲ್ಲಿಸಿದೆವು. ಇಲ್ಲದೇ ಹೋಗಿದ್ದರೆ ಅದು ಪರಮಾಣು ವಿಪತ್ತಾಗಿ ಪರಿಣಮಿಸುತ್ತಿತ್ತು" ಎಂದು ಟ್ರಂಪ್ ಅವರು ಓವಲ್ ಕಚೇರಿಯಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ಭಾರತ- ಪಾಕ್ ಮಹಾನ್ ನಾಯಕರನ್ನು ಹೊಂದಿವೆ. ಉಭಯ ದೇಶಗಳ ನಾಯಕರ ಜೊತೆ ವ್ಯಾಪಾರದ ಬಗ್ಗೆ ಮಾತನಾಡಿದ್ದೆ. ಪರಸ್ಪರ ಕಾದಾಟದಲ್ಲಿ ತೊಡಗುವ ಹಾಗೂ ಸಂಭಾವ್ಯ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಜನರೊಂದಿಗೆ ವ್ಯಾಪಾರ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದೆ. ಭಾರತ ಮತ್ತು ಪಾಕಿಸ್ತಾನದ ನಾಯಕರು ನನ್ನ ಮಾತು ಅರ್ಥಮಾಡಿಕೊಂಡರು. ಕದನ ವಿರಾಮ ಘೋಷಣೆಗೆ ಒಪ್ಪಿಕೊಂಡರು ಎಂದು ಟ್ರಂಪ್‌ ಹೇಳಿದ್ದಾರೆ.

ವಿಶ್ವದ ಇತರೆ ದೇಶಗಳ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುತ್ತೇವೆ. ವಿಶ್ವದಲ್ಲಿ ನಾವು ಎಲ್ಲರಿಗಿಂತ ಶ್ರೇಷ್ಠ ಮಿಲಿಟರಿ ಹೊಂದಿದ್ದೇವೆ. ಶ್ರೇಷ್ಠ ನಾಯಕರನ್ನೂ ಹೊಂದಿದ್ದೇವೆ. ಎಲ್ಲರಿಗಿಂತ ನಾವೇ ಉತ್ತಮವಾಗಿ ಹೋರಾಡಬಹುದು ಎಂದು ಹೇಳಿದ್ದಾರೆ.

ಏಪ್ರಿಲ್ 22 ರಂದು ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಹತ್ಯೆ ಮಾಡಿದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಇದಾದ ಬಳಿಕ ಗಡಿಯಲ್ಲಿ ನಾಲ್ಕು ದಿನಗಳ ಉಭಯ ರಾಷ್ಟ್ರಗಳ ಮಧ್ಯೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆದಿತ್ತು.

ಮೇ 10 ರಂದು ಪಾಕಿಸ್ತಾನ ಡಿಜಿಎಂಒ ಅವರು ಕದನ ವಿರಾಮ ಜಾರಿಗೆ ಒತ್ತಾಯಿಸಿದ ಬಳಿಕ ಭಾರತ ಕೂಡ ಒಪ್ಪಿಗೆ ಸೂಚಿಸಿತ್ತು. ತಕ್ಷಣದಿಂದ ಜಾರಿಗೆ ಬರುವಂತೆ ಭೂಮಿ, ವಾಯು ಮತ್ತು ಸಮುದ್ರದ ಮೇಲಿನ ಎಲ್ಲಾ ದಾಳಿಯನ್ನು ಸ್ಥಗಿತಗೊಳಿಸಲು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಾತುಕತೆ ವೇಳೆ ಪರಸ್ಪರ ಒಪ್ಪಿಕೊಂಡಿದ್ದರು. 

ಕೇಂದ್ರ ಸರ್ಕಾರ ಕೂಡ ಕದನ ವಿರಾಮಕ್ಕೆ ಸ್ಪಷ್ಟನೆ ನೀಡಿ, ನಮ್ಮ ಸಂಘರ್ಷ ನಿಯಂತ್ರಣದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವಿಲ್ಲ ಎಂದು ಹೇಳಿತ್ತು. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತನ್ನಿಂದಲೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಶಮನವಾಯಿತು ಎಂದು ಪದೇ ಪದೇ ಹೇಳುವ ಮೂಲಕ ಭಾರತದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದರು.

Tags:    

Similar News